ಪಾಸ್ವಾನ್ ಸಾವಲ್ಲಿ ಪುತ್ರ ಚಿರಾಗ್ ಪಾತ್ರ: ತನಿಖೆಗೆ ಮಾಂಝೀ ಪಕ್ಷ ಆಗ್ರಹ!
ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಸಾವಿನಲ್ಲಿ ಪುತ್ರ ಚಿರಾಗ್ ಪಾಸ್ವಾನ್ ಕೈವಾಡ| ಎನ್ಡಿಎದ ಮಿತ್ರ ಪಕ್ಷ ಹಿಂದೂಸ್ಥಾನಿ ಅವಾಮಿ ಮೋರ್ಚಾ ಆರೋಪ
ಪಟನಾ(ನ.03): ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಸಾವಿನಲ್ಲಿ ಪುತ್ರ ಚಿರಾಗ್ ಪಾಸ್ವಾನ್ ಕೈವಾಡ ಇದೆ ಎಂದು ಎನ್ಡಿಎದ ಮಿತ್ರ ಪಕ್ಷ ಹಿಂದೂಸ್ಥಾನಿ ಅವಾಮಿ ಮೋರ್ಚಾ ಆರೋಪಿಸಿದೆ. ಅಲ್ಲದೆ ಈ ಕುರಿತು ತನಿಖೆ ನಡೆಸುವಂತೆ ಕೋರಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದೆ.
ಪಾಸ್ವಾನ್ ಮೃತಪಟ್ಟಮರುದಿನವೇ ಅವರ ಫೋಟೋ ಪಕ್ಕ ನಿಂತು ನಗುತ್ತಲೇ ವಿಡಿಯೋ ಮಾಡಿಕೊಂಡಿದ್ದಾರೆ. ಪಾಸ್ವಾನ್ ಆಸ್ಪತ್ರೆಯಲ್ಲಿದ್ದ ವೇಳೆ ಕೇವಲ ಮೂವರಿಗೆ ಮಾತ್ರ ಭೇಟಿಗೆ ಅವಕಾಶ ನೀಡಲಾಗಿದೆ. ನಿಧನದ ಬಗ್ಗೆ ಮೆಡಿಕಲ್ ಬುಲೆಟಿನ್ ಬಿಡುಗಡೆ ಮಾಡಿಲ್ಲ. ಈ ಎಲ್ಲಾ ನಡೆಗಳು ಶಂಕಾಸ್ಪದವಾಗಿದ್ದು, ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಚಿರಾಗ್, ಆಸ್ಪತ್ರೆಯಲ್ಲಿದ್ದಾಗ ಭೇಟಿ ಮಾಡದವರು ಈಗ ಅವರು ಸತ್ತ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಬೇಸರಿಸಿದ್ದಾರೆ. ಅಲ್ಲದೇ ಈ ಪತ್ರದ ಹಿಂದೆ ನಿತೀಶ್ ಕುಮಾರ್ ಕೈವಾಡ ಇದೆ ಎಂದು ದೂರಿದ್ದಾರೆ.