Asianet Suvarna News Asianet Suvarna News

KK Shailaja: ಕೇರಳ ಮಾಜಿ ಆರೋಗ್ಯ ಸಚಿವೆಗೆ ರಾಮನ್‌ ಮ್ಯಾಗ್ಸೆಸೆ ಪ್ರಶಸ್ತಿ ಸ್ವೀಕಾರ ಬೇಡವೆಂದ ಸಿಪಿಐಎಂ..!

ಶೈಲಜಾ ಅವರು ಪ್ರಶಸ್ತಿ ಸ್ವೀಕರಿಸುವ ಬಗ್ಗೆ ಸಿಪಿಐಎಂ ನಾಯಕತ್ವದೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಆದರೆ, ನಾಯಕತ್ವವು ಪ್ರಶಸ್ತಿಯ ವಿವಿಧ ಅಂಶಗಳನ್ನು ನೋಡಿತು ಮತ್ತು ಅದನ್ನು ಸ್ವೀಕರಿಸುವುದನ್ನು ವಿರೋಧಿಸಿತು ಎಂದು ತಿಳಿದುಬಂದಿದೆ.

communist party of india marxist scuttled kerala ex health minister kk shailaja to take ramon magsaysay award ash
Author
First Published Sep 4, 2022, 1:32 PM IST

2 ದಶಕಗಳ ಹಿಂದೆ ಹಿರಿಯ ನಾಯಕ ಜ್ಯೋತಿ ಬಸು ಅವರಿಗೆ ಪ್ರಧಾನಿ ಹುದ್ದೆ ತಿರಸ್ಕರಿಸಿದ್ದ ಸಿಪಿಐಎಂ ಈಗ ತನ್ನ  ಎರಡನೇ "ಐತಿಹಾಸಿಕ ಪ್ರಮಾದ" ಎಸಗಿದೆ ಎನ್ನಲಾಗುತ್ತಿದೆ. ಕೇರಳದ ಮಾಜಿ ಆರೋಗ್ಯ ಸಚಿವೆ ಮತ್ತು ಹಿರಿಯ ಸಿಪಿಐಎಂ ನಾಯಕಿ ಕೆ.ಕೆ ಶೈಲಜಾ ಅವರು 2022 ರ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು (Ramon Magsayay Award) ಗೆಲ್ಲುವ ಅವಕಾಶ ಕಳೆದುಕೊಂಡಿದ್ದು, ಇದಕ್ಕೆ ಭಾರತೀಯ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ) [Communist Party of India (Marxist)] ಕಾರಣ ಎನ್ನಲಾಗುತ್ತಿದೆ. ಕೇರಳ ರಾಜ್ಯದಲ್ಲಿ ನಿಫಾ (Nipah) ಮತ್ತು ಕೋವಿಡ್ -19 (COVID - 19) ಸಾಂಕ್ರಾಮಿಕ ನಿಯಂತ್ರಿಸಲು ಮುಂಚೂಣಿಯಲ್ಲಿರುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಖಾತ್ರಿಪಡಿಸುವ ಮತ್ತು ಪರಿಣಾಮಕಾರಿಯಾಗಿ ಮುನ್ನಡೆಸುವ ನಿಟ್ಟಿನಲ್ಲಿ ಮಾಜಿ ಆರೋಗ್ಯ ಸಚಿವೆ (Ex Health Minister) ಶೈಲಜಾ ಅವರ ಬದ್ಧತೆ ಮತ್ತು ಸೇವೆಗೆ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ಹಿನ್ನೆಲೆ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರತಿಷ್ಠಾನವು ಶೈಲಜಾ ಅವರನ್ನು 64 ನೇ ಮ್ಯಾಗ್ಸೆಸೆ ಪ್ರಶಸ್ತಿ ನೀಡಲು ಮುಂದಾಗಿತ್ತು ಎಂದು ತಿಳಿದು ಬಂದಿದೆ. 
 
