ಮಾಜಿ ಕೇಂದ್ರ ಸಚಿವ ದಿಲೀಪ್ ರಾಯ್ಗೆ 3 ವರ್ಷ ಜೈಲು!
ಮಾಜಿ ಕೇಂದ್ರ ಸಚಿವ ದಿಲೀಪ್ ರಾಯ್ಗೆ 3 ವರ್ಷ ಜೈಲು| ಕಲ್ಲಿದ್ದಲು ಹಗರಣ ಮೇಲ್ಮನವಿ ಸಲ್ಲಿಕೆಗಾಗಿ ಜಾಮೀನು
ನವದೆಹಲಿ(ಅ.27): ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ದಿಲೀಪ್ ರಾಯ್ಗೆ ಸಿಬಿಐ ನ್ಯಾಯಾಲಯ ಸೋಮವಾರ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಬೆನ್ನಲ್ಲೇ ಅವರಿಗೆ ಜಾಮೀನು ನೀಡಿ, ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು 1 ತಿಂಗಳ ಕಾಲಾವಕಾಶ ನೀಡಿದೆ. ರಾಯ್ ಅವರು ಅಟಲ್ ಬಿಹಾರಿ ವಾಜಪೇಯಿ ಮಂತ್ರಿಮಂಡಲದಲ್ಲಿ ಕಲ್ಲಿದ್ದಲು ಖಾತೆ ರಾಜ್ಯ ಸಚಿವರಾಗಿದ್ದರು. ಈ ವೇಳೆ ಜಾರ್ಖಂಡ್ನ ಗಿರಿಧ್ ಜಿಲ್ಲೆಯ ಕಲ್ಲಿದ್ದಲು ಗಣಿ ಹಂಚಿಕೆಗೆ ಸಂಬಂಧಿಸಿದಂತೆ ಅಕ್ರಮ ನಡೆಸಿದ ಆರೋಪ ಅವರ ಮೇಲೆ ಕೇಳಿಬಂದಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ಸಿಬಿಐ ನ್ಯಾಯಾಧೀಶ ಭರತ್ ಪರಾಶರ್ ಅವರು, ಮಾಜಿ ಸಚಿವ ರಾಯ್ ಅವರಿಗೆ 3 ವರ್ಷ ಸಜೆ, 10 ಲಕ್ಷ ದಂಡ ವಿಧಿಸಿದರು. ಜೊತೆಗೆ ರಾಯ್ ಹಾಗೂ ಅವರ ಅವಧಿಯಲ್ಲಿ ಕಲ್ಲಿದ್ದಲು ಸಚಿವಾಲಯದಲ್ಲಿ ಹಿರಿಯ ಅಧಿಕಾರಿಗಳಾಗಿದ್ದ ಪ್ರದೀಪ್ ಕುಮಾರ್ ಬ್ಯಾನರ್ಜಿ , ನಿತ್ಯಾನಂದ ಗೌತಮ್ ಅವರಿಗೆ ತಲಾ 3 ವರ್ಷ ಜೈಲು ಶಿಕ್ಷೆ ಮತ್ತು ತಲಾ 2 ಲಕ್ಷ ದಂಡ ಹಾಗೂ ಕ್ಯಾಸ್ಟ್ರಾನ್ ಟೆಕ್ನಾಲಜಿ ಕಂಪನಿ ನಿರ್ದೇಶಕ ಮಹೇಂದ್ರ ಕುಮಾರ್ ಅಗರ್ವಾಲ್ ಅವರಿಗೆ ತಲಾ 3 ವರ್ಷ ಜೈಲು ಶಿಕ್ಷೆ ಹಾಗೂ 60 ಲಕ್ಷ ರು. ದಂಡ ವಿಧಿಸಿದರು.
ಇದೇ ವೇಳೆ ಕ್ಯಾಸ್ಟ್ರಾನ್ ಟೆಕ್ನಾಲಜಿಗೆ 60 ಲಕ್ಷ ರು. ಹಾಗೂ ಕ್ಯಾಸ್ಟ್ರಾನ್ ಮೈನಿಂಗ್ ಲಿಮಿಟೆಡ್ಗೆ 10 ಲಕ್ಷ ರು. ದಂಡ ವಿಧಿಸಲಾಗಿದೆ.