ಕಣಿವೆ ರಾಜ್ಯ ಜಮ್ಮು ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ಘೋಷಿಸಿದ್ದ ರೈಲ್ವೆ ಯೋಜನೆ ವಿರೋಧಿಸಿ 7 ಲಕ್ಷ ಸೇಬು ಮರಗಳ ಉಳಿವಿಗೆ ಜನ ಚಿಪ್ಕೋ ಚಳವಳಿ ನಡೆದದ್ದು, ಇದಕ್ಕೆ ಮಣಿದ ಸರ್ಕಾರ ಮೂರು ಯೋಜನೆಗಳನ್ನು ರದ್ದುಪಡಿಸಿದೆ.

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ಘೋಷಿಸಿದ್ದ ರೈಲ್ವೆ ಯೋಜನೆ ವಿರೋಧಿಸಿ 7 ಲಕ್ಷ ಸೇಬು ಮರಗಳ ಉಳಿವಿಗೆ ಜನ ಚಿಪ್ಕೋ ಚಳವಳಿ ನಡೆದ್ದು, ಇದಕ್ಕೆ ಮಣಿದ ಸರ್ಕಾರ ಮೂರು ಯೋಜನೆಗಳನ್ನು ರದ್ದುಪಡಿಸಿದೆ.

ರೈಲ್ವೆ ಇಲಾಖೆ ಕಳೆದ ವರ್ಷ ಕಾಕ್ಪೋರಾ ಮತ್ತು ಪುಲ್ವಾಮಾ ಮತ್ತು ಶೋಪಿಯಾನ್ ಜಿಲ್ಲೆಗಳ ನಡುವೆ ಮೂರು ರೈಲ್ವೆ ಯೋಜನೆ ಘೋಷಿಸಿತ್ತು. ಇದರಿಂದ ಪುಲ್ವಾಮಾ, ಶೋಪಿಯಾನ, ಅನಂತ್‌ನಾಗ್‌ ಜಿಲ್ಲೆಯ ಜನರು ತಮ್ಮ ಪಾರಂಪರಿಕ ಬೆಳೆ ಸೇಬು ಕಳೆದುಕೊಳ್ಳುವ ಭೀತಿಯಲ್ಲಿದ್ದರು. ಈ ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಸೇಬು ಬೆಳೆಯುವುದು ಮಾತ್ರವಲ್ಲದೇ ಇದು ರಾಜ್ಯದ ಆರ್ಥಿಕತೆಗೂ ಅತಿದೊಡ್ಡ ಕೊಡುಗೆ ನೀಡುತ್ತದೆ. ಹೀಗಾಗಿ ವಿರೋಧಿಸಿ ಚಿಪ್ಕೋ ಚಳವಳಿ ನಡೆಸಿದ್ದರು. ಕಾಶ್ಮೀರ ಸರ್ಕಾರ, ಸಂಸದರು ವಿರೋಧಿಸಿದ್ದರು.ಈ ಬೆನ್ನಲ್ಲೇ ಕೇಂದ್ರ ರದ್ದುಗೊಳಿಸಿದೆ.

2-3 ದಶಕದಲ್ಲಿ ಭಾರತ 30 ಟ್ರಿಲಿಯನ್‌ ಡಾಲರ್‌ ಆರ್ಥಿಕತೆ: ಅಂಬಾನಿ

ನವದೆಹಲಿ: ‘ಭಾರತವು ಮುಂದಿನ 20-30 ವರ್ಷಗಳಲ್ಲಿ 25-30 ಲಕ್ಷ ಕೋಟಿ ಆರ್ಥಿಕತೆಯಾಗಲಿದೆ. ಭಾರತದ ಯುವಜನರು ದೇಶದ ಬೆಳವಣಿಗೆಯ ಲಾಭ ಪಡೆದುಕೊಳ್ಳಬೇಕು’ ಎಂದು ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರು ಹೇಳಿದರು.ಮುಂಬೈನಲ್ಲಿ ನಡೆದ ಜಿಯೋ-ಬ್ಲ್ಯಾಕ್‌ರಾಕ್‌ ‘ಹೊಸ ಯುಗಕ್ಕಾಗಿ ಹೂಡಿಕೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅಂಬಾನಿ, ‘ಈ ಅವಧಿಯು ದೇಶದ ಯುವ ಪೀಳಿಗೆಗೆ ಒಂದು ದೊಡ್ಡ ಹೂಡಿಕೆಗೆ ಅವಕಾಶವಾಗುತ್ತದೆ ಎಂದು ಹೇಳಿದರು. ಜೊತೆಗೆ ಭಾರತವು ಸಾಂಪ್ರದಾಯಿಕವಾಗಿ ಉಳಿತಾಯ ದೇಶವಾಗಿದೆ. ಉಳಿತಾಯವನ್ನು ಹೂಡಿಕೆಯನ್ನಾಗಿ ಪರಿವರ್ತಿಸಬೇಕು. ಬಂಡವಾಳ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವುದರಿಂದ ಮನೆಯ ಸಂಪತ್ತು ಹೆಚ್ಚಾಗುವುದಲ್ಲದೆ ದೇಶದ ಬೆಳವಣಿಗೆಯೂ ವೇಗಗೊಳ್ಳುತ್ತದೆ’ ಎಂದು ಹೇಳಿದರು.

