ರಾಮಮಂದಿರ ಪ್ರಾಣಪ್ರತಿಷ್ಠೆಗೆ ಶಾಲಾ ಕಾಲೇಜಿಗೆ ರಜೆ, ಮದ್ಯ ಮಾರಾಟ ನಿಷೇಧ; ಸಿಎಂ ಯೋಗಿ ಘೋಷಣೆ!
ರಾಮಮಂದಿರ ಪ್ರಾಣಪ್ರತಿಷ್ಠೆ ಜನವರಿ 22ರಂದು ನಡೆಯಲಿದೆ. ಈ ದಿನ ಉತ್ತರ ಪ್ರದೇಶ ಎಲ್ಲಾ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಇಷ್ಟೇ ಅಲ್ಲ ಈ ದಿನ ಉತ್ತರ ಪ್ರದೇಶದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಈ ಕುರಿತು ಸಿಎಂ ಯೋಗಿ ಆದಿತ್ಯನಾಥ್ ಮಹತ್ವದ ಆದೇಶ ಹೊರಡಿಸಿದ್ದಾರೆ.
![CM Yogi adityanath declare holiday for UP Schools College on Jan 22nd Liquor sale ban ckm CM Yogi adityanath declare holiday for UP Schools College on Jan 22nd Liquor sale ban ckm](https://static-ai.asianetnews.com/images/01gnby8qk7x2bscs6grjagkj76/y_363x203xt.jpg)
ಲಖನೌ(ಜ.09) ರಾಮ ಮಂದಿರ ಲೋಕಾರ್ಪಣೆಗೆ ತಯಾರಿ ನಡೆಯುತ್ತಿದೆ. ಜನವರಿ 22 ರಂದು ರಾಮಲ್ಲಾ ಪ್ರಾಣಪ್ರತಿಷ್ಠೆ ನಡೆಯಲಿದೆ. ಐತಿಹಾಸಿಕ ದಿನಕ್ಕಾಗಿ ವಿಶ್ವವೇ ಕಾಯುತ್ತಿದೆ. ರಾಮ ಮಂದಿರ ಪ್ರಾಣಪ್ರತಿಷ್ಠೆದಿನ ಉತ್ತರ ಪ್ರದೇಶದ ಎಲ್ಲಾ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಇಷ್ಟೇ ಅಲ್ಲ ಪ್ರಾಣ ಪ್ರತಿಷ್ಠೆ ದಿನ ಉತ್ತರ ಪ್ರದೇಶದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಈ ಮಹತ್ವದ ಆದೇಶವನ್ನು ಸಿಎಂ ಯೋಗಿ ಆದಿತ್ಯನಾಥ್ ಹೊರಡಿಸಿದ್ದಾರೆ. ಇದೇ ವೇಳೆ ಪ್ರಾಣಪ್ರತಿಷ್ಠೆಯ ಐತಿಹಾಸಿಕ ದಿನ ಶಾಂತಿಯುತವಾಗಿ ಸಂಭ್ರಮಿಸಲು ಮನವಿ ಮಾಡಿದ್ದಾರೆ.
500 ವರ್ಷಗಳ ಹೋರಾಟದ ಬಳಿಕ ಶ್ರೀರಾಮ ಮಂದಿರ ನಿರ್ಮಾಣವಾಗಿದೆ. ಈ ಐತಿಹಾಸಿಕ ದಿನ ನಮ್ಮೆಲ್ಲರಿಗೂ ಅತ್ಯಂತ ಮಹತ್ವ ಹಾಗೂ ಸಂಭ್ರಮದ ದಿನವಾಗಿದೆ. ಈ ದಿನವನ್ನು ಆಚರಿಸಲು ಎಲ್ಲಾ ಶಾಲಾ ಕಾಲೇಜಿಗೆ ರಜೆ ಘೋಷಿಸಿ ಎಂದು ಯೋಗಿ ಆದಿತ್ಯನಾಥ್, ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ. ಶ್ರೀರಾಮ ಪ್ರಾಣಪ್ರತಿಷ್ಠೆ ಅತ್ಯಂತ ಪವಿತ್ರವಾಗಿದೆ. ಹೀಗಾಗಿ ಈ ದಿನ ಉತ್ತರ ಪ್ರದೇಶದಲ್ಲಿ ಮದ್ಯ ಮಾರಾಟ ನಿಷೇಧಿಸಲು ಆದೇಶ ಹೊರಡಿಸಲಾಗಿದೆ.
