ಕಾಲೆಳೆದರೂ ಕನ್ನಡಿಗ ಸತೀಶ್ ಆಚಾರ್ಯ ಕಾರ್ಟೂನ್ ಮೆಚ್ಚಿ ಟ್ವೀಟ್ ಮಾಡಿದ ಕೇಂದ್ರ ಸಚಿವ!
ಸರ್ಕಾರದ ನೀತಿ ನಿರೂಪಣೆ ಮೇಲೆ ಪ್ರತಿಬಾರಿಯೂ 'ವಕ್ರ' ದೃಷ್ಟಿಯಿಂದಲೇ ನೋಡುವ ಕಾರ್ಟೂನಿಸ್ಟ್ಗಳ ಮೇಲೆ ಸರ್ಕಾರ ಸಿಹಿ-ಕಹಿ ಸಂಬಂಧ ಹೊಂದಿರುತ್ತದೆ. ರೇಖೆಗಳ ಮೂಲಕವೇ ಕೊಂಕು ನುಡಿಯುವ ಇಂಥ ಕಾರ್ಟೂನಿಸ್ಟ್ಗಳನ್ನು ರಾಜಕಾರಣಿಗಳು ಮೆಚ್ಚುವುದು ಬಹಳ ಅಪರೂಪ.
ಬೆಂಗಳೂರು (ಜೂ.16): ಸರ್ಕಾರದ ನೀತಿಗಳು ಹಾಗೂ ಕಾನೂನುಗಳ ವಿರುದ್ಧ ತಮ್ಮದೇ ಆದ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುವಲ್ಲಿ ಕಾರ್ಟೂನಿಸ್ಟ್ಗಳು ಹೆಸರುವಾಸಿ. ಆದರೆ, ಹೆಚ್ಚಿನ ರಾಜಕಾರಣಿಗಳು ತಮ್ಮ ಕುರಿತಾಗಿ ಬರೆದ ವ್ಯಂಗ್ಯಚಿತ್ರಗಳನ್ನು ಸ್ಪೋರ್ಟಿವ್ ಆಗಿ ತೆಗೆದುಕೊಳ್ಳೋದಿಲ್ಲ. ತೀರಾ ಅಪರೂಪ ಎನ್ನುವಂತೆ ರಾಜಕಾರಣಿಗಳು, ಕಾರ್ಟೂನಿಸ್ಟ್ಗಳು ಬಿಡಿಸಿದ ತಮ್ಮದೇ ವ್ಯಂಗ್ಯಚಿತ್ರವನ್ನು ಮೆಚ್ಚಿಕೊಂಡು ಮಾತನಾಡುತ್ತಾರೆ. ಈ ವಾರ ಸುದ್ದಿಯಲ್ಲಿದ್ದ ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್, ತಮ್ಮ ಕುರಿತಾಗಿ ಈ ವಾರ ಬಂದ ಎರಡು ಕಾರ್ಟೂನ್ಗಳನ್ನು ಮೆಚ್ಚಿ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಒಂದು ಕಾರ್ಟೂನ್ ಕನ್ನಡಿಗ ಸತೀಶ್ ಆಚಾರ್ಯ ಅವರದ್ದಾಗಿದೆ. ಇವರು ಬರೆದಿರುವ ಕಾರ್ಟೂನ್ಗಳನ್ನು ನಾನು ಮೆಚ್ಚಿಕೊಂಡಿದ್ದೇನೆ. ಆದರೆ, ಅವರು ಹೇಳಿರುವ ವಿಚಾರಗಳನ್ನಲ್ಲ ಎಂದು ಬರೆದಿರುವ ಅವರು, ಎರಡೂ ಕಾರ್ಟೂನ್ಗಳನ್ನು ಟ್ವೀಟ್ ಮಾಡಿದ್ದಾರೆ. ಇನ್ನು ರಾಜೀವ್ ಚಂದ್ರಶೇಖರ್ ಅವರು ಕಾರ್ಟೂನ್ಗಳನ್ನು ಮೆಚ್ಚಿ ಮಾಡಿರುವ ಟ್ವೀಟ್ಗೆ ಹೆಚ್ಚಿನವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಈ ಎರಡೂ ಕಾರ್ಟೂನ್ಗಳನ್ನು ನೀವು ಶೇರ್ ಮಾಡಿಕೊಂಡ್ಡೀರಿ ಅದನ್ನು ನೋಡೋಕೆ ಖುಷಿಯಾಗುತ್ತದೆ. ಇಂಥ ಕಾರ್ಟೂನ್ಗಳನ್ನು ಸ್ಪೋರ್ಟಿವ್ ಆಗಿ ತೆಗೆದುಕೊಳ್ಳುವವರ ಸಂಖ್ಯೆ ನಮ್ಮ ನಡುವೆ ಬಹಳ ಕಡಿಮೆ ಇದೆ' ಎಂದು ಹರಿಪ್ರಸಾದ್ ನಾಡಿಗ್ ಎನ್ನುವವರು ಟ್ವೀಟ್ ಮಾಡಿದ್ದಾರೆ.
