Asianet Suvarna News Asianet Suvarna News

UP Elections: ಲಾಭಕ್ಕಾಗಿ ಬಿಜೆಪಿಯಿಂದ ಹಿಜಾಬ್‌ ವಿವಾದ: ಮುಫ್ತಿ ಆರೋಪ

ಕರ್ನಾಟಕದಿಂದ ಭುಗಿಲೆದ್ದ ಹಿಜಾಬ್‌ ವಿವಾದಕ್ಕೆ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಪ್ರತಿಕ್ರಿಯಿಸಿದ್ದು ಉತ್ತರಪ್ರದೇಶದ ಚುನಾವಣೆಯಲ್ಲಿ ಲಾಭವನ್ನು ಪಡೆಯಲು ಬಿಜೆಪಿ ಪರಿಸ್ಥಿತಿಯನ್ನು ಧ್ರುವೀಕರಿಸುತ್ತಿದೆ.

BJP wants to polarise situation to get benefit in UP election