IAF Chopper Crash:ಹೆಲಿಕಾಪ್ಟರ್ ಪತನಕ್ಕೆ ಕಾರಣ ನಿಗೂಢ, ಚೀನಾ ಕೈವಾಡ?
* ಹೆಲಿಕಾಪ್ಟರ್ ಪತನಕ್ಕೆ ಕಾರಣ ನಿಗೂಢ!
* ಚೀನಾ ವಿರುದ್ಧ ಕೆಂಡ ಕಾರುತ್ತಿದ್ದ ಜ ಬಿಪಿನ್ ರಾವತ್ ಸಾವಿನ ಹಿಂದೆ ಸಂಚಿದೆಯೇ?
* ಹವಾಮಾನ ವೈಪರೀತ್ಯ, ತಾಂತ್ರಿಕ ದೋಷ ಹಾಗೂ ಪೈಲಟ್ ಪ್ರಮಾದ ಸಾಧ್ಯತೆ ಕಡಿಮೆ ಎನ್ನುತ್ತಾರೆ ತಜ್ಞರು
ನವದೆಹಲಿ/ ಬೆಂಗಳೂರು(ಡಿ. 09) ದೇಶದ ಸೇನೆಗೆ (Indian Army) ಹೊಸ ರೂಪ ಕೊಟ್ಟಿದ್ದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ (Bipin Rawat) ಸೇನಾ ಹೆಲಿಕಾಪ್ಟರ್ ದುರಂತದಲ್ಲಿ (IAF Chopper Crash) ಸಾವು ಕಂಡಿದ್ದಾರೆ. ಅವರ ಸಾವಿನ ಜತೆಗೆ ಅನೇಕ ಪ್ರಶ್ನೆಗಳು ಎದ್ದಿವೆ.
ಬಿಪಿನ್ ರಾವತ್ ಅವರನ್ನು ಬಲಿ ಪಡೆದ ಅತ್ಯಾಧುನಿಕ ಎಂಐ 17ವಿ5 ಹೆಲಿಕಾಪ್ಟರ್ ಪತನ ದೇಶದ ರಕ್ಷಣಾ ವಲಯದಲ್ಲಿ ಆಘಾತದ ಅಲೆ ಎಬ್ಬಿಸಿದೆ. ದುರ್ಭರ ವಾತಾವರಣದಲ್ಲೂ ಕಾರ್ಯನಿರ್ವಹಿಸುವ ಕ್ಷಮತೆ ಹೊಂದಿರುವ ರಷ್ಯಾ ನಿರ್ಮಿತ ಈ ಅತ್ಯಾಧುನಿಕ ಹೆಲಿಕಾಪ್ಟರ್ ಅಷ್ಟೇನೂ ಪ್ರತಿಕೂಲ ಹವಾಮಾನವಿಲ್ಲದ ತಮಿಳುನಾಡಿನ ಕುನೂರಿನಲ್ಲಿ ಅಚ್ಚರಿಯ ರೀತಿಯಲ್ಲಿ ಪತನಗೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
CDS Bipin Rawat Death: ತಂದೆ ಇದ್ದ ಬೆಟಾಲಿಯನ್ನಲ್ಲೇ ಬಿಪಿನ್ ರಾವತ್ ಮೊದಲ ಪೋಸ್ಟಿಂಗ್!