ರಾಮ ಮಂದಿರ ಪ್ರಾಣಪ್ರತಿಷ್ಠೆ ಬೆನ್ನಲ್ಲೇ ಘಾಜಿಯಾಬಾದ್ ಮರುನಾಮಕರಣಕ್ಕೆ ಸಜ್ಜಾದ ಯೋಗಿ ಸರ್ಕಾರ!
ಸಾರ್ವಜನಿಕರು ರಾಮ ಮಂದಿರ ಪ್ರಾಣಪ್ರತಿಷ್ಠೆಯನ್ನು ಸಂಭ್ರಮಿಸಲು ಕೆಲ ಸೂಚನೆ ನೀಡಲಾಗಿದೆ. ಶಾಂತಿಯುತವಾಗಿ ಸಂಭ್ರಮ ಆಚರಿಸಿ, ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಮನೆಯಲ್ಲೇ ದೀಪ ಬೆಳಗಿ ರಾಮನ ಭವ್ಯ ಮಂದಿರದ ಲೋಕಾರ್ಪಣೆ ಹಾಗೂ ಪ್ರಾಣಪತಿಷ್ಠೆಯಲ್ಲಿ ಪಾಲ್ಗೊಳ್ಳಿ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಶಾಂತಿಯುತವಾಗಿ ಹಾಗೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಸಂಭ್ರಮದಲ್ಲಿ ಪಾಲ್ಗೊಳ್ಳಲು ಯೋಗಿ ಆದಿತ್ಯನಾಥ್ ಮನವಿ ಮಾಡಿದ್ದಾರೆ.
ರಾಮ ಮಂದಿರ ಪ್ರಾಣಪ್ರತಿಷ್ಟೆಯನ್ನು ಪ್ರಧಾನಿ ನರೇಂದ್ರ ಮೋದಿ ನೇರವೇರಿಸಲಿದ್ದಾರೆ. ಜನವರಿ 22ರ 12.30ರ ಶುಭಮುಹೂರ್ತದಲ್ಲಿ ಪ್ರಾಣಪ್ರತಿಷ್ಠೆ ನಡೆಯಲಿದೆ. ಜನವರಿ 16ರಿಂದ ರಾಮನಗರಿಯಲ್ಲಿ ಪೂಜಾ ಕೈಂಕರ್ಯಗಳು ಆರಂಭಗೊಳ್ಳಲಿದೆ. ಈಗಾಗಲೇ ಮನೆ ಮನೆಗೆ ರಾಮ ಮಂದಿರದ ಮಂತ್ರಾಕ್ಷತೆ ವಿತರಣೆ ಮಾಡಲಾಗುತ್ತಿದೆ.
ಹನುಮಾನ್ ಚಿತ್ರದ ಪ್ರತಿ ಟಿಕೆಟ್ನ 5 ರೂಪಾಯಿ ರಾಮ ಮಂದಿರಕ್ಕೆ ದೇಣಿಗೆ, ನಟ ಚಿರಂಜೀವಿ ಘೋಷಣೆ!
ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಆಹ್ವಾನ ನೀಡಲಾಗುತ್ತಿದೆ. ಬರೋಬ್ಬರಿ 7 ಸಾವಿರ ಗಣ್ಯರಿಗೆ ಆಹ್ವಾನ ನೀಡಲಾಗುತ್ತಿದೆ. ಈಗಾಗಲೇ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ. ಪ್ರತಿಯೊಬ್ಬ ಗಣ್ಯರಿಗೂ ಮುಖತಃ ಭೇಟಿ ಮಾಡಿ ಆಹ್ವಾನ ಪತ್ರಿಕೆಗಳನ್ನು ನೀಡಲಾಗುವುದು. ದೇವಾಲಯ ಟ್ರಸ್ಟ್ನ ಪ್ರತಿನಿಧಿಗಳು ಹಾಗೂ ಸ್ವಯಂಸೇವಕರು ಗಣ್ಯರನ್ನು ಭೇಟಿ ಮಾಡಿ ಆಹ್ವಾನ ನೀಡಲಿದ್ದಾರೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧಿಕಾರಿಗಳು ಹೇಳಿದ್ದಾರೆ.