* ಟೈಮ್ಸ್ ಗ್ರೂಪ್ ಅಧ್ಯಕ್ಷೆ ಇಂದು ಜೈನ್ ಇನ್ನಿಲ್ಲ* ಕೊರೋನಾ ಕಾರಣ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು* 2000 ನೇ ಇಸವಿಯಲ್ಲಿ ಟೈಮ್ಸ್ ಫೌಂಡೇಶನ್ ಸ್ಥಾಪಿಸಿದರು* ಭಾರತೀಯ ಜ್ಞಾನಪೀಠ ಟ್ರಸ್ಟ್ ಅಧ್ಯಕ್ಷೆಯಾಗಿಯೂ ಕೆಲಸ  ಮಾಡಿದ್ದರು

ನವದೆಹಲಿ(ಮೇ 13) ಟೈಮ್ಸ್ ಗ್ರೂಪ್ ಅಧ್ಯಕ್ಷೆ ಇಂದು ಜೈನ್(84) ನಿಧನರಾಗಿದ್ದಾರೆ. ಕೊರೋನಾ ಸೋಂಕಿನ ಕಾರಣ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಅವರು ಗುರುವಾರ ರಾತ್ರಿ 9.35ಕ್ಕೆ ನಿಧನರಾಗಿದ್ದಾರೆ. ಇಂದು ಪ್ರತಿಷ್ಠಿತ ಸಾಹು ಜೈನ್ ಕುಟುಂಬದ ಕುಡಿ. 

Add Asianetnews Kannada as a Preferred SourcegooglePreferred

ಇಂದು ಜೈನ್ ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದವರು. ಮಹಿಳಾ ಹಕ್ಕುಗಳ ಹೋರಾಟಗಾರ್ತಿಯಾಗಿಯೂ ಹೆಸರು ಸಂಪಾದಿಸಿದ್ದರು. ಆಧ್ಮಾತ್ಮ ಕ್ಷೇತ್ರದಲ್ಲಿಯೂ ಹೆಸರು ಮಾಡಿದ್ದು ಉಪನ್ಯಾಸ ನೀಡುತ್ತಿದ್ದರು. 1999 ರಲ್ಲಿ ಟೈಮ್ಸ್ ಗ್ರೂಪ್ ಅಧ್ಯಕ್ಷೆಯಾದರು. 2000 ನೇ ಇಸವಿಯಲ್ಲಿ ಟೈಮ್ಸ್ ಫೌಂಡೇಶನ್ ಸ್ಥಾಪಿಸಿದರು. ಬರಗಾಲ, ಪ್ರವಾಹ, ನಿಸರ್ಗ ವಿಕೋಪದ ಸಮಯದಲ್ಲಿ ಫೌಂಡೇಶನ್ ನಿಂದ ಸಹಾಯ ನೀಡುತ್ತಾ ಬಂದರು.

ವೆಂಟಿಲೇಟರ್ ಬೆಡ್ ಸಿಗದೆ ಕನ್ನಡದ ಹಿರಿಯ ಕಲಾವಿದ ನಿಧನ

ಇದಕ್ಕೂ ಮುನ್ನವೇ ಅಂದರೆ 1983 ರಲ್ಲಿ FICCI ಎಂಬ ಮಹಿಳಾ ಸಂಘಟನೆ ನೇತೃತ್ವ ವಹಿಸಿಕೊಂಡಿದ್ದರು. ಭಾರತೀಯ ಜ್ಞಾನಪೀಠ ಟ್ರಸ್ಟ್ ಅಧ್ಯಕ್ಷೆಯಾಗಿಯೂ ಕೆಲಸ ಮಾಡಿದ್ದರು. 

