ಭಾರತ್ ಜೋಡೋ ನಡುವೆ ಕಾಂಗ್ರೆಸ್ಗೆ ನ್ಯಾಷನಲ್ ಹೆರಾಲ್ಡ್ ಸಂಕಷ್ಟ, ಹಿರಿಯ ನಾಯಕರಿಗೆ ಇಡಿ ಸಮನ್ಸ್!
ಭಾರತ್ ಜೋಡೋ ಯಾತ್ರೆಯಲ್ಲಿ ಸಕ್ರಿಯರಾಗಿರುವ ಕಾಂಗ್ರೆಸ್ಗೆ ಇಡೀ ಮತ್ತೊಂದು ಶಾಕ್ ನೀಡಿದೆ. ಕಾಂಗ್ರೆಸ್ ಹಲವು ಹಿರಿಯ ನಾಯಕರಿಗೆ ನೋಟಿಸ್ ನೀಡಿದೆ. ಇತ್ತ ಮಾಜಿ ಸಚಿವೆ, ಕಾಂಗ್ರೆಸ್ ನಾಯಕಿ ಗೀತಾ ರೆಡ್ಡಿ ವಿಚಾರಣೆಗೆ ಹಾಜರಾಗಿದ್ದಾರೆ.
ನವದೆಹಲಿ(ಅ.06): ಭಾರತ್ ಜೋಡೋ ಯಾತ್ರೆ ಮೂಲಕ ಕಾಂಗ್ರೆಸ್ ದೇಶದಲ್ಲಿ ಹೊಸ ರಾಜಕೀಯ ಅಲೆ ಎಬ್ಬಿಸುವ ಯತ್ನದಲ್ಲಿದೆ. ಇದರ ನಡುವೆ ಇಡಿ ಅಧಿಕಾರಿಗಳು ಕಾಂಗ್ರೆಸ್ ಹಿರಿಯ ನಾಯಕರಿಗೆ ಸಮನ್ಸ್ ನೀಡಿದ್ದಾರೆ. ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಐವರು ಹಿರಿಯ ನಾಯಕರಿಗೆ ಇಡಿ ನೋಟಿಸ್ ನೀಡಿದೆ. ಇದರಲ್ಲಿ ಮಾಜಿ ಸಚಿವೆ ಗೀತಾ ರೆಡ್ಡಿ ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಮಾಜಿ ಸಚಿವ ಅಂಜನ್ ಕುಮಾರ್ ಯಾದವ್, ಗೀತಾ ರೆಡ್ಡಿ, ಮೊಹಮ್ಮದ್ ಆಲಿ ಶಬ್ಬೀರ್, ಪಿ ಸುದರ್ಶನ್ ರೆಡ್ಡಿ ಹಾಗೂ ಗಾಲಿ ಅನಿಲ್ ಕುಮಾರ್ಗೆ ಇಡಿ ನೋಟಿಸ್ ನೀಡಿದೆ. ನ್ಯಾಷನಲ್ ಹೆರಾಲ್ಡ್ ಮೂಲಕ ಯಂಗ್ ಇಂಡಿಯನ್ ಪ್ರವೈಟ್ ಲಿಮಿಟೆಡ್ಗೆ ಹಣ ವರ್ಗಾವಣೆ ಮಾಡಿರುವ ಕುರಿತು ವಿವರಣೆ ನೀಡುವಂತೆ ಇಡಿ ಕೇಳಿದೆ.
ಇಡಿ ನೋಟಿಸ್ ಪ್ರಕಾರ ಅಂಜನ್ ಕುಮಾರ್ ಯಾದವ್ ಅಕ್ಚೋಬರ್ 4 ರಂದು ಇಡಿ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಆರೋಗ್ಯ ಸಮಸ್ಯೆ ಕಾರಣ ವಿಚಾರಣೆಯಿಂದ ವಿನಾಯಿತಿ ಪಡೆದಿದ್ದಾರೆ. ಶೀಘ್ರದಲ್ಲೇ ಇಡಿ ವಿಚಾರಣೆಗೆ ಹಾಜರಾಗಲಿದ್ದಾರೆ. ಕಾಂಗ್ರೆಸ್ ಪ್ರಮುಖ ನಾಯಕರು ರಾಹುಲ್ ಗಾಂಧಿ ಜೊತೆ ಭಾರತ್ ಜೋಡೋ ಯಾತ್ರೆಯಲ್ಲಿ ಬ್ಯುಸಿಯಾಗಿದ್ದಾರೆ.
ಕಾಂಗ್ರೆಸ್ಗೆ ಮತ್ತೊಂದು ಶಾಕ್, ಮೂವರು ನಾಯಕರಿಗೆ ಇಡಿ ಸಮನ್ಸ್, ಖರ್ಗೆಗೂ ಎದುರಾಯ್ತು ಸಂಕಷ್ಟ!