ಕೇರಳ ತನ್ನ ಅಧಿಕಾರಾವಧಿಯಲ್ಲಿ ನಿಫಾ ಮತ್ತು ಕೋವಿಡ್ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ್ದಕ್ಕಾಗಿ ಜಾಗತಿಕ ಮನ್ನಣೆ ಗಳಿಸಿತ್ತು. ಮಾಜಿ ಆರೋಗ್ಯ ಸಚಿವೆ ಶೈಲಜಾ ಅವರು ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು. ಇದು ಭಾರತದ ದಕ್ಷಿಣ ತುದಿಯಲ್ಲಿರುವ ಒಂದು ಸಣ್ಣ ರಾಜ್ಯವು ವೈಜ್ಞಾನಿಕ ರೀತಿಯಲ್ಲಿ ಸಾಂಕ್ರಾಮಿಕ ರೋಗವನ್ನು ಹೇಗೆ ಸಮರ್ಥವಾಗಿ ಎದುರಿಸುತ್ತಿದೆ ಎಂಬುದಕ್ಕೆ ಹೆಸರುವಾಸಿಯಾಗಿತ್ತು. ಪ್ರಶಸ್ತಿಯ ಸಾರ್ವಜನಿಕ ಘೋಷಣೆಯನ್ನು ಈ ವರ್ಷದ ಆಗಸ್ಟ್ ಅಂತ್ಯದೊಳಗೆ ಮಾಡಬೇಕಿತ್ತು. ಆಕೆ ನಾಮನಿರ್ದೇಶನಗೊಂಡ ನಂತರ ಪ್ರತಿಷ್ಠಾನವು ದೇಶದ ಕೆಲವು ಪ್ರಮುಖ ವ್ಯಕ್ತಿಗಳೊಂದಿಗೆ ಪರಿಶೀಲನೆಯನ್ನೂ ನಡೆಸಿತ್ತು.

ಶೈಲಜಾ ಟೀಚರ್‌ಗೆ ಮಂತ್ರಿಗಿರಿ ತಪ್ಪಲು ಇದೇ ದೊಡ್ಡ ಕಾರಣ!
 
ಫೌಂಡೇಶನ್ ಮೊದಲು ಆನ್‌ಲೈನ್ ಸಂವಾದದ ಸಮಯದಲ್ಲಿ ಶೈಲಜಾ ಅವರೊಂದಿಗೆ ಪರಿಶೀಲಿಸಿತು ಮತ್ತು ನಂತರ ಜುಲೈ ಅಂತ್ಯದ ವೇಳೆಗೆ ಪ್ರಶಸ್ತಿ ನೀಡುವ ಬಗ್ಗೆ ಅವರಿಗೆ ತಿಳಿಸಿತು. ಮಾಜಿ ಸಚಿವರಿಗೆ ತನ್ನ ಇ-ಮೇಲ್‌ನಲ್ಲಿ, ಅಂತಾರಾಷ್ಟ್ರೀಯ ಗೌರವಕ್ಕೆ ಆಯ್ಕೆಯಾಗಿರುವ ಬಗ್ಗೆ ತಿಳಿಸುತ್ತಾ, ಪ್ರತಿಷ್ಠಾನವು ಪ್ರಶಸ್ತಿಯನ್ನು ಸ್ವೀಕರಿಸಲು ತನ್ನ ಇಚ್ಛೆಯನ್ನು ಲಿಖಿತವಾಗಿ ತಿಳಿಸುವಂತೆ ಕೇಳಿಕೊಂಡಿದೆ. ಹಾಗೂ, ಪ್ರತಿಷ್ಠಾನವು ಸೆಪ್ಟೆಂಬರ್‌ನಿಂದ ನವೆಂಬರ್ 2022 ರವರೆಗೆ ಇತರ ಪ್ರಶಸ್ತಿ-ಸಂಬಂಧಿತ ಚಟುವಟಿಕೆಗಳನ್ನು ಸಹ ನಿಗದಿಪಡಿಸಿದೆ.
 