ಫೋರ್ಬ್ಸ್ 2015 ರ ಶ್ರೇಯಾಂಕದ ಪ್ರಕಾರ ಭಾರತದ 57 ನೇ ಶ್ರೀಮಂತ ವ್ಯಕ್ತಿ ಮತ್ತು ವಿಶ್ವದ 549 ನೇ ಶ್ರೀಮಂತ ವ್ಯಕ್ತಿ ಎಂದು ಹೇಳಿತ್ತು. ಜನವರಿ 2016 ರಲ್ಲಿ ಭಾರತ ಸರ್ಕಾರದಿಂದ ಪದ್ಮಭೂಷಣ ಪುರಸ್ಕಾರಕ್ಕೆ ಪಾತ್ರವಾಗಿದ್ದರು. ಅಶೋಕ್ ಕುಮಾರ್ ಜೈನ್ ಅವರ ಪತಿ. ಇಬ್ಬರು ಗಂಡು ಮಕ್ಕಳು ಸಮೀರ್ ಜೈನ್, ವಿನೀತ್ ಜೈನ್ ಮತ್ತು ಓರ್ವ ಪುತ್ರಿ ಜೈನ್ ಅವರ ಕುಟುಂಬ. 

ಶ್ರವಣಬೆಳಗೋಳದ ಭಕ್ತೆ:
ಟೈಮ್ಸ್ ಗ್ರೂಪ್ ಅಧ್ಯಕ್ಷರಾದ ಇಂದು ಜೈನ್ ಅವರು ನಿಧನರಾಗಿದ್ದು, ಅವರ ಇಡೀ ಕುಟುಂಬ ಹಾಸನದಲ್ಲಿ ಜಿಲ್ಲೆ ಶ್ರವಣಬೆಳಗೊಳ ಜೈನ ಮಠದ ಭಕ್ತರಾಗಿದ್ದರು. ಅವರ ಕುಟುಂಬದ ಸಾ.ಹು.ಶ್ರೇಯಾಂಸ್ ಪ್ರಸಾದ್ ಜೈನ್ ಅವರು 1982 ರ ಮಹಾಮಸ್ತಕಾಭಿಷೇಕದ ರಾಷ್ಷ್ಟ್ರೀಯ ಮಂಡಳಿ ಅಧ್ಯಕ್ಷರಾಗಿದ್ದರು. ಇವರ ಕುಟುಂಬ ಕಟ್ಟಿಸಿದ ಅತಿಥಿ ಗೃಹ ಶ್ರವಣಬೆಳಗೊಳದ ಮೊಟ್ಟಮೊದಲ ಅತಿಥಿ ಗೃಹವಾಗಿದೆ. ಶ್ರವಣಬೆಳಗೊಳ ಜೈನ‌ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಇವರ ಕುಟುಂಬ ಶ್ರೀ‌ಮಠದ ನಿರ್ದೇಶನದಂತೆ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿದೆ.
ಶ್ರೀಮಠದೊಂದಿಗೆ ಭಾರೀ ಒಡನಾಟ ಹೊಂದಿದ್ದ ಇಂದು ಜೈನ್ ಅವರು ಕಳೆದ 2018 ರ ಮಹಾಮಸ್ತಕಾಭಿಷೇಕಕ್ಕೆ ಬಂದಿದ್ದರು. ಇದಕ್ಕೂ ಮುನ್ನ ಅವರು ಟೈಮ್ಸ್‌ ಗ್ರೂಪಿನ ಅಧ್ಯಕ್ಷರಾಗಿದ್ದರೂ ಆಗಾಗ ಶ್ರವಣಬೆಳಗೊಳಕ್ಕೆ ಬಂದು ಕೆಲ ದಿನಗಳ‌ ಕಾಲ ಒಬ್ಬ ಸಾಮಾನ್ಯ ಭಕ್ತರಂತೆ ತಂಗಿದ್ದು ಮಠದ ಸೇವೆ ಮಾಢುತ್ತಿದ್ದರು.

 ಈ ಸಂದರ್ಭದಲ್ಲಿ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳ ಮಾರ್ಗದರ್ಶನದಂತೆ ಹಲವಾರು ಜನೋಪಯೋಗಿ ಕೆಲಸ ಕಾರ್ಯಗಳಿಗೆ ನೆರವು ನೀಡಿದ್ದಾರೆ. ಹಾಗೆಯೇ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಮನೆ ಕಾರ್ಯ ಎಂಬಂತೆ ಇವರ ಕುಟುಂಬ ಹಲವು ದಿನಗಳು ಇಲ್ಲಿಯೇ ತಂಗಿದ್ದು ಮಸ್ತಕಾಭಿಷೇಕದ ಯಶಸ್ಸಿಗೆ ಕೈಜೋಡಿಸುತ್ತಿತ್ತು.