Champai Soren NDA family ಸೋರೆನ್ ಕುಟುಂಬದ ಆಪ್ತ ಎಂದು ಪರಿಗಣಿಸಲಾದ ಚಂಪೈ ಸೊರೆನ್ ಅವರು ಜಾರ್ಖಂಡ್ ಮುಖ್ಯಮಂತ್ರಿಯಾಗಿ "ಅವಮಾನ" ಅನುಭವಿಸಿದ್ದಾರೆ ಎಂದು ಹೇಳಿದ ನಂತರ ಜಿತನ್ ರಾಮ್ ಮಾಂಝಿ ವೈರಲ್‌ ಪೋಸ್ಟ್‌ ಮಾಡಿದ್ದಾರೆ.

ನವದೆಹಲಿ (ಆ.19): ಜಾರ್ಖಂಡ್‌ನಲ್ಲಿ ಮತ್ತೊಮ್ಮೆ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಆಗುವ ಸೂಚನೆ ಸಿಕ್ಕಿದೆ. ಜಾರ್ಖಂಡ್‌ ಮಾಜಿ ಸಿಎಂ ಚಂಪೈ ಸೊರೆನ್‌ ನವದೆಹಲಿಗೆ ಆಗಮಿಸಿದ್ದು, ಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ಕುತೂಹಗಳು ಎದ್ದಿವೆ. ಇದರ ನಡುವೆ ನಡುವೆ ಕೇಂದ್ರ ಸಚಿವ ಜಿತಿನ್‌ ರಾಮ್‌ ಮಾಂಜಿ ಭಾನುವಾರ ಅವರನ್ನು ಎನ್‌ಡಿಎ ಕುಟುಂಬಕ್ಕೆ ಸ್ವಾಗತಿಸುವಂಥ ಪೋಸ್ಟ್‌ಅನ್ನು ಹಾಕಿದ್ದಾರೆ. ಇದರಿಂದಾಗಿ ಅವರು ಎನ್‌ಡಿಎಗೆ ಸೇರಬಹುದು ಎನ್ನುವ ಕುತೂಹಲ ವ್ಯಕ್ತವಾಗಿದೆ. ಎಕ್ಸ್‌ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ಮೈಕ್ರೋ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ, ಚಂಪೈ ಸೊರೆನ್ ಅವರನ್ನು ಟೈಗರ್‌ ಎಂದು ಕರೆದಿದ್ದು, ಅವರು ಹುಲಿಯಾಗಿಯೇ ಉಳಿಯಲಿದ್ದಾರೆ ಎಂದು ತಿಳಿಸಿದ್ದಾರೆ. 'ಚಂಪೈ ದಾ. ನೀವು ಹಿಂದೂ ಕೂಡ ಹುಲಿ ಆಗಿದ್ರಿ, ಮುಂದೂ ಕೂಡ ಹುಲಿ ಆಗಿಯೇ ಉಳಿಯುತ್ತಾರೆ. ಎನ್‌ಡಿಎ ಕುಟುಂಬಕ್ಕೆ ನಿಮಗೆ ಸ್ವಾಗತ' ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಸೋರೆನ್ ಕುಟುಂಬದ ಆಪ್ತ ಎಂದು ಪರಿಗಣಿಸಲಾದ ಚಂಪೈ ಸೊರೆನ್ ಅವರು ಮುಖ್ಯಮಂತ್ರಿಯಾಗಿ "ಅವಮಾನ" ಅನುಭವಿಸಿದ್ದಾರೆ ಎಂದು ಹೇಳಿದ ನಂತರ ಹಿಂದೂಸ್ತಾನಿ ಅವಾಮ್ ಮೋರ್ಚಾ ಮುಖ್ಯಸ್ಥ ಜಿತಿನ್‌ ರಾಮ್‌ ಮಾಂಜಿ ಈ ಪೋಸ್ಟ್‌ ಮಾಡಿದ್ದು, ಇದು ಪರ್ಯಾಯ ಮಾರ್ಗವನ್ನು ಹುಡುಕಲು ಅವರನ್ನು ಒತ್ತಾಯ ಮಾಡಿದೆ.

