ಗಡಿಯಲ್ಲಿ ಭಾರತದೊಂದಿಗೆ ಸದಾ ಕ್ಯಾತೆ ತೆಗೆಯುವ ಚೀನಾ, ಇದೀಗ ಲಡಾಖ್‌ಗೆ ಹೊಂದಿಕೊಂಡಂತೆ ಇರುವ ಆಕ್ರಮಿತ ಹೋಟಾನ್‌ ಜಿಲ್ಲೆಯಲ್ಲಿ ಎರಡು ಹೊಸ ಕೌಂಟಿ (ಮುನ್ಸಿಪಲ್‌) ರಚನೆ ಮಾಡಿ ಆದೇಶ ಹೊರಡಿಸಿದೆ. 

ನವದೆಹಲಿ (ಜ.04): ಗಡಿಯಲ್ಲಿ ಭಾರತದೊಂದಿಗೆ ಸದಾ ಕ್ಯಾತೆ ತೆಗೆಯುವ ಚೀನಾ, ಇದೀಗ ಲಡಾಖ್‌ಗೆ ಹೊಂದಿಕೊಂಡಂತೆ ಇರುವ ಆಕ್ರಮಿತ ಹೋಟಾನ್‌ ಜಿಲ್ಲೆಯಲ್ಲಿ ಎರಡು ಹೊಸ ಕೌಂಟಿ (ಮುನ್ಸಿಪಲ್‌) ರಚನೆ ಮಾಡಿ ಆದೇಶ ಹೊರಡಿಸಿದೆ. ಈ ಕೌಂಟಿಗಳನ್ನು ‘ಹಿಯಾನ್‌’ ಹಾಗೂ ‘ಹೆಕಾಂಗ್‌’ ಎಂದು ಹೆಸರಿಸಿದೆ. ಚೀನಾದ ಈ ನಡೆಗೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್‌ ಜೈಸ್ವಾಲ್‌, ‘ಚೀನಾವು ನಮ್ಮ ಭೂಭಾಗವನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವುದನ್ನು ಭಾರತ ಎಂದೂ ಒಪ್ಪಿಲ್ಲ. ಚೀನಾ, ಹೋಟಾನ್ ಪ್ರಾಂತ್ಯದಲ್ಲಿ ರಚಿಸಲು ಹೊರಟಿರುವ 2 ಕೌಂಟಿಯ ಕೆಲ ಭಾಗಗಳು ಭಾರತದ ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್‌ನಲ್ಲಿವೆ’ ಎಂದಿದ್ದಾರೆ. 

Add Asianetnews Kannada as a Preferred SourcegooglePreferred

‘ಹೊಸ ಪ್ರಾಂತ್ಯಗಳನ್ನು ರಚಿಸುವ ಮೂಲಕ ಚೀನಾ ಭಾರತದ ಸಾರ್ವಭೌಮತ್ವದ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಿಲ್ಲ. ಚೀನಾದ ಅಕ್ರಮ ಹಾಗೂ ಬಲವಂತದ ಅತಿಕ್ರಮಣಕ್ಕೆ ಭಾರತ ಮಾನ್ಯತೆ ನೀಡುವುದಿಲ್ಲ. ಈ ಸಂಬಂಧ ನಮ್ಮ ವಿರೋಧವನ್ನು ರಾಜತಾಂತ್ರಿಕ ಮಾಧ್ಯಮಗಳ ಮೂಲಕ ಚೀನಾಗೂ ತಿಳಿಸಲಾಗಿದೆ’ ಎಂದು ಜೈಸ್ವಾಲ್‌ ಹೇಳಿದರು. 1962ರಲ್ಲಿ ಭಾರತದ ಮೇಲೆ ದಾಳಿ ಮಾಡಿದ್ದ ಚೀನಾ ಆಗ ಅಕ್ಸಾನ್‌ಚಿನ್‌ ಒಳಗೊಂಡಂತ ಲಡಾಖ್‌ನ ಹಲವು ಭಾಗಗಳನ್ನು ಅತಿಕ್ರಮಿಸಿತ್ತು.