'ನಾವು ವೀಕೆಂಡ್ನ ಹಾದಿಯಲ್ಲಿರುವಾಗ ಈ ನಗುವನ್ನು ನೋಡೋಕೆ ಖುಷಿಯಾಗುತ್ತದೆ. ಇಬ್ಬರು ಕಾರ್ಟೂನಿಸ್ಟ್ಗಳು ಬರೆದ ಈ ಎರಡು ಕಾರ್ಟೂನ್ಗಳನ್ನು ನಾನು ಬಹಳವಾಗಿ ಮೆಚ್ಚಿದೆ. ಆದರೆ, ಅವರು ಹೇಳಿರುವ ಅಂಶಗಳಿಗೆ ಪೂರ್ಣವಾಗಿ ಸಹಮತವಿಲ್ಲ. ಮೊದಲನೆಯದಾಗಿ ಸತೀಶ್ ಆಚಾರ್ಯ ಅವರು ಬರೆದಿರುವ ಕಾರ್ಟೂನ್. ಫ್ಯಾಕ್ಟ್ಗಳ ಬಗ್ಗೆ ಅಲ್ಲಿ ನಿಖರವಾಗಿಲ್ಲ. ಆದರೆ, ನನ್ನ ಗಡ್ಡದ ಶೇಪ್ ಮಾತ್ರ ಬಹಳ ನಿಖರವಾಗಿ ಬಿಡಿಸಿದ್ದಾರೆ. ಇನ್ನೊಂದು ಇಪಿ ಉನ್ನಿ ಬರೆದಿರುವ ಕಾರ್ಟೂನ್. ನಾನು ಗೌಪ್ಯತೆಯನ್ನು ಮತ್ತು ವಾಕ್ ಸ್ವಾತಂತ್ರ್ಯವನ್ನು ರಕ್ಷಿಸುತ್ತೇನೆ ಎನ್ನುವುದು ನಿಜ. ಅದರೊಂದಿಗೆ ನನ್ನ ತೂಕವನ್ನೂ ಕಡಿಮೆ ಮಾಡಬೇಕು ಅನ್ನೋದು ನಿಜ. ಆದರೆ, ನನ್ನ ಹೊಟ್ಟೆಯ ಗಾತ್ರ ಅಷ್ಟಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ.
ಇನ್ನೂ ಕಾರ್ಟೂನ್ಗಳನ್ನು ಮೆಚ್ಚಿ ಇವರು ಮಾಡಿರುವ ಟ್ವೀಟ್ಗೆ ಪ್ರಶಂಸೆ ಕೂಡ ವ್ಯಕ್ತವಾಗಿದೆ. 'ಇಂದು ಕಾರ್ಟೂನ್ಗಳನ್ನು ಮೆಚ್ಚುವವರು ಬಹಳ ಅಪರೂಪ. ಈಗಿನ ಸಮಯ ಹೇಗಿದೆ ಎಂದರೆ, ಯಾವುದೇ ವಿಚಾರವನ್ನು ಬರೆದರೂ ಅದನ್ನೂ ಕೆಟ್ಟದಾಗಿಯೇ ನೋಡುತ್ತಾರೆ. ಇಂಥ ಸಮಯದಲ್ಲಿ ಸಚಿವರು ತಮ್ಮ ಬಗ್ಗೆಯೇ ಬರೆದ ಕಾರ್ಟೂನ್ಗಳನ್ನು ಮೆಚ್ಚಿ ಟ್ವೀಟ್ ಮಾಡಿರುವುದು ಅವರ ಸ್ಪೋರ್ಟಿವ್ ಸ್ವಭಾವವನ್ನು ತೋರಿಸುತ್ತದೆ' ಎಂದು ಬರೆದಿದ್ದಾರೆ.
'ನೀವು ಶೇರ್ ಮಾಡಿದ ಬಳಿಕವೇ ಈ ಎರಡೂ ಕಾರ್ಟೂನ್ಗಳನ್ನು ನೋಡಿದ್ದೇನೆ. ಎರಡೂ ಕೂಡ ಚೆನ್ನಾಗಿದೆ' ಎಂದು ಇನ್ನೊಬ್ಬರು ಬರೆದಿದ್ದಾರೆ. 'ಕಾರ್ಟೂನಿಸ್ಟ್ಗಳನ್ನು ಟ್ರೀಟ್ ಮಾಡಬೇಕಾದ ರೀತಿಯೇ ಇದು. ಇದು ನಿಮ್ಮನ್ನು ವಿಡಂಬನೆ ಮಾಡಬಹುದು,ಆದರೆ ಅದನ್ನು ಸ್ಪೋರ್ಟಿವ್ ಆಗಿ ತೆಗೆದುಕೊಳ್ಳಬೇಕು' ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.
ಯಾರಾದರೂ ಕನಿಷ್ಠ ಹಾಸ್ಯ ಪ್ರಜ್ಞೆಯನ್ನು ಪ್ರದರ್ಶನ ಮಾಡಿದ ಅಪರೂಪದ ಕ್ಷಣಗಳಲ್ಲಿ ಇದು ಒಂದಾಗಿದೆ. ಇಲ್ಲದಿದ್ದರೆ, ಆಡಳಿತ ಪಕ್ಷದ ಜನರ ಹೆಚ್ಚಿನ ಕ್ರಮಗಳು ಅಹಂಕಾರ ಹಾಗ ಹಠವೇ ಆಗಿರುತ್ತದೆ. ಇಂಥ ಕೆಲಸಗಳನ್ನು ಮುಂದುವರಿಸಿ ಎಂದು ವಿ.ಸುದರ್ಶನ್ ಎನ್ನುವವರು ಟ್ವೀಟ್ ಮಾಡಿದ್ದಾರೆ. 'ನಿಮ್ಮ ಮೇಲೆ ಬರೆದ ಕಾರ್ಟೂನ್ಗಳನ್ನು ನೀವು ಪ್ರಶಂಸಿಸುತ್ತಿರುವುದನ್ನು ನೋಡಲು ತುಂಬಾ ಸಂತೋಷವಾಗಿದೆ' ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.
ಬಿಟ್ಟಿ ಭಾಗ್ಯದ ಮೂಲಕ ಜನತೆಯನ್ನು ವಂಚಿಸಿದ ಕಾಂಗ್ರೆಸ್ ಸರ್ಕಾರ: ಸಚಿವ ರಾಜೀವ್ ಚಂದ್ರಶೇಖರ್
ಒಂದೇ ಟ್ವೀಟ್ನಲ್ಲಿ ಕಾರ್ಟೂನಿಸ್ಟ್ಗಳಿಗೆ ಮೆಚ್ಚುಗೆ ನೀಡುವುದರ ಜೊತೆಗೆ ಅವರ ಅಭಿಪ್ರಾಯಗಳನ್ನು ವಿರೋಧಿಸಿದ್ದೀರಿ. ಇದು ಬಿಜೆಪಿ ಸ್ಟೈಲ್ ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ. 'ಇಂಥ ಮೆಚ್ಚುಗೆಯ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರದ ಕೂಲ್ ಸಚಿವರಲ್ಲಿ ಒಬ್ಬರು ಎನಿಸಿಕೊಂಡಿದ್ದೀರಿ. ನಿಮ್ಮಂಥ ವ್ಯಕ್ತಿಗಳು ಇನ್ನೂ ಬಿಜೆಪಿಯಲ್ಲಿದ್ದೀರಿ ಎನ್ನುವುದಕ್ಕೆ ನನಗೆ ಅಚ್ಚರಿಯಾಗಿದೆ. ವಾಜಪೇಯಿ ಅವಧಿಯ ವ್ಯಕ್ತಿಗಳು ಈಗಲೂ ಇದ್ದಾರೆ ಎನ್ನುವುದನ್ನು ನೋಡಲು ಖುಷಿಯಾಗುತ್ತಿದೆ' ಎಂದಿದ್ದಾರೆ.
ಡಿಜಿಟಲ್ ಇಂಡಿಯಾ ಮಸೂದೆಯಲ್ಲಿ 11 ಅಂಶಗಳಿಗೆ ನಿಷೇಧ: 85 ಕೋಟಿ ಇಂಟರ್ನೆಟ್ ಬಳಕೆದಾರರನ್ನು ರಕ್ಷಿಸಲು ಪ್ಲ್ಯಾನ್