ಎಕ್ಸ್‌ನಲ್ಲಿ ಬರೆದಿರುವ ಸುದೀರ್ಘ ಪೋಸ್ಟ್‌ನಲ್ಲಿ 67 ವರ್ಷದ ಜೆಎಂಎಂ ಪಕ್ಷದ ಹಿರಿಯ ರಾಜಕಾರಣಿ ಚಂಪೈ ಸೊರೆನ್‌ ತಮ್ಮ ಎದುರು ಮೂರು ಆಯ್ಕೆಗಳಿಗೆ ಎಂದು ಹೇಳಿದ್ದಾರೆ. ಒಂದು ರಾಜಕೀಯದಿಂದ ನಿವೃತ್ತಿ ಹೊಂದುವುದು, ಇಲ್ಲದೇ ಹೊಸ ರಾಜಕೀಯ ಪಕ್ಷವನ್ನೇ ಆರಂಭಿಸುವುದು, ಇದಾವುದು ಆಗದೇ ಇದ್ದಲ್ಲಿ ತಮ್ಮ ಪ್ರಯಾಣದಲ್ಲಿ ಮತ್ತೊಮ್ಮೆ ಜೊತೆಗಾರರನ್ನು ಹುಡುಕುವುದು ಎಂದು ತಿಳಿಸಿದ್ದಾರೆ.

"ಇಂದಿನಿಂದ ನನ್ನ ಜೀವನದ ಹೊಸ ಅಧ್ಯಾಯ ಪ್ರಾರಂಭವಾಗಲಿದೆ ಎಂದು ನಾನು ಅದೇ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾರವಾದ ಹೃದಯದಿಂದ ಹೇಳಿದ್ದೇನೆ. ನನಗೆ ಮೂರು ಆಯ್ಕೆಗಳಿವೆ. ಮೊದಲು ರಾಜಕೀಯದಿಂದ ನಿವೃತ್ತಿ, ಎರಡನೆಯದು, ನನ್ನದೇ ಆದ ಪಕ್ಷ ಸ್ಥಾಪಿಸುವುದು ಮೂರನೆಯದು, ನಾನು ಈ ಹಾದಿಯಲ್ಲಿ ಒಬ್ಬ ಒಡನಾಡಿಯನ್ನು ಕಂಡುಕೊಳ್ಳುವುದು. ಆ ದಿನದಿಂದ ಇಂದಿನವರೆಗೆ ಮತ್ತು ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆಯವರೆಗೆ, ಈ ಪ್ರಯಾಣದಲ್ಲಿ ನನಗೆ ಎಲ್ಲಾ ಆಯ್ಕೆಗಳು ಮುಕ್ತವಾಗಿವೆ, ”ಎಂದು ಚಂಪೈ ಸೊರೆನ್ ತಿಳಿಸಿದ್ದಾರೆ.

ಮುಖ್ಯಮಂತ್ರಿಯಾಗಿ ‘ಕಹಿ ಅವಮಾನ’ ಅನುಭವಿಸಿದ್ದು, ಪರ್ಯಾಯ ಮಾರ್ಗ ಹುಡುಕಲೂ ಇದು ಕಾರಣವಾಗಿದೆ ಎಂದೂ ಅವರು ಹೇಳಿದ್ದಾರೆ. "ತುಂಬಾ ಅವಮಾನದ ನಂತರ, ನಾನು ಪರ್ಯಾಯ ಮಾರ್ಗವನ್ನು ಹುಡುಕಲು ಮುಂದಾಗಿದ್ದೇನೆ ಎಂದು ಚಂಪೈ ಸೊರೆನ್ ತಿಳಿಸಿದ್ದಾರೆ.