ಜಮ್ಮು: ಗುಹೆಯಲ್ಲಿ ಕಮಾಂಡರ್‌ ಸೇರಿ 2 ಉಗ್ರರ ಹತ್ಯೆ ‘ಕಿಯಾ’

ಜಮ್ಮು: ಕಣಿವೆ ರಾಜ್ಯದ ಉಧಂಪುರ ಜಿಲ್ಲೆಯಲ್ಲಿ ಸೇನೆ ನಡೆಸಿದ ಕಿಯಾ ಕಾರ್ಯಾಚರಣೆಯಲ್ಲಿ ಗುಹೆಯೊಂದರಲ್ಲಿ ಅಡಗಿದ್ದ ಜೈಷ್‌ ಎ ಮೊಹಮ್ಮದ್‌ ಸಂಘಟನೆಯ ಕಮಾಂಡರ್‌ ಸೇರಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಉಗ್ರರು ಗುಹೆಯಲ್ಲಿ ಅವಿತಿದ್ದ ಖಚಿತ ಮಾಹಿತಿ ಮೇರೆಗೆ ಸೇನಾ ಪಡೆಗಳು ಗುಹೆ ಸುತ್ತುವರಿದಾಗ ಗುಹೆಯಲ್ಲಿ ಅನೇಕ ಪ್ರಬಲ ಸ್ಫೋಟಗಳು ಕೇಳಿಬಂದವು. ಈ ವೇಳೆ ಕಮಾಂಡರ್‌ ರಬಾನಿ ಅಲಿಯಾಸ್‌ ಅಬು ಮಾವಿಯಾ ಮೃತದೇಹ ಗುಹೆಯ ಬಾಗಿಲು ಬಳಿ, ಮತ್ತೊಬ್ಬನದು ಗುಹೆಯ ಒಳಗೆ ದೊರೆತಿದೆ. ಸೇನಾ ಪಡೆ, ಪೊಲೀಸ್‌, ಸಿಆರ್‌ಪಿಎಫ್‌ ತುಕಡಿ ಜಂಟಿಯಾಗಿ ಮಂಗಳವಾರ ಸಂಜೆ 4ರಿಂದ 20 ತಾಸು ರಾಮನಗರ, ವಸಂತಗಢದಲ್ಲಿ ‘ಕಿಯಾ’ ಹೆಸರಿನ ಕಾರ್ಯಾಚರಣೆ ನಡೆಸಿತು.

ಎಪ್‌ಸ್ಟೀನ್‌ ಫೈಲ್ಸ್‌ನಲ್ಲಿ ಐಶು, ಅಭಿ, ಅನುರಾಗ್‌ ಹೆಸರು ತಳುಕು ಬಳುಕು

ನವದೆಹಲಿ: ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ನ 30 ಲಕ್ಷ ಪುಟಗಳ ಕಡತದಲ್ಲಿ ಬಾಲಿವುಡ್‌ ತಾರೆ ಐಶ್ಚರ್ಯ ರೈ, ಅಭಿಷೇಕ್‌ ಬಚ್ಚನ್‌ ಮತ್ತು ನಿರ್ದೇಶಕ ಅನುರಾಗ್‌ ಕಶ್ಯಪ್‌ ಹೆಸರು ಕಾಣಿಸಿವೆ ಎಂದು ವರದಿಗಳು ತಿಳಿಸಿವೆ. ಐಶ್ಚರ್ಯ ರೈ ಮತ್ತು ಅಭಿಷೇಕ್‌ ಬಚ್ಚನ್‌ ಅವರು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ತೆರಳಿದ್ದರು. ಅವರಿದ್ದ ಕಾರ್ಯಕ್ರಮಕ್ಕೆ ಎಪ್‌ಸ್ಟೀನ್‌ ಸಹ ಬಂದಿದ್ದ ಬಗ್ಗೆ ಫೈಲ್‌ನಲ್ಲಿ ಉಲ್ಲೇಖವಿದೆ. ಎಪ್‌ಸ್ಟೀನ್‌ನ ಸಹಾಯಕನ ಇಮೇಲ್‌ನಲ್ಲಿ ಇಬ್ಬರ ಹೆಸರಿನಲ್ಲಿದೆ ಅದನ್ನು ಹೊರತುಪಡಿಸಿ, ಸಂವಾದ, ಸಂಬಂಧದ ಬಗ್ಗೆ ಯಾವುದೇ ಮಾಹಿತಿಯಿಲ್ಲ.ಮತ್ತೊಂದೆಡೆ ಅನುರಾಗ್‌ ಕಶ್ಯಪ್‌ ಅವರನ್ನು ಇಮೇಲ್‌ನಲ್ಲಿ ‘ಬಾಲಿವುಡ್‌ ಗೈ’ ಎಂದು ಕರೆಯಲಾಗಿದೆ. ಎಪ್‌ಸ್ಟೀನ್‌ ಮತ್ತು ಮತ್ತೋರ್ವ ವ್ಯಕ್ತಿ ನಡುವಿನ ಸಂಭಾಷಣೆಯಲ್ಲಿ ಅನುರಾಗ್‌ರನ್ನು ‘ಫೇಮಸ್‌ ಬಾಲಿವುಡ್‌ ಡೈರೆಕ್ಟರ್‌’, ‘ಬಾಲಿವುಡ್‌ ಗೈ’ ಎಂದು ಉಲ್ಲೇಖಿಸಲಾಗಿದೆ. ಆದರೆ ಅದರ ಹೊರತು ಯಾವುದೇ ಮಾಹಿತಿಯಿಲ್ಲ.