ಕೇವಲ 7 ತಾಸಲ್ಲಿ 101 ಸಂತಾನಹರಣ ಶಸ್ತ್ರಚಿಕಿತ್ಸೆ: ತನಿಖೆಗೆ ಆದೇಶ!
* 101 ಮಹಿಳೆಯರಿಗೆ ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆ
* ಕೇವಲ 7 ತಾಸಲ್ಲಿ 101 ಸಂತಾನಹರಣ ಶಸ್ತ್ರಚಿಕಿತ್ಸೆ: ತನಿಖೆಗೆ ಆದೇಶ
* ದಿನಕ್ಕೆ ಗರಿಷ್ಠ 30 ಸರ್ಜರಿ ಮಾತ್ರ ನಡೆಸಬಹುದು
* 101 ಸರ್ಜರಿ ಹೇಗೆ ಮಾಡಿದ ಎಂಬುದೇ ಅಚ್ಚರಿ
ರಾಯ್ಪುರ(ಸೆ.05): ಕೇವಲ 7 ಗಂಟೆಯಲ್ಲಿ 101 ಮಹಿಳೆಯರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ್ದೇನೆ ಎಂದು ಹೇಳಿಕೊಳ್ಳುತ್ತಿರುವ ವೈದ್ಯನ ವಿರುದ್ಧ ತನಿಖೆಗೆ ಛತ್ತೀಸ್ಗಢ ಸರ್ಕಾರ ಆದೇಶಿಸಿದೆ.
ಸರ್ಕಾರದ ನಿಯಮದಂತೆ ಒಬ್ಬ ವೈದ್ಯ ದಿನವೊಂದಕ್ಕೆ ಗರಿಷ್ಠ 30 ಸಂತಾನಹರಣ ಸರ್ಜರಿ ಮಾಡಬಹುದು. ಆದರೆ, ಸುರ್ಜುಗಾ ಜಿಲ್ಲೆಯ ನರ್ಮದಾಪುರ ಎಂಬಲ್ಲಿ ಆ.27ರಂದು ಆಯೋಜಿಸಿದ್ದ ಸಂತಾನಹರಣ ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ಮಧ್ಯಾಹ್ನ 12ರಿಂದ ಸಂಜೆ 7ರವರೆಗೆ ವೈದ್ಯ ಡಾ
ಜಿಬ್ನಸ್ ಎಕ್ಕಾ ಎಂಬಾತ 101 ಮಹಿಳೆಯರಿಗೆ ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆ ನಡೆಸಿದ್ದಾನೆ ಎಂದು ಹೇಳಲಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೂಡ ಬಂದಿದ್ದವು.
ಈಗ ಈ ಬಗ್ಗೆ ಸರ್ಕಾರ ವೈದ್ಯ ಮತ್ತು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಶೋಕಾಸ್ ನೋಟಿಸ್ ನೀಡಿದೆ.
ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ವೈದ್ಯ, ‘ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಕಾಯುತ್ತಿದ್ದರು ಅವರೆಲ್ಲರೂ ಬಸ್ ಸಂಪರ್ಕಗಳಿಲ್ಲದ ದೂರದ ಊರುಗಳಿಂದ ಬಂದಿದ್ದರು. ಹಾಗಾಗಿ ಎಲ್ಲರಿಗೂ ಸರ್ಜರಿ ಮಾಡಲಾಯಿತು’ ಎಂದಿದ್ದಾನೆ.
2014ರಲ್ಲಿ ಬಿಲಾಸ್ಪುರದಲ್ಲಿ ಟ್ಯುಬೆಕ್ಟಮಿಗೆ ಒಳಗಾದ 83 ಮಹಿಳೆಯರು ಅಸ್ವಸ್ಥಗೊಂಡು 13 ಮಂದಿ ಸಾವನ್ನಪ್ಪಿದ್ದರು.