ಲಡಾಖ್ನಲ್ಲಿ ಭಾರತ, ಚೀನಾ ಘರ್ಷಣೆ: ಲೋಕಸಭೆಯಲ್ಲಿ ಕಾರಣ ಬಿಚ್ಚಿಟ್ಟ ರಕ್ಷಣಾ ಸಚಿವ!
ಲೋಕಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಷಣ| ಭಾರತ, ಚೀನಾ ನಡುವಿನ ಸಮರಕ್ಕೇನು ಕಾರಣ ಎಂದು ಬಹಿರಂಗ| ಯೋಧರ ತ್ಯಾಗಕ್ಕೆ ರಾಜನಾಥ್ ಸಿಂಗ್ ನಮನ
ನವದೆಹಲಿ(ಸೆ.15): ಲಡಾಖ್ನಲ್ಲಿ ಚೀನಾ ಹಾಗೂ ಭಾರತ ನಡುವೆ ಘರ್ಷಣೆ ಮುಂದುವರೆದಿದ್ದು, ಮಹತ್ತರ ಬೆಳವಣಿಗೆಗಳು ನಡೆದಿವೆ. ಈ ಸಂಘರ್ಷದ ಬಗ್ಗೆ ಲೋಸಕಭೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಪೂರ್ಣ ಮಾಹಿತಿ ನೀಡಿದ್ದು, ಭಾರತ-ಚೀನಾ ನಡುವಿನ ವಾಸ್ತವ ಗಡಿ ನಿಯಂತ್ರಣ ರೇಖೆ(ಎಲ್ಎಸಿ) ಕುರಿತು ಭಾರತ ಹಾಗೂ ಚೀನಾದ ಗ್ರಹಿಕೆಗಳು ಪರಸ್ಪರ ಬೇರೆ ಬೇರೆಯಾಗಿವೆ. ಇದೇ ಉಭಯ ರಾಷ್ಟ್ರಗಳ ನಡುವಿನ ವಿವಾದಕ್ಕೆ ಕಾರಣ ಎಂದಿದ್ದಾರೆ.
ರಾಜನಾಥ್ ಸಿಂಗ್ ಭಾಷಣದ ಪ್ರಮುಖ ಅಂಶಗಳು
* ಪೂರ್ವ ಲಡಾಖ್ ಗಡಿಯಲ್ಲಿ ಚೀನಾ ಹೆಚ್ಚುವರಿ ಸೇನೆ ನಿಯೋಜನೆ ಮಾಡಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದೆ. ಈ ಪರಿಸ್ಥಿತಿಯನ್ನು ನಿಭಾಯಸಿಲು ಭಾರತೀಯ ಸೇನೆ ಸಮರ್ಥವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
* ಭಾರತ ಚೀನಾ ಗಡಿಯಲ್ಲಿ ನಿರ್ಮಾಣವಾಗಿರುವ ಉದ್ವಿಗ್ನ ಪರಿಸ್ಥಿತಿ ಸಂಬಂಧ ಲೋಕಸಭೆಗೆ ಇಂದು ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿದರು.
* ಪಾಂಗಾಂಗ್ ತ್ಸೊ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಗಳು, ಗೊಗ್ರಾ ಮತ್ತು ಪೂರ್ವ ಲಡಾಕ್ ಘರ್ಷಣೆ ಕೇಂದ್ರಗಳಾಗಿವೆ.
* ಇದಕ್ಕೆ ಪ್ರತ್ಯುತ್ತರ ನೀಡಲು ಭಾರತೀಯ ಸೇನೆಯನ್ನು ನಿಯೋಜನೆ ಮಾಡಲಾಗಿದೆ.