1. ರಾವತ್ ಇದ್ದ ರಷ್ಯಾನಿರ್ಮಿತ ಅತ್ಯಾಧುನಿಕ ಎಂಐ17-ವಿ5 ಹೆಲಿಕಾಪ್ಟರ್ ಹಿಮಾಲಯದ ನೀರ್ಗಲ್ಲು ಪ್ರದೇಶದಲ್ಲೂ ಹಾರಾಡುವಂಥದ್ದು. ನೀಲಗಿರಿ ಪರ್ವತ ಶ್ರೇಣಿಯಲ್ಲಿ ಹಿಮಾಲಯದಂಥ ಪ್ರತಿಕೂಲ ಹವಾಮಾನ ಇಲ್ಲ
2. ಯುದ್ಧದಲ್ಲಿ ದಾಳಿಗೂ, ಅನ್ಯ ಉದ್ದೇಶದ ಹಾರಾಟಕ್ಕೂ, ರಕ್ಷಣಾ ಕಾರಾರಯಚರಣೆಗಳಿಗೂ ಬಳಸುವಂಥ ಹಾಗೂ ಸಣ್ಣಪುಟ್ಟಹವಾಮಾನ ವೈಪರೀತ್ಯಗಳನ್ನು ಸುಲಲಿತವಾಗಿ ಎದುರಿಸಬಲ್ಲ ಸಮರ್ಥ ಹೆಲಿಕಾಪ್ಟರ್ ಎಂಐ17-ವಿ5
3. ಸೇನಾಪಡೆಗಳ ಮುಖ್ಯಸ್ಥರಂಥ ಗಣ್ಯವ್ಯಕ್ತಿಗಳನ್ನು ಕರೆದೊಯ್ಯುವ ಕಾಪ್ಟರ್ಗಂತೂ 2000 ತಾಸಿಗಿಂತಲೂ ಹೆಚ್ಚು ಹಾರಾಟ ನಡೆಸಿದ ನುರಿತ ಪೈಲಟ್ ಇರುತ್ತಾರೆ. ಹಾಗಾಗಿ, ಪೈಲಟ್ ಅನನುಭವಿ ಆಗಿರಬಹುದು ಎನ್ನಲಾಗದು
4. ಕಾಪ್ಟರ್ ಪತನಗೊಂಡ ಕೂನೂರು ಪ್ರದೇಶ ದುರ್ಗಮ ಕಣಿವೆಯೇನಲ್ಲ. ಪ್ರತಿಕೂಲ ಹವೆ ಇದ್ದಿದ್ದರೆ ಪೈಲಟ್ ಕರೆದೊಯ್ಯುತ್ತಲೇ ಇರಲಿಲ್ಲ. ವೈಪರೀತ್ಯ ಎದುರಾಗಿದ್ದರೆ ಹಿಂತಿರುಗುತ್ತಿದ್ದರೇ ಹೊರತು ರಿಸ್ಕ್ ತೆಗೆದುಕೊಳ್ಳುತ್ತಿರಲಿಲ್ಲ
5. ವಿವಿಐಪಿಗಳನ್ನು ಹೊತ್ತೊಯ್ಯುವ ಹೆಲಿಕಾಪ್ಟರ್ಗಳು ಸಾಕಷ್ಟುರೀತಿಯ ತಾಂತ್ರಿಕ ಪರೀಕ್ಷೆಗೆ ಒಳಪಟ್ಟಿರುತ್ತದೆ. ಎಲ್ಲ ತಪಾಸಣೆ ಬಳಿಕವೇ ಹಾರಿರುತ್ತದೆ. ಹಾಗಾಗಿ, ತಾಂತ್ರಿಕ ತೊಂದರೆ ಎದುರಾಗಿರುವ ಸಾಧ್ಯತೆ ತೀರಾ ಕಡಿಮೆ
6. ಮೂರೂ ಸೇನಾಪಡೆಗಳಿಗೆ ಒಬ್ಬ ಮುಖ್ಯಸ್ಥರ ನೇಮಕ ಬಗ್ಗೆ ಹಿಂದೆ ಅಪಸ್ವರ ಕೇಳಿಬಂದಿತ್ತು. ಹಾಗಾಗಿ, ಜ
ರಾವತ್ ಅವಘಡಕ್ಕೆ ತುತ್ತಾಗುವುದರ ಹಿಂದೆ ಯಾವುದಾದರೂ ಒಳಸಂಚು ಇರಬಹುದು ಎಂಬ ಚರ್ಚೆಗಳಿವೆ
7. ಚೀನಾ, ಮ್ಯಾನ್ಮಾರ್, ಪಾಕಿಸ್ತಾನ ಈ ಮೂರೂ ದೇಶಗಳ ಗಡಿ ಪ್ರದೇಶಗಳಲ್ಲಿ ಕಾರಾರಯಚರಣೆ ನಡೆಸಿದ ಹೆಗ್ಗಳಿಕೆ ಜ. ರಾವತ್ರದು. ಹಾಗಾಗಿ, ಅವರ ಸಾವಿನ ಹಿಂದೆ ವಿದೇಶಿ ಕೈವಾಡ ಇರುವ ಕುರಿತೂ ಕೆಲವರು ಶಂಕಿಸಿದ್ದಾರೆ.