ಶಾಂತಿ ಸ್ಥಾಪನೆಗೆ ಸಮ್ಮತಿ: ಭಾರತ-ಚೀನಾ ನಿಯೋಗ ಮಟ್ಟದ ಮಾತುಕತೆಗಾಗಿ 5 ವರ್ಷ ಬಳಿಕ ಚೀನಾ ಪ್ರವಾಸ ಕೈಗೊಂಡಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಸಭೆಗಳು ಯಶಸ್ವಿಯಾಗಿವೆ. ಈ ವೇಳೆ ಶಾಂತಿ ಸ್ಥಾಪನೆಗೆ ಹಾಗೂ 5 ವರ್ಷದಿಂದ ನಡೆಯದ ಮಾನಸ ಸರೋವರ ಯಾತ್ರೆ ಪುನಾರಂಭಕ್ಕೆ ಉಭಯ ದೇಶಗಳು ಸಮ್ಮತಿಸಿವೆ. ಚೀನಾ ಉಪಾಧ್ಯಕ್ಷ ಹ್ಯಾನ್‌ ಝೆಂಗ್‌ ಹಾಗೂ ವಿದೇಶಾಂಗ ಸಚಿವ ಯಿ ವಾಂಗ್ ಅವರನ್ನು ದೋವಲ್‌ ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಉಭಯ ದೇಶಗಳು ಶಾಂತಿ ಸ್ಥಾಪನೆಗೆ ಸಹಮತ ವ್ಯಕ್ತಪಡಿಸಿದವು.

₹10 ಲಕ್ಷ ಸೂಟ್‌ ಧರಿಸುವ ಮೋದಿಗೆ ನನ್ನ ಮನೆ ಬಗ್ಗೆ ಮಾತಾಡುವ ಹಕ್ಕಿಲ್ಲ: ಅರವಿಂದ್‌ ಕೇಜ್ರಿವಾಲ್‌

ರಡೂ ಕಡೆಯವರು ಗಡಿಯಾಚೆಗಿನ ವಿನಿಮಯ ಮತ್ತು ಸಹಕಾರವನ್ನು ಬಲಪಡಿಸಲು ಮತ್ತು ಮಾನಸ ಸರೋವರ ಯಾತ್ರೆ ಪುನರಾರಂಭಿಸಲು ಮತ್ತು ನಾಥುಲಾ ಗಡಿ ವ್ಯಾಪಾರವನ್ನು ಉತ್ತೇಜಿಸಲು ಒಪ್ಪಿಕೊಂಡರು ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿದೆ. ಕೋವಿಡ್‌ ನಂತರ (2020ರ ನಂತರ) ಮಾನಸ ಸರೋವರ ಯಾತ್ರೆ ಸ್ಥಗಿತಗೊಂಡಿದೆ. ಇದು ಶಾಂತಿ ಸ್ಥಾಪನೆಯತ್ತ ಮಹತ್ವದ ಹೆಜ್ಜೆ ಎಂದು ದೋವಲ್‌ ಹೇಳಿದ್ದಾರೆ. ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಶಾಂತಿ ಸ್ಥಾಪನೆ ಮತ್ತು ಲಡಾಖ್‌ನಲ್ಲಿನ ಬಿಕ್ಕಟ್ಟಿನಿಂದಾಗಿ ಕಳೆದ 5 ವರ್ಷಗಳಿಂದ (2019ರಿಂದ) ನಿಯೋಗ ಮಟ್ಟದ ಮಾತುಕತೆ ನಡೆದಿರಲಿಲ್ಲ. ಆದರೆ ಈಗ ಸ್ಥಿತಿ ಸುಧಾರಿಸಿದ ಕಾರಣ ಚೀನಾಗೆ ದೋವಲ್‌ ಭೇಟಿ ನೀಡಿದ್ದಾರೆ. 5 ವರ್ಷಗಳ ಹಿಂದೆ ಕೊನೆಯ ಸಭೆ ದೆಹಲಿಯಲ್ಲಿ ನಡೆದಿತ್ತು.