Bipin Rawat : ಹರಿದ್ವಾರದಲ್ಲಿ ಪಾಲಕರ ಅಸ್ಥಿ ವಿಸರ್ಜಿಸಿದ ಪುತ್ರಿಯರು!
ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಅಸುನೀಗಿದ್ದ ಸಿಡಿಎಸ್ ಜನರಲ್ ಬಿಪಿನ್ ರಾವತ್
ಹರಿದ್ವಾರಕ್ಕೆ ಆಗಮಿಸಿ ತಂದೆ-ತಾಯಿ ಚಿತಾಭಸ್ಮವನ್ನು ಗಂಗಾನದಿಯಲ್ಲಿ ವಿಸರ್ಜಿಸಿದ ಪುತ್ರಿಯರು
ಶುಕ್ರವಾರ ದೆಹಲಿಯಲ್ಲಿ ಸಕಲ ಸೇನಾ ಗೌರವಗಳೊಂದಿಗೆ ನಡೆದಿತ್ತು ಅಂತ್ಯಕ್ರಿಯೆ
ನವದೆಹಲಿ (ಡಿ.11): ತಮಿಳುನಾಡಿನಲ್ಲಿ ಸಂಭವಿಸಿದ ಭೀಕರ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ(IAF Chopper Crash) ಅಸುನೀಗಿದ ದೇಶದ ರಕ್ಷಣಾ ಪಡೆಗಳ (Chief of Defence Staff) ಮುಖ್ಯಸ್ಥ ಬಿಪಿನ್ ರಾವತ್ (General Bipin Rawat) ಹಾಗೂ ಅವರ ಪತ್ನಿ ಮಧುಲಿಕಿ ರಾವತ್ ಅವರ ಅಸ್ಥಿಯನ್ನು ಪುತ್ರಿಯರು ಹರಿದ್ವಾರಕ್ಕೆ ಆಗಮಿಸಿ ಗಂಗಾನದಿಯಲ್ಲಿ ವಿಸರ್ಜನೆ ಮಾಡಿದರು. ಶನಿವಾರ ಬೆಳಗ್ಗೆ ದೆಹಲಿಯ ಕಂಟೋನ್ಮೆಂಟ್ ಪ್ರದೇಶದಲ್ಲಿದ್ದ ಬ್ರಾರ್ ಸ್ಕ್ವೇರ್ ಚಿತಾಗಾರಕ್ಕೆ ಆಗಮಿಸಿದ ಬಿಪಿನ್ ರಾವತ್ ಅವರ ಪುತ್ರಿಯರಾದ ಕೃತಿಕಾ (Kritika) ಹಾಗೂ ತಾರಿಣಿ (Tarini ) ಚಿತಾಭಸ್ಮವನ್ನು ಸ್ವೀಕರಿಸಿದರು ಮಧ್ಯಾಹ್ನದ ವೇಳೆಗೆ ಹರಿದ್ವಾರಕ್ಕೆ (Haridwar) ತೆರಳಿ ಗಂಗಾ (Ganga) ನದಿಯಲ್ಲಿ ವಿಸರ್ಜನೆ ಮಾಡಿದರು. ಡಿಸೆಂಬರ್ 8 ರಂದು ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ ಹೆಲಿಕಾಪ್ಟರ್ ಅವಗಢದಲ್ಲಿ ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಜನರು ಸಾವನ್ನಪ್ಪಿದ್ದರು. ಶುಕ್ರವಾರ ನಡೆದ ಅಂತ್ಯಕ್ರಿಯೆಯನ್ನೂ ಸಹ ಪುತ್ರಿಯರೇ ಮಾಡಿದ್ದರು.
ಶುಕ್ರವಾರ ಅಂತಿಮ ವಿಧಿ-ವಿಧಾನ ನಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದ ಬಿಪಿನ್ ರಾವತ್ ಅವರ ಸೋದರ ಮಾವ ಯಶ್ ವರ್ಧನ್ ಸಿಂಗ್ (Yash Vardhan Singh) ಅವರು, ಶನಿವಾರ ಮುಂಜಾನೆ ಚಿತಾಭಸ್ಮವನ್ನು ಸ್ವೀಕಾರ ಮಾಡಲಿದ್ದು, ಅದೇ ದಿನ ಸಂಜೆಯ ವೇಳೆಗೆ ಹರಿದ್ವಾರಕ್ಕೆ ತೆರಳಿ ಗಂಗಾನದಿಯಲ್ಲಿ ವಿಸರ್ಜನೆ ಮಾಡುವುದಾಗಿ ಹೇಳಿದ್ದರು. ಆ ಬಳಿಕ ಕೆಲ ಧಾರ್ಮಿಕ ಕ್ರಿಯೆಗಳ ಸಂಪ್ರದಾಯವನ್ನೂ ಕುಟುಂಬ ಪಾಲಿಸಲಿದೆ ಎಂದು ತಿಳಿಸಿದ್ದರು.