CDS Bipin Rawat ಮಾಡಿದ ಆ ಒಂದು ಕೆಲಸ: ನಮ್ಮ ಸೇನೆಯ ಶಕ್ತಿ ಡಬಲ್, ಬೆಚ್ಚಿ ಬಿದ್ದ ಪಾಕ್, ಚೀನಾ!
8. ಕಾಪ್ಟರ್ನಲ್ಲಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಬದುಕುಳಿದಿದ್ದಾರೆ. ಅವರಿಗೆ ಕಾಪ್ಟರ್ ಪತನ ಏಕಾಯಿತು ಎಂಬುದು ಗೊತ್ತಿರುತ್ತದೆ. ಹಾಗಾಗಿ, ಸಮಗ್ರ ತನಿಖೆಯಿಂದಷ್ಟೇ ಘೋರ ದುರಂತದ ಕಾರಣ ಹೊರಬೀಳಬೇಕಿದೆ
ಸಾಮಾನ್ಯವಾಗಿ ಹೆಲಿಕಾಪ್ಟರ್ಗಳು ಹಠಾತ್ ಪತನವಾಗುವುದಕ್ಕೆ ಕೆಲ ಕಾರಣಗಳನ್ನು ತಜ್ಞರು ನೀಡುತ್ತಾರೆ. ಅವು-
1.ಹೆಲಿಕಾಪ್ಟರ್ನಲ್ಲಿ ಉಂಟಾಗಿರಬಹುದಾದ ಹಠಾತ್ ತಾಂತ್ರಿಕ ಸಮಸ್ಯೆ.
2.ಮಾನವ ಲೋಪ ಅರ್ಥಾತ್ ಪೈಲಟ್ನ ಅಜಾಗರೂಕತೆ ಅಥವಾ ತಪ್ಪು ಚಾಲನೆ.
3.ಹವಾಮಾನ ವೈಪರೀತ್ಯ.
4.ವ್ಯಾಲಿಪುಲ್ ಅಥವಾ ಕಣಿವೆಯಲ್ಲಿ ಉಂಟಾಗುವ ಗುರುತ್ವಾಕರ್ಷಣೆಯ ಸೆಳೆತಕ್ಕೆ ಕಾಪ್ಟರ್ ಸಿಲುಕುವುದು.
ಆದರೆ, ಚೀನಾ ವಿರುದ್ಧ ಕೆಂಡ ಕಾರುವ, ದೇಶದ ಸಶಸ್ತ್ರ ಪಡೆಗೆ ಹೊಸ ದಿಕ್ಕು ನೀಡುತ್ತಿದ್ದ, ವಿದೇಶಿ ಶಕ್ತಿಗಳ ವಿರುದ್ಧ ಆಕ್ರಮಣಕಾರಿ ಮನಸ್ಥಿತಿ ಹೊಂದಿದ್ದ ಬಿಪಿನ್ ರಾವತ್ ಅವರನ್ನು ಬಲಿ ತೆಗೆದುಕೊಂಡ ಈ ಹೆಲಿಕಾಪ್ಟರ್ ಪತನ ಈ ಎಲ್ಲಾ ಪ್ರಮುಖ ಕಾರಣಗಳಿಗೂ ಅತೀತವಾಗಿದೆಯೇ ಎಂಬ ಸಂಶಯ ರಕ್ಷಣಾ ತಜ್ಞರನ್ನು ಕಾಡುತ್ತಿದೆ.