ಹೇಮಂತ್‌ಗೆ ಮತ್ತೆ ಜಾರ್ಖಂಡ್ ಸಿಎಂ ಪಟ್ಟ- ಸರ್ಕಾರ ರಚನೆಗೆ ಹಕ್ಕು ಮಂಡನೆ

"ಜೆಎಂಎಂ ಶಾಸಕಾಂಗ ಪಕ್ಷದ ಸಭೆಯಲ್ಲಿ ನನಗೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿತ್ತು. ಇದರಿಂದ ನಾನು ಆಘಾತಗೊಂಡಿದೆ. ನನಗೆ ಅಧಿಕಾರದ ಆಸೆಯಿಲ್ಲದ ಕಾರಣ, ನಾನು ತಕ್ಷಣವೇ ರಾಜೀನಾಮೆ ನೀಡಿದ್ದೇನೆ. ಆದರೆ, ನನ್ನ ಆತ್ಮಗೌರವವು ತೀವ್ರವಾಗಿ ಘಾಸಿಗೊಂಡಿದೆ" ಎಂದು ಸೊರೆನ್‌ ಹೇಳಿದ್ದಾರೆ. ಹಿರಿಯ ಜೆಎಂಎಂ ನಾಯಕ, ಪಕ್ಷದ ಮುಖ್ಯಸ್ಥ ಶಿಬು ಸೊರೆನ್ ಆರೋಗ್ಯದ ಕಾರಣಗಳಿಂದ ರಾಜಕೀಯದಲ್ಲಿ ಸಕ್ರಿಯವಾಗಿಲ್ಲ ಎಂದು ಉಲ್ಲೇಖಿಸಿದ್ದಾರೆ. "ಅವರು ಸಕ್ರಿಯರಾಗಿದ್ದರೆ, ಎಲ್ಲವೂ ವಿಭಿನ್ನವಾಗಿರುತ್ತಿತ್ತು" ಎಂದು ಚಂಪೈ ಸೊರೆನ್ ತಿಳಿಸಿದ್ದಾರೆ.

ನಾಲ್ಕೇ ತಿಂಗಳಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ರಾಜೀನಾಮೆ!

ಜಾರ್ಖಂಡ್ ಮಾಜಿ ಮುಖ್ಯಮಂತ್ರಿಯ ಸೆನ್ಸೇಷನಲ್‌ ಎಕ್ಸ್‌ ಪೋಸ್ಟ್ ಅವರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ನವದೆಹಲಿಗೆ ಬಂದ ಕೆಲವೇ ಗಂಟೆಗಳ ನಂತರ ಬಂದಿದೆ. ಭೂಕಬಳಿಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗುವ ಮುನ್ನವೇ ಸಿಎಂ ಆಗಿದ್ದ ಹೇಮಂತ್ ಸೊರೆನ್ ರಾಜೀನಾಮೆ ನೀಡಿದ ದಿನಗಳ ನಂತರ, ಫೆಬ್ರವರಿ 2 ರಂದು ಜಾರ್ಖಂಡ್‌ನ 12 ನೇ ಮುಖ್ಯಮಂತ್ರಿಯಾಗಿ ಚಂಪೈ ಸೊರೆನ್ ನೇಮಕವಾಗಿದ್ದರು. ಐದು ತಿಂಗಳ ನಂತರ, ಹೇಮಂತ್ ಸೊರೆನ್ ಹೈಕೋರ್ಟ್‌ನಿಂದ ಜಾಮೀನು ಪಡೆದುಕೊಂಡಿದ್ದರು. ಚಂಪೈ ಸೊರೆನ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು, ಜೆಎಂಎಂ ಕಾರ್ಯಾಧ್ಯಕ್ಷರು ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಅವರು ದಾರಿ ಮಾಡಿ ಕೊಟ್ಟಿದ್ದರು.