ರಾವತ್ ಅವರ ಪುತ್ರಿಯರು ಪಾಲಕರ ಅಸ್ಥಿಯನ್ನು ಸ್ವೀಕಾರ ಮಾಡುವ ವೇಳೆ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು. ಉತ್ತಾರಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಹರಿದ್ವಾರದ ವಿಐಪಿ ಘಾಟ್ ನಲ್ಲಿ ರಾವತ್ ಅವರ ಪುತ್ರಿಯರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
ರಕ್ಷಣಾ ಸಲಹೆಗಾರ ಬ್ರಿಗೇಡಿಯರ್ ಎಲ್ ಎಸ್ ಲಿಡ್ಡರ್ (Brigadier LS Lidder) ಶೀಘ್ರದಲ್ಲಿಯೇ ಮೇಜರ್ ಜನರಲ್ ಅಗಿ ಪ್ರಮೋಷನ್ ಪಡೆಯುವ ಹಂತದಲ್ಲಿದ್ದರು. ಲಿಡ್ಡರ್ ಅವರ ಪತ್ನಿ ಗೀತಿಕಾ ಹಾಗೂ 16 ವರ್ಷದ ಮಗಳು ಅಶಾನಾ ಬ್ರಾರ್ ಚಿತಾಗಾರದಲ್ಲಿ ತಂದೆಯ ಅಂತ್ಯಕ್ರಿಯೆಯನ್ನು ನೆರವೇರಿಸಿದರು.
Bipin Rawat Funeral: ಒಂದೇ ಚಿತೆಯಲ್ಲಿಟ್ಟು ರಾವತ್ ದಂಪತಿ ಅಂತ್ಯಸಂಸ್ಕಾರ: ಚಿತೆಗೆ ಪುತ್ರಿಯರಿಂದ ಅಗ್ನಿಸ್ಪರ್ಶ
ಇವರೊಂದಿಗೆ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ವಿಂಗ್ ಕಮಾಂಡರ್, ಪೃಥ್ವಿ ಸಿಂಗ್ ಚೌಹಾಣ್, ಸ್ಕ್ವಾಡ್ರನ್ ಲೀಡರ್ ಕುಲದೀಪ್ ಸಿಂಗ್, ಜೂನಿಯರ್ ವಾರಂಟ್ ಆಫೀಸರ್ ರಾಣಾ ಪ್ರತಾಪ್ ದಾಸ್, ಜೂನಿಯರ್ ವಾರಂಟ್ ಆಫೀಸರ್ ಅರಕ್ಕಲ್ ಪ್ರದೀಪ್, ಹವಾಲ್ದಾರ್ ಸತ್ಪಾಲ್ ರೈ, ನಾಯ್ಕ್ ಗುರುಸೇವಕ್ ಸಿಂಗ್, ನಾಯ್ಕ್ ಜತೇಂದ್ರ ಕುಮಾರ್, ಲ್ಯಾನ್ಸ್ ನಾಯ್ಕ್ ವಿವೇಕ್ ಕುಮಾರ್ ಹಾಗೂ ಲ್ಯಾನ್ಸ್ ನಾಯ್ಕ್ ಬಿ.ಸಾಯಿ ತೇಜಾ ಕೂನೂರು ಹೆಲಿಕಾಪ್ಟರ್ ಅಪಘಾತದಲ್ಲಿ ಮೃತರಾದ ಇತರರು.
Brigadier LS Lidder Funeral: ದುಃಖಿಸದೆ ಬೀಳ್ಕೊಡುವೆ: ಹುತಾತ್ಮ ಬ್ರಿಗೇಡಿಯರ್ ಲಿಡ್ಡರ್ ಪತ್ನಿ ಭಾವುಕ ನುಡಿ
ದುರಂತದಲ್ಲಿ ಬದುಕುಳಿದಿರುವ ಏಕೈಕ ವ್ಯಕ್ತಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್, ಬೆಂಗಳೂರಿನ ಏರ್ ಫೋರ್ಸ್ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರವು, ಮೂರೂ ಪಡೆಗಳ ತನಿಖೆಗೆ ಆದೇಶಿಸಿದೆ. ದೇಶದ ಇತಿಹಾಸದಲ್ಲಿಯೇ ಅಗ್ರ ಸೇನಾ ನಾಯಕರನ್ನು ಒಳಗೊಂಡ ಅತ್ಯಂತ ಘೋರ ದುರಂತ ಇದಾಗಿದೆ. ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ (Manvendra Singh) ನೇತೃತ್ವದಲ್ಲಿ ಈ ತನಿಖೆ ನಡೆಯಲಿದೆ. ಈ ತಿಂಗಳ ಅಂತ್ಯದಲ್ಲಿ ಜನರಲ್ ಬಿಪಿನ್ ರಾವತ್ ಅವರು ದೇಶದ ಮೊದಲ ಸಿಡಿಎಸ್ ಆಗಿ ಎರಡು ವರ್ಷ ಪೂರ್ಣ ಮಾಡುವ ಹಾದಿಯಲ್ಲಿದ್ದರು.