ಕುಂಭಮೇಳದಿಂದ ಕೊರೋನಾ ಸೋಂಕು: ಕೇಂದ್ರ ಎಚ್ಚರಿಕೆ!
ಕುಂಭಮೇಳದಿಂದ ಸೋಂಕು ಹೆಚ್ಚುವ ಸಾಧ್ಯತೆ: ಕೇಂದ್ರದ ಎಚ್ಚರಿಕೆ| ಸೋಂಕು ವ್ಯಾಪಕವಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ| ಐಸಿಎಂಆರ್ ಮಾರ್ಗಸೂಚಿಯಂತೆ ಕೋವಿಡ್ ಪರೀಕ್ಷೆ ನಡೆಸಿ| ಉತ್ತರಾಖಂಡ್ ಸರ್ಕಾರಕ್ಕೆ ಕೇಂದ್ರ ಸರ್ಕಾರ ಎಚ್ಚರಿಕೆ
ನವದೆಹಲಿ(ಮಾ.22): ದೇಶಾದ್ಯಂತ ಮತ್ತೆ ಕೊರೋನಾ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ನಡುವೆಯೇ ಉತ್ತರಾಖಂಡ್ ಸರ್ಕಾರ ಕುಂಭಮೇಳಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕುಂಭ ಮೇಳದಲ್ಲಿ ಕೊರೋನಾ ಸೋಂಕು ಹಬ್ಬುವಿಕೆ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಉತ್ತರಾಖಂಡ್ ಸರ್ಕಾರಕ್ಕೆ ಎಚ್ಚರಿಕೆ ರೂಪದ ಪತ್ರ ಬರೆದಿದೆ. ಅಲ್ಲದೆ ಐಸಿಎಂಆರ್ ಮಾರ್ಗಸೂಚಿ ಅನ್ವಯ ಸ್ಥಳೀಯರು ಮತ್ತು ಇತರ ಪ್ರದೇಶಗಳಿಂದ ಬರುವ ಭಕ್ತಾದಿಗಳ ಕೊರೋನಾ ಪರೀಕ್ಷೆಯ ವ್ಯವಸ್ಥೆಯನ್ನು ಹೆಚ್ಚುಸುವಂತೆ ನಿರ್ದೇಶಿಸಲಾಗಿದೆ.
ಏ.1ರಿಂದ ಹರಿದ್ವಾರದಲ್ಲಿ ಆರಂಭವಾಗಲಿರುವ ಕುಂಭಮೇಳದಲ್ಲಿ ದೇಶದ ವಿವಿಧ ಭಾಗಗಳಿಂದ ಭಕ್ತ ಸಾಗರವೇ ಹರಿದುಬರಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕುಂಭಮೇಳದಲ್ಲಿ ಜನ ಸಾಮಾನ್ಯರ ಆರೋಗ್ಯ ದೃಷ್ಟಿಯಿಂದ ಕೈಗೊಳ್ಳಲಾದ ವಸ್ತುಸ್ಥಿತಿಯನ್ನು ಅರಿಯಲು ಕೇಂದ್ರ ಸರ್ಕಾರ, ಉತ್ತರಾಖಂಡ್ಗೆ ಉನ್ನತ ಹಂತದ ತಂಡವೊಂದನ್ನು ರವಾನಿಸಿತ್ತು. ಈ ತಂಡವು ಕುಂಭಮೇಳದ ಬಳಿಕ ಸ್ಥಳೀಯರಲ್ಲಿ ಸೋಂಕು ಹೆಚ್ಚಾಗಿ ವ್ಯಾಪಿಸುವ ಸಾಧ್ಯತೆಯಿದೆ. ಅಲ್ಲದೆ ಈಗಾಗಲೇ ರಾಜ್ಯದಲ್ಲಿ ಪ್ರತೀ ದಿನವೂ 10-20 ಯಾತ್ರಾರ್ಥಿಗಳು ಮತ್ತು 10-20 ಸ್ಥಳೀಯರು ಕೊರೋನಾ ವೈರಸ್ಗೆ ತುತ್ತಾಗುತ್ತಿದ್ದಾರೆ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಈ ಹಿನ್ನೆಲೆಯಲ್ಲಿ ಕುಂಭಮೇಳದ ವೇಳೆ ಕೇವಲ 50 ಸಾವಿರ ಮಂದಿಗೆ ರಾರಯಪಿಡ್ ಆ್ಯಂಟಿಜೆನ್ ಟೆಸ್ಟ್ ಮತ್ತು 5 ಸಾವಿರ ಮಂದಿಯ ಆರ್ಟಿಪಿಸಿಆರ್ ಪರೀಕ್ಷೆಯಿಂದ ಏನೂ ಪ್ರಯೋಜನವಿಲ್ಲ. ಇದಕ್ಕೆ ಬದಲಾಗಿ ಐಸಿಎಂಆರ್ ಮಾರ್ಗಸೂಚಿಯಂತೆ ಸ್ಥಳೀಯರು ಮತ್ತು ಯಾತ್ರಾರ್ಥಿಗಳಿಗೆ ಪರೀಕ್ಷೆಯನ್ನು ಹೆಚ್ಚಿಸಬೇಕು ಎಂದು ಉತ್ತರಾಖಂಡ್ ಸರ್ಕಾರಕ್ಕೆ ಸೂಚಿಸಿದೆ.