ರಷ್ಯಾ ನಿರ್ಮಿತ ದಕ್ಷ ಕಾಪ್ಟರ್: ರಾವತ್ ಪ್ರಯಾಣಿಸುತ್ತಿದ್ದ ರಷ್ಯಾ ನಿರ್ಮಿತ ಆಧುನಿಕ ಎಂಐ -17ವಿ5 ಎಂಐ-17ವಿ5 ಜಗತ್ತಿನ ಜನಪ್ರಿಯ ಬಹೂಪಯೋಗಿ ಹೆಲಿಕಾಪ್ಟರ್. ತುರ್ತು ಸಂದರ್ಭದಲ್ಲಿ ಸರಕು ಸಾಗಣೆ, ಜನ ಸಾಗಾಟ, ಸೈನ್ಯ ರವಾನೆಯ ಜೊತೆಗೆ ಕಮಾಂಡೋ ಕಾರ್ಯಾಚರಣೆಯಲ್ಲಿ ಬಳಕೆಯಾಗುವ ಹೆಲಿಕಾಪ್ಟರ್. ಡಿಆರ್ಡಿಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ)ಯ ಅಧಿಕಾರಿ ಜಯಪ್ರಕಾಶ್ ರಾವ್ ಹೇಳುವ ಪ್ರಕಾರ, ಕಳೆದ 20-30 ವರ್ಷಗಳಿಂದ ನಮ್ಮ ದೇಶದಲ್ಲಿ ಈ ಹೆಲಿಕಾಪ್ಟರ್ ಬಳಕೆಯಲ್ಲಿದೆ. ಒಂದು ಮೂಲದ ಪ್ರಕಾರ ಜಗತ್ತಿನ 60 ರಾಷ್ಟ್ರಗಳು ಈ ಹೆಲಿಕಾಪ್ಟರ್ ಬಳಸುತ್ತಿವೆ. ಆದ್ದರಿಂದ ಈ ಹೆಲಿಕಾಪ್ಟರ್ನ ನಿರ್ಮಾಣದಲ್ಲಿ ಸಮಸ್ಯೆ ಇತ್ತು, ಹಾಗೆಯೇ ಇನ್ನಿತರ ಯಾಂತ್ರಿಕ, ತಾಂತ್ರಿಕ ದೋಷಗಳಿದ್ದವು ಎಂಬುದರ ಬಗ್ಗೆ ತಕ್ಷಣವೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ.
ವಿಐಪಿಗಳ ಹಾರಾಟಕ್ಕೆ ಮುಂಚಿತವಾಗಿ ಹೆಲಿಕಾಪ್ಟರ್ನಲ್ಲಿ ಬಳಸುವ ಇಂಧನ, ಗಾಳಿ ಸೇರಿದಂತೆ ಪ್ರತಿಯೊಂದು ತಾಂತ್ರಿಕ ಸಂಗತಿಗಳನ್ನು ಪರಿಶೀಲಿಸಲಾಗುತ್ತದೆ. ಯಾವುದೇ ಸಮಸ್ಯೆಗಳಿಲ್ಲ ಎಂಬುದು ಖಾತರಿ ಆದ ಮೇಲೆಯೇ ಆ ಹೆಲಿಕಾಪ್ಟರ್ ಬಳಕೆಗೆ ಅವಕಾಶ ನೀಡಲಾಗುತ್ತದೆ ಎಂದು ಅವರು ವಿವರಿಸುತ್ತಾರೆ.