* ಹಳೆ ಒಪ್ಪಂದವನ್ನು ಉಲ್ಲಂಘಿಸಿ, ಜೂನ್ 15 ರಂದು ಗಾಲ್ವಾನ್ನಲ್ಲಿ ಚೀನಾವು ಹಿಂಸಾತ್ಮಕ ಸಂಘರ್ಷದ ಪರಿಸ್ಥಿತಿಯನ್ನು ಸೃಷ್ಟಿಸಿತು. ನಮ್ಮ ಧೈರ್ಯಶಾಲಿ ಸೈನಿಕರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು.
* ಈ ವೇಳೆ ಚೀನಾದ ಕಡೆಯವರಿಗೆ ಹೆಚ್ಚಿನ ಹಾನಿಯುಂಟು ಮಾಡಿ ನಮ್ಮ ಗಡಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
* ಗಡಿಯ ವಿಚಾರ ನಿಭಾಯಿಸಲು ಕೇಂದ್ರ ಸರ್ಕಾರ ಬದ್ದವಾಗಿದೆ. ಎರಡು ದೇಶಗಳು ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆ ನಡೆಸುತ್ತಿವೆ.
* ಚೀನಾ ರಕ್ಷಣಾ ಸಚಿವರ ಭೇಟಿ ವೇಳೆ ನಮ್ಮ ಸೇನೆ ಗಡಿ ನಿರ್ವಹಣೆ ವಿಚಾರದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಂಡಿದೆ ಎಂದು ತಿಳಿಸಿದೆ. ಈ ವೇಳೆ ಭಾರತ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆ ರಕ್ಷಿಸುವ ಸಂಕಲ್ಪದ ಬಗ್ಗೆಯೂ ಪ್ರಸ್ತಾಪಿಸಿದೆ.
* ಗಡಿಯಲ್ಲಿ ವಿಚಾರಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪರಿಹಾರ ದೊರಕಿಲ್ಲ ಭಾರತದ ಬೇಡಿಕೆಗಳನ್ನು ಚೀನಾ ಒಪ್ಪಿಕೊಂಡಿಲ್ಲ, ಅಗಸ್ಟ್ 29, 30ರ ರಾತ್ರಿ ಯಥಾಸ್ಥಿತಿ ಉಲ್ಲಂಘಿಸುವ ಪ್ರಯತ್ನ ಮಾಡಿತ್ತು.
* ಅದನ್ನು ತಡೆಗಟ್ಟುವ ಕೆಲಸವನ್ನು ನಮ್ಮ ಸೇನೆ ಮಾಡಿದೆ. ಈ ದಾಳಿ ಮಾಡುವ ಮೂಲಕ ಚೀನಾ ಹಳೆ ಒಪ್ಪಂದಗಳನ್ನು ಉಲ್ಲಂಘಿಸಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
* ಸಂಕಷ್ಟದ ವೇಳೆಯಲ್ಲಿ ನಮ್ಮ ಸೈನಿಕರಲ್ಲಿ ಉತ್ಸಾಹ ಕುಂದಿಲ್ಲ, 0 ಡಿಗ್ರಿ ವಾತಾವರಣದಲ್ಲೂ ಎಲ್ಲ ಹಂತಕ್ಕೂ ತಯರಾಗಿದ್ದಾರೆ.
* ಪ್ರಧಾನಿ ನರೇಂದ್ರ ಮೋದಿ ಗಡಿ ಭೇಟಿ ನೀಡಿದ್ದರು. ಈ ವೇಳೆ ಇಡೀ ದೇಶದ ಜನರು, ಸೈನಿಕರ ಜೊತೆಗಿದ್ದಾರೆ ಎನ್ನುವ ಸಂದೇಶ ಪ್ರಧಾನಿ ಸಾರಿದ್ದಾರೆ.
* ಪ್ರಧಾನಿ ಭೇಟಿ ಬಳಿಕ ಸೈನಿಕರಲ್ಲಿ ಹುಮ್ಮಸ್ಸು ದುಪ್ಪಟ್ಟಾಗಿದೆ ಜೀವದ ಹಂಗು ತೊರೆದು ದೇಶದ ಸೇವೆ ಮಾಡುತ್ತಿದ್ದಾರೆ.