ಕವರೈಪೆಟ್ಟೈ ಬಳಿ ಭಾಗಮತಿ ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಹಲವು ಬೋಗಿಗಳು ಹಳಿ ತಪ್ಪಿ, ಎರಡು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಚೆನ್ನೈ (ಅ.11):  ಚೆನ್ನೈ ಸಮೀಪದ ಕವರೈಪೆಟ್ಟೈ ರೈಲು ನಿಲ್ದಾಣದ ಬಳಿ ಶುಕ್ರವಾರ ಮೈಸೂರಿನಿಂದ ದರ್ಭಾಂಗಕ್ಕೆಪ್ರಯಾಣ ಮಾಡುತ್ತಿದ್ದ ಭಾಗಮತಿ ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ಆರಂಭಿಕ ಸುದ್ದಿಗಳು ಬರುತ್ತಿದ್ದು, ಪರಿಣಾಮ ಏನಾಗಿದೆ ಎನ್ನುವ ಮಾಹಿತಿಗಳು ಈಗ ತಾನೆ ಬರುತ್ತಿವೆ. ಆರಂಭಿಕ ವರದಿಯ ಪ್ರಕಾರ ಎಕ್ಸ್‌ಪ್ರೆಸ್ ರೈಲು ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಅಪಘಾತದ ಸ್ಥಳಕ್ಕೆ ಶೀಘ್ರದಲ್ಲೇ ಆಗಮಿಸುವ ನಿರೀಕ್ಷೆಯಿದೆ. ಹಲವು ಬೋಗಿಗಳು ಹಳಿ ತಪ್ಪಿದ್ದು, ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗಳಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಿರುವಳ್ಳೂರು ಜಿಲ್ಲಾಧಿಕಾರಿ ಟಿ.ಪ್ರಭುಶಂಕರ್ ಪ್ರಕಾರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಹಾನಿ ಮತ್ತು ಸಾವುನೋವುಗಳ ಬಗ್ಗೆ ಪ್ರಾಥಮಿಕ ವಿವರಗಳನ್ನು ಇನ್ನೂ ನಿರೀಕ್ಷಿಸಲಾಗಿದೆ. ರೈಲಿಗೆ ಹಳಿ ತಪ್ಪಿದ್ದೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಎಕ್ಸ್ ಪ್ರೆಸ್ ರೈಲು ಲೂಪ್ ಲೈನ್ ಪ್ರವೇಶಿಸಿ ನಿಂತಿದ್ದ ರೈಲಿಗೆ ಡಿಕ್ಕಿ ಹೊಡೆದಿದೆ.

ಬೆಳಗ್ಗೆ 10.30ಕ್ಕೆ ಮೈಸೂರಿನಿಂದ ಬಿಹಾರದ ದರ್ಭಾಂಗಕ್ಕೆ ರೈಲು ಹೊರಟಿತ್ತು.ಶುಕ್ರವಾರ ರಾತ್ರಿ 8.30ರ ಹೊತ್ತಿಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.ಢಿಕ್ಕಿ ಹೊಡೆದ ರಭಸಕ್ಕೆ ಎಸಿ ಬೋಗಿಗಳು ಉಲ್ಟಾ ಆಗಿ ಬಿದ್ದಿವೆ ಎನ್ನಲಾಗಿದೆ. ಒಟ್ಟು 13 ಬೋಗಿಗಳು ಹಳಿ ತಪ್ಪಿವೆ ಎಂದು ವರದಿಯಾಗಿದೆ. ಸಾಕಷ್ಟು ಮಂದಿಗೆ ಗಾಯಗಳಾಗಿದ್ದು ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸಾವಿನ ಬಗ್ಗೆ ಈವರೆಗೂ ವರದಿಯಾಗಿಲ್ಲ.

ಆರಂಭಿಕ ವರದಿಗಳ ಪ್ರಕಾರ ರೈಲು ಸಿಬ್ಬಂದಿ ಹಳಿಯಲ್ಲಿ ಭಾರೀ ಎಳೆತವನ್ನು ಅನುಭವಿಸಿದ್ದರು.ಇದರಿಂದಾಗಿ ಎಕ್ಸ್‌ಪ್ರೆಸ್ ರೈಲು ಲೂಪ್ ಲೈನ್‌ಗೆ ಚಲಿಸಿತು ಮತ್ತು ಈ ವೇಳೆ ನಿಲುಗಡೆ ಮಾಡಿದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. "ರೈಲು ಗಂಟೆಗೆ 109 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದಾಗ ಅದರ ಸಿಬ್ಬಂದಿಗೆ ಇದ್ದಕ್ಕಿದ್ದಂತೆ ತೀವ್ರ ಜರ್ಕ್ ಅನುಭವವಾಯಿತು. ಪ್ಯಾಸೆಂಜರ್ ರೈಲು ಲೂಪ್ ಲೈನ್ ಅನ್ನು ಪ್ರವೇಶಿಸಿತು ಮತ್ತು ಅದೇ ಹಳಿಯಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ" ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಬೆಲ್ಲಿ ಲ್ಯಾಂಡಿಂಗ್‌ಗೆ ಅನುಮತಿ ನೀಡಿದ್ದ ಡಿಜಿಸಿಎ, 140 ಪ್ರಯಾಣಿಕರಿದ್ದ ವಿಮಾನ ಸೇಫ್‌ ಆಗಿ ಸಾಮಾನ್ಯ ಲ್ಯಾಂಡಿಂಗ್‌!

ಜನರು ರೈಲಿನಿಂದ ಪ್ರಯಾಣಿಕರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಾಗ ಕೋಚ್‌ಗಳಲ್ಲಿ ಒಂದರಿಂದ ಬೆಂಕಿ ಕಾಣಿಸಿಕೊಂಡಿರುವ ದೃಶ್ಯಗಳು ಪ್ರಸಾರವಾಗಿದೆ. ಘರ್ಷಣೆಯಿಂದಾಗಿ ಮಾರ್ಗದಲ್ಲಿ ರೈಲು ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಉಳಿದ ಪ್ರಯಾಣಿಕರಿಗೆ ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಲು ಪ್ರಯತ್ನಿಸಲಾಗುತ್ತಿದೆ.

ದಕ್ಷಿಣ ರೈಲ್ವೆಯ ಚೆನ್ನೈ ವಿಭಾಗವು ಸಹಾಯವಾಣಿ ಸಂಖ್ಯೆಗಳನ್ನು 044-25354151, 044-24354995 ಪ್ರಕಟಿಸಿದೆ.

ಇದನ್ನೂ ಓದಿ: Breaking: ಹೈಡ್ರಾಲಿಕ್‌ ವೈಫಲ್ಯ, ವಾಯುಮಾರ್ಗದಲ್ಲೇ ಎಮರ್ಜೆನ್ಸಿ ಘೋಷಿಸಿದ ಏರ್ ಇಂಡಿಯಾ ವಿಮಾನ

Scroll to load tweet…

ಸುದ್ದಿ ಅಪ್‌ಡೇಟ್‌ ಆಗುತ್ತಿದೆ