ಅತ್ಯಂತ ನುರಿತ ಪೈಲಟ್: ಪೈಲಟ್ ಅಜಾಗರೂಕತೆ ಈ ಮಹಾ ದುರಂತಕ್ಕೆ ಕಾರಣವಾಯಿತೇ ಎಂಬ ಪ್ರಶ್ನೆಗೂ ನಕಾರಾತ್ಮಕ ವಿಶ್ಲೇಷಣೆಯೇ ದೊರೆಯುತ್ತದೆ. ಸಶಸ್ತ್ರ ಪಡೆಯ ಮುಖ್ಯಸ್ಥ ಪ್ರಯಾಣಿಸುವ ಹೆಲಿಕಾಪ್ಟರ್ಗೆ ಅತ್ಯಂತ ನುರಿತ ಪೈಲಟ್ಗಳನ್ನೇ ನಿಯೋಜಿಸಲಾಗುತ್ತದೆ. ಇದಕ್ಕಾಗಿಯೇ ವಿಐಪಿ ಸ್ಕಾ$್ವಡ್ರನ್ ಎಂಬ ವಿಭಾಗವೇ ಭಾರತೀಯ ವಾಯುಸೇನೆಯಲ್ಲಿದೆ. ಈ ಘಟಕಕ್ಕೆ ಆಯ್ಕೆಯಾಗಲು ಹೆಲಿಕಾಪ್ಟರ್ ಪೈಲಟ್ 2,000 ಗಂಟೆಗಳ ಹೆಲಿಕಾಪ್ಟರ್ ಹಾರಾಟ (ಫ್ಲೈಯಿಂಗ್ ಅವರ್) ಅನುಭವ ಹೊಂದಿರಬೇಕು. ಇನ್ನು ರಾವತ್ರಂತಹ ವಿಐಪಿಗಳ ಹೆಲಿಕಾಪ್ಟರ್ ಚಾಲನೆಗೆ ಅರ್ಹತೆ ಪಡೆಯಬೇಕಿದ್ದರೆ ಸದರಿ ಪೈಲಟ್ ವಿಐಪಿ ಸ್ಕಾ$್ವಡ್ರನ್ನಲ್ಲಿ 500 ಗಂಟೆಗಳಷ್ಟುಹೆಲಿಕಾಪ್ಟರ್ ಹಾರಾಟ ನಡೆಸಿರಬೇಕು. ಇಷ್ಟುಅನುಭವ ಇರುವ ಪೈಲಟ್ ಸಾಮಾನ್ಯವಾಗಿ ತಪ್ಪೆಸಗುವ ಸಾಧ್ಯತೆಯಿಲ್ಲ ಎಂದೇ ಹೇಳುತ್ತಾರೆ ತಜ್ಞರು.
ಅಲ್ಲದೆ, ಹೆಲಿಕಾಪ್ಟರ್ ಚಲಾವಣೆಯ ಹಿಂದಿನ ದಿನ ಆ ಪೈಲಟ್ನ ಸಂಪೂರ್ಣ ದೈಹಿಕ ಪರೀಕ್ಷೆ ನಡೆಯುತ್ತದೆ. ಈ ಸಂದರ್ಭದಲ್ಲಿ ಮದ್ಯದ ಅಂಶಗಳು ದೇಹದಲ್ಲಿ ಸಿಗಬಾರದು. ಕಣ್ಣಿನ ಪರೀಕ್ಷೆ ನಡೆಯುತ್ತದೆ. ಮಾನಸಿಕವಾಗಿಯೂ ಪೈಲಟ್ ಸ್ಥಿರತೆ ಹೊಂದಿರಬೇಕು. ಈ ಎಲ್ಲ ಪರೀಕ್ಷೆಗಳಲ್ಲಿ ಉತ್ತಿರ್ಣಗೊಂಡ ಅನುಭವಿ ಪೈಲಟ್ಗೆ ಮಾತ್ರ ಹೆಲಿಕಾಪ್ಟರ್ ಹಾರಿಸಲು ಅನುಮತಿ ಸಿಗುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
ಹವಾಮಾನ ವೈಪರೀತ್ಯ ಸಾಧ್ಯತೆ ಕಮ್ಮಿ: ಹವಾಮಾನ ವೈಪರೀತ್ಯ ಸಾಮಾನ್ಯವಾಗಿ ಹೆಲಿಕಾಪ್ಟರ್ ಪತನಕ್ಕೆ ಕಾರಣವಾಗಬಹುದಾಗಿದ್ದರೂ ಈ ಪ್ರಕರಣದಲ್ಲಿ ಆ ವಾದವನ್ನು ತಳ್ಳಿಹಾಕುವ ತಜ್ಞ ಸುಧೀರ್ ವಂಬತ್ಕೆರೆ, ಹೆಲಿಕಾಪ್ಟರ್ ಟೇಕ್ ಆಫ್ ಆಗುವ ಮುಂಚಿತವಾಗಿಯೇ ಹವಾಮಾನದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲಾಗಿರುತ್ತದೆ. ಹಾರಾಟಕ್ಕೆ ಸೂಕ್ತವಲ್ಲದ ಹವಾಮಾನ ಇದ್ದರೆ ಹೆಲಿಕಾಪ್ಟರ್ ಟೇಕಾಫ್ಗೆ ಅನುಮತಿಯನ್ನೇ ನೀಡುವುದಿಲ್ಲ ಎಂದು ಹೇಳುತ್ತಾರೆ.