ಈ ಬಗ್ಗೆ, ಸಿಪಿಐಎಂ ಕೇಂದ್ರ ಸಮಿತಿ ಸದಸ್ಯೆಯಾಗಿರುವ ಶೈಲಜಾ ಅವರು ಪಕ್ಷದ ನಾಯಕತ್ವದೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ನಾಯಕತ್ವವು ಪ್ರಶಸ್ತಿಯ ವಿವಿಧ ಅಂಶಗಳನ್ನು ನೋಡಿತು ಮತ್ತು ಅದನ್ನು ಸ್ವೀಕರಿಸುವುದನ್ನು ವಿರೋಧಿಸಿತು. ಆರೋಗ್ಯ ಸಚಿವೆಯಾಗಿ ಶೈಲಜಾ ಅವರು ಪಕ್ಷ ವಹಿಸಿದ ಕರ್ತವ್ಯವನ್ನು ಮಾತ್ರ ಮಾಡುತ್ತಿದ್ದಾರೆ ಎಂದು ಪಕ್ಷ ಭಾವಿಸಿದೆ. ಜೊತೆಗೆ, ನಿಫಾ ಮತ್ತು ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ರಾಜ್ಯದ ಪ್ರಯತ್ನಗಳು ಸಾಮೂಹಿಕ ಚಳುವಳಿಯ ಭಾಗವಾಗಿದೆ ಮತ್ತು ಆದ್ದರಿಂದ ಅವರು ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ಪ್ರಶಸ್ತಿ ಸ್ವೀಕರಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದೆ. 

ನಂತರ, ಶೈಲಜಾ ಅವರು ಪ್ರಶಸ್ತಿ ಸ್ವೀಕರಿಸಲು ಅಸಮರ್ಥತೆ ವ್ಯಕ್ತಪಡಿಸಿ ಪ್ರತಿಷ್ಠಾನಕ್ಕೆ ಪತ್ರ ಬರೆದಿದ್ದಾರೆ. ಕಮ್ಯುನಿಸ್ಟ್ ಉಗ್ರರನ್ನು ಸದೆಬಡಿಯಲು ಹೆಸರುವಾಸಿಯಾಗಿದ್ದ ಮ್ಯಾಗ್ಸೆಸೆ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸದಂತೆ ಸಿಪಿಐಎಂ ಪಕ್ಷವು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಅಂತಹ ಪ್ರಶಸ್ತಿಯನ್ನು ಸ್ವೀಕರಿಸುವುದು ದೀರ್ಘಾವಧಿಯಲ್ಲಿ ಹಿನ್ನಡೆಯಾಗುತ್ತದೆ ಎಂದೂ ಅದು ಭಾವಿಸಿದೆ. ಏಷ್ಯಾದ ನೊಬೆಲ್ ಪ್ರಶಸ್ತಿ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿರುವ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯು ಪ್ರತಿಷ್ಠಿತ ಅಂತಾರಾಷ್ಟ್ರೀಯ ಗೌರವವಾಗಿದ್ದು, ದಿವಂಗತ ಫಿಲಿಪೈನ್ಸ್ ಅಧ್ಯಕ್ಷರ ಹೆಸರಿಡಲಾಗಿದೆ. 

ಸಂಪುಟದಿಂದ ಶೈಲಜಾ ಹೊರಕ್ಕೆ: ನಮ್ಮ ಟೀಚರನ್ನು ಮತ್ತೆ ಕರೆತನ್ನಿ ಎಂದ ಸೆಲೆಬ್ರಿಟಿಗಳು
 
ಇನ್ನು, ಕೇರಳದ ಮಾಜಿ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಪ್ರಶಸ್ತಿ ಸ್ವೀಕರಿಸಿದ್ದರೆ, ಮ್ಯಾಗ್ಸೆಸೆ ಸ್ವೀಕರಿಸಿದ ಮೊದಲನೇ ಕೇರಳದ ಮಹಿಳೆ ಎನಿಸಿಕೊಳ್ಳುತ್ತಿದ್ದರು. ಈಗ, ಈ ಅವಕಾಶ ತಪ್ಪಿಸಿಕೊಂಡಿದ್ದಾರೆ.  ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಮ್ಯಾಗ್ಸೆಸೆ ಪ್ರಶಸ್ತಿ ನೀಡಲಾಗುತ್ತದೆ.

Follow Us:
Download App:
  • android
  • ios