ಡಿಕೆಶಿಗೆ ಇ.ಡಿ. ಸಮನ್ಸ್
ಆದಾಯ ಮೀರಿದ ಆಸ್ತಿ ಸೇರಿ ವಿವಿಧ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ), ಸಿಬಿಐ ವಿಚಾರಣೆ ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ಮತ್ತೊಂದು ಸಂಕಷ್ಟಎದುರಾಗಿದೆ. ಇದೀಗ ಕಾಂಗ್ರೆಸ್ ಮಾಲೀಕತ್ವದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಅ.7ರಂದು ವಿಚಾರಣೆ ಹಾಜರಾಗುವಂತೆ ಡಿ.ಕೆ.ಶಿವಕುಮಾರ್ ಮತ್ತು ಸಂಸದರೂ ಆಗಿರುವ ಸೋದರ ಡಿ.ಕೆ.ಸುರೇಶ್ ಅವರಿಗೆ ಇ.ಡಿ.ನೋಟಿಸ್ ಜಾರಿ ಮಾಡಿದೆ.
ವಿನಾಯ್ತಿ ಕೇಳಿದ್ದೇನೆ: ಇ.ಡಿ.ನೋಟಿಸ್ ನೀಡಿರುವ ವಿಚಾರ ಖಚಿತಪಡಿಸಿರುವ ಡಿ.ಕೆ.ಶಿವಕುಮಾರ್, ಅ.7ರ ಬದಲು ಬೇರೆ ದಿನ ವಿಚಾರಣೆಗೆ ಹಾಜರಾಗಲು ಅವಕಾಶ ನೀಡುವಂತೆ ಇ-ಮೇಲ್ ಮೂಲಕ ಮನವಿ ಮಾಡಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.ಸೆ.19ರಂದೂ ವಿಚಾರಣೆ: ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿ ಸೆ.19ರಂದು ದೆಹಲಿಗೆ ಕರೆಸಿಕೊಂಡಿದ್ದ ಇ.ಡಿ.ಯು ನ್ಯಾಷನಲ್ ಹೆರಾಲ್ಡ್ಗೆ ಸಂಬಂಧಿಸಿಯೂ ಪ್ರಶ್ನೆಗಳನ್ನು ಕೇಳಿತ್ತು. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮಾಲೀಕತ್ವ ಹೊಂದಿರುವ ಯಂಗ್ ಇಂಡಿಯಾ ಟ್ರಸ್ಟ್ಗೆ ಡಿ.ಕೆ.ಶಿವಕುಮಾರ್ ಸೋದರರು ನೀಡಿದ್ದ ಚೆಕ್ಗೆ ಸಂಬಂಧಿಸಿ ಪ್ರಶ್ನೆಗಳನ್ನು ಕೇಳಿದ್ದರು. ಯಾರಾರಯರು ಟ್ರಸ್ಟ್ನಲ್ಲಿದ್ದಾರೆಂದು ಪ್ರಶ್ನಿಸಿದ್ದರು. ಆ ಬಗ್ಗೆ ಈಗ ಯಾವುದೇ ನೆನಪಿಲ್ಲ ಎಂದು ಉತ್ತರಿಸಿದ್ದೇನೆ ಎಂದು ಸ್ವತಃ ಡಿ.ಕೆ.ಶಿವಕುಮಾರ್ ಅವರೇ ವಿಚಾರಣೆ ಬಳಿಕ ಹೇಳಿಕೊಂಡಿದ್ದರು.
80 ದಾಟಿರುವ ಖರ್ಗೆಗೆ ಯಾರು ದುಃಖಿಸುವವರೇ ಇಲ್ಲ: ವ್ಯಂಗ್ಯವಾಡಿದ ಬಿಜೆಪಿ
ಮಧ್ಯಪ್ರದೇಶದಲ್ಲೂ ತನಿಖೆ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ನಿರ್ದೇಶಕರಾಗಿರುವ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ನಡೆಸುತ್ತಿರುವಾಗಲೇ, ಮಧ್ಯಪ್ರದೇಶ ಸರ್ಕಾರ ಕೂಡ ತನಿಖೆಗೆ ಆದೇಶಿಸಿದೆ. ಭೋಪಾಲ್ನ ಪ್ರೆಸ್ ಕಾಂಪ್ಲೆಕ್ಸ್ನಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಜಾಗ ಮಂಜೂರು ಮಾಡಲಾಗಿತ್ತು. ಆದರೆ ನಿಯಮ ಬಾಹಿರವಾಗಿ ಅಲ್ಲಿ ವಾಣಿಜ್ಯ ಕಟ್ಟಡಗಳು ತಲೆ ಎತ್ತಿವೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸುವುದಾಗಿ ಮಧ್ಯಪ್ರದೇಶದ ನಗರಾಭಿವೃದ್ಧಿ ಸಚಿವ ಭೂಪೇಂದ್ರ ಸಿಂಗ್ ಅವರು ಶುಕ್ರವಾರ ಟ್ವೀಟ್ ಮಾಡಿದ್ದಾರೆ.