ವ್ಯಾಲಿ ಪುಲ್ ಬಗ್ಗೆ ಸಂಶಯ: ಇನ್ನು, ವ್ಯಾಲಿ ಪುಲ್ ವಿಚಾರದ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ದಟ್ಟಕಾನನವಿರುವ ಕಣಿವೆಗಳಲ್ಲಿ ಹೆಲಿಕಾಪ್ಟರ್ ಸಂಚರಿಸುವಾಗ ಕೆಲವೊಮ್ಮೆ ಹೆಲಿಕಾಪ್ಟರ್ ಅನ್ನು ಮೇಲಕ್ಕೆ ತಳ್ಳಿದಂತೆ ಅಥವಾ ಕೆಳಕ್ಕೆ ಸೆಳೆದಂತೆ ಆಗುತ್ತದೆ. ಇಂತಹ ಸಂದರ್ಭದಲ್ಲಿ ಹೆಲಿಕಾಪ್ಟರ್ ಆಯ ತಪ್ಪಿ ಅಪಘಾತಕ್ಕೀಡಾಗುವ ಸಾಧ್ಯತೆಯೂ ಇದೆ. ಆದರೆ, ತಮಿಳುನಾಡಿನ ಕುನೂರು ಪ್ರದೇಶದಲ್ಲಿ ಅಂತಹ ಭಾರಿ ಕಣಿವೆಯೇನಿಲ್ಲ. ಹಿಮಾಲಯದಂತಹ ಬೃಹತ್ ಗಿರಿ ಕಂದರಗಳ ನಡುವೆ ಈ ರೀತಿ ಆಗಬಹುದೇ ಹೊರತು ಕುನೂರಿನ ಗಿರಿಯಲ್ಲಿ ಅಂತಹ ಪರಿಸ್ಥಿತಿ ಸಾಧ್ಯವಿಲ್ಲ ಎಂದು ತಜ್ಞರು ಹೇಳುತ್ತಾರೆ.
ಹೀಗಾಗಿಯೇ ಹೆಲಿಕಾಪ್ಟರ್ ಪತನ ಕುರಿತು ಹಲವು ಅನುಮಾನಗಳು ಉಂಟಾಗಿವೆ. ಇದಕ್ಕೆ ಗುರುವಾರ ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ನೀಡುವ ಮಾಹಿತಿಯಲ್ಲಿ ಅಪಘಾತದ ಪ್ರಾಥಮಿಕ ಮಾಹಿತಿ ಇರಬಹುದು ಎಂಬ ನಿರೀಕ್ಷೆ ತಜ್ಞರಲ್ಲಿದೆ. ಹೆಲಿಕಾಪ್ಟರ್ ಪತನದ ನಿಖರ ಕಾರಣ ಪತ್ತೆಯಾಗಬೇಕು. ಇದಕ್ಕೆ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ತಜ್ಞರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.