Hyderabad Liberation Day: ಕೇಂದ್ರ ಸರ್ಕಾರದಿಂದ ಅಧಿಕೃತ ಆಚರಣೆ; ಸಿಎಂ ಬೊಮ್ಮಾಯಿಗೂ ಆಹ್ವಾನ
ಹೈದರಾಬಾದ್ ವಿಮೋಚನೆಯ ಅಮೃತ ಮಹೋತ್ಸವಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಲಿದ್ದಾರೆ. ಸೆಪ್ಟೆಂಬರ್ 17 ರಂದು ಚಾಲನೆ ಸಿಗಲಿದ್ದು, ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿಗೂ ಕೇಂದ್ರದಿಂದ ಆಹ್ವಾನ ನೀಡಲಾಗಿದೆ.
ನವದೆಹಲಿ: ಕಲ್ಯಾಣ ಕರ್ನಾಟಕವನ್ನು ಒಳಗೊಂಡ ಹೈದರಾಬಾದ್ ರಾಜ್ಯ ನಿಜಾಮರ ಆಳ್ವಿಕೆಯಿಂದ ವಿಮೋಚನೆಗೊಂಡು 2023ರ ಸೆಪ್ಟೆಂಬರ್ 17ಕ್ಕೆ 75 ವರ್ಷಗಳು ತುಂಬಲಿವೆ. ಈ ಹಿನ್ನೆಲೆಯಲ್ಲಿ, ಪ್ರತಿ ವರ್ಷ ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯ ಸರ್ಕಾರಗಳಿಂದ ಪ್ರತ್ಯೇಕವಾಗಿ ಆಚರಿಲಾಗುತ್ತಿದ್ದ ‘ಹೈದರಾಬಾದ್ ವಿಮೋಚನಾ ದಿವಸ’ವನ್ನು ಈ ಸಲ ಅಮೃತ ಮಹೋತ್ಸವದ ಕಾರಣ ಕೇಂದ್ರ ಸರ್ಕಾರವೇ ಆಚರಿಸಲು ನಿರ್ಧರಿಸಿದೆ. ಬರುವ ಸೆಪ್ಟೆಂಬರ್ 17ರಂದು ಹೈದರಾಬಾದ್ನ ಪೆರೇಡ್ ಮೈದಾನದಲ್ಲಿ ಅಮೃತ ಮಹೋತ್ಸವದ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಖ್ಯ ಅತಿಥಿಯಾಗಿ ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ವರ್ಷವಿಡೀ ನಡೆಯುವ ಆಚರಣೆಯ ಉದ್ಘಾಟನಾ ಸಮಾರಂಭಕ್ಕೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರನ್ನು ಆಹ್ವಾನಿಸಿ ಪತ್ರ ಬರೆಯಲಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ ಅವರು ತಿಳಿಸಿದ್ದಾರೆ.
“ಭಾರತ ಸರ್ಕಾರವು ವಿವಿಧ ಅಂಶಗಳನ್ನು ಎಚ್ಚರಿಕೆಯಿಂದ ಪರಿಗಣಿಸಿದ ನಂತರ, ಹೈದರಾಬಾದ್ ರಾಜ್ಯ ವಿಮೋಚನೆಯ 75 ನೇ ವರ್ಷವನ್ನು ಆಚರಿಸಲು ನಿರ್ಧರಿಸಿದೆ ಎಂದು ನಿಮಗೆ ತಿಳಿಸಲು ನನಗೆ ಸಂತೋಷವಾಗಿದೆ. ಭಾರತ ಸರ್ಕಾರವು ಸೆಪ್ಟೆಂಬರ್ 17, 2022 ರಿಂದ ಸೆಪ್ಟೆಂಬರ್ 17, 2023 ರವರೆಗೆ ‘ಹೈದರಾಬಾದ್ ರಾಜ್ಯ ವಿಮೋಚನೆ’ಯ ವರ್ಷಪೂರ್ತಿ ಸ್ಮರಣಾರ್ಥವನ್ನು ಅನುಮೋದಿಸಿದೆ ”ಎಂದು ಕಿಶನ್ ರೆಡ್ಡಿ ಸೆಪ್ಟೆಂಬರ್ 3 ರ ಪ್ರತಿ ಪತ್ರದಲ್ಲಿ ಬರೆದಿದ್ದಾರೆ.
ಕೆಸಿಆರ್ ಪತನ ಆರಂಭವಾಗಿದೆ: ತೆಲಂಗಾಣ ರ್ಯಾಲಿಯಲ್ಲಿ ಅಮಿತ್ ಶಾ ಗುಡುಗು
ಅವರು ತಮ್ಮ ರಾಜ್ಯಗಳಾದ್ಯಂತ ಸೂಕ್ತ ಕಾರ್ಯಕ್ರಮಗಳೊಂದಿಗೆ ಸ್ಮರಣಾರ್ಥ ಉದ್ಘಾಟನಾ ದಿನವನ್ನು ಆಚರಿಸಲು 3 ರಾಜ್ಯಗಳ ಮುಖ್ಯಮಂತ್ರಿಗಳಿಗೆ ವಿನಂತಿಸಿದ್ದಾರೆ. "ವರ್ಷವಿಡೀ ಈವೆಂಟ್ಗಳು ಮತ್ತು ಸ್ಮರಣಿಕೆಗಳನ್ನು ಗುರುತಿಸಲು ಮತ್ತು ಈ ಯೋಜನೆಗಳನ್ನು ಭಾರತ ಸರ್ಕಾರದೊಂದಿಗೆ ಹಂಚಿಕೊಳ್ಳಲು ನಾನು ನಿಮ್ಮನ್ನು ವಿನಂತಿಸುತ್ತೇನೆ, ಇದರಿಂದಾಗಿ ವರ್ಷಪೂರ್ತಿ ಸ್ಮರಣಾರ್ಥಗಳನ್ನು ಯೋಜಿಸುವಲ್ಲಿ ಸಮಗ್ರ ವಿಧಾನವನ್ನು ತೆಗೆದುಕೊಳ್ಳಬಹುದು" ಎಂದು ಕಿಶನ್ ರೆಡ್ಡಿ ಪತ್ರದಲ್ಲಿ ಬರೆದಿದ್ದಾರೆ.
‘ಅಮೃತ ಮಹೋತ್ಸವ ಆಚರಣೆ ಈ ವರ್ಷದ ಸೆಪ್ಟೆಂಬರ್ 17ರಿಂದ ಆರಂಭವಾಗಿ 2023ರ ಸೆಪ್ಟೆಂಬರ್ 17ರವರೆಗೆ ನಡೆಯಲಿದೆ. ತಮ್ಮ ತಮ್ಮ ರಾಜ್ಯಗಳಲ್ಲಿ ಸೂಕ್ತ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಅಮೃತ ಮಹೋತ್ಸವದ ಉದ್ಘಾಟನಾ ಸಮಾರಂಭವನ್ನು ಆಚರಿಸಬೇಕು. ವರ್ಷವಿಡೀ ವಿವಿಧ ಸಮಾರಂಭಗಳನ್ನು ನಡೆಸಬೇಕು. ಇದು ಏಕೀಕರಣಕ್ಕೆ ಹೋರಾಡಿದ ವಲ್ಲಭಭಾಯಿ ಪಟೇಲರಿಗೆ ನಿಜವಾದ ಶ್ರದ್ಧಾಂಜಲಿ’ ಎಂದು ಮೂರೂ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಅವರು ಪತ್ರ ಬರೆದಿದ್ದಾರೆ. ತೆಲಂಗಾಣ ವಿಧಾನಸಭೆ ಚುನಾವಣೆ ಮುಂದಿನ ವರ್ಷ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಈ ನಡೆ ಕುತೂಹಲ ಕೆರಳಿಸಿದೆ.
ಇದರ ನಡುವೆಯೇ ಕೇಂದ್ರದ ನಿರ್ಧಾರಕ್ಕೆ ಆಕ್ಷೇಪಿಸಿರುವ ಮಜ್ಲಿಸ್ ಪಾರ್ಟಿ ಮುಖಂಡ ಅಸಾದುದ್ದೀನ್ ಒವೈಸಿ, ‘ಇದನ್ನು ಹೈದರಾಬಾದ್ ವಿಮೋಚನೆ ಎನ್ನುವ ಬದಲು ರಾಷ್ಟ್ರೀಯ ಏಕೀಕರಣ ದಿನ ಎಂದು ಆಚರಿಸಲಿ. ಏಕೆಂದರೆ ಇದು ದೇಶ ಒಗ್ಗೂಡಿಸುವ ಹೋರಾಟ ಆಗಿತ್ತು’ ಎಂದಿದ್ದಾರೆ.
ಜ್ಯೂ. ಎನ್ಟಿಆರ್ ಜೊತೆ ಅಮಿತ್ ಶಾ ಡಿನ್ನರ್: ಭೇಟಿ ಹಿಂದಿದ್ಯಾ ರಾಜಕೀಯ ಲೆಕ್ಕಾಚಾರ?
ಸ್ವಾತಂತ್ರ್ಯ ಸಿಕ್ಕು 1 ವರ್ಷ ಬಳಿಕ ವಿಮೋಚನೆ:
1947ರ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ದೊರತಿತ್ತಾದರೂ, ಹೈದರಾಬಾದ್ ರಾಜ್ಯ ಮಾತ್ರ ನಿಜಾಮರ ಆಳ್ವಿಕೆಗೆ ಒಳಪಟ್ಟಿತ್ತು. ನಿಜಾಮರ ಆಳ್ವಿಕೆಯಲ್ಲಿ ಕರ್ನಾಟಕದ ಹೈದರಾಬಾದ್ ಕರ್ನಾಟಕ (ಈಗಿನ ಕಲ್ಯಾಣ ಕರ್ನಾಟಕ), ತೆಲಂಗಾಣ ಹಾಗೂ ಮಹಾರಾಷ್ಟ್ರದ ಮರಾಠವಾಡಾ ಪ್ರದೇಶಗಳು ಇದ್ದವು. 1948ರಲ್ಲಿ ‘ಆಪರೇಷನ್ ಪೋಲೋ’ ಹೆಸರಿನಲ್ಲಿ ಪೊಲೀಸ್ ಕಾರ್ಯಾಚರಣೆ ನಡೆಸಿ, ಸೆ.17ರಂದು ಅದನ್ನು ಭಾರತ ಒಕ್ಕೂಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಇದಕ್ಕೆ ವಲ್ಲಭಭಾಯಿ ಪಟೇಲರು ಸಾಕಷ್ಟು ಶ್ರಮಿಸಿದ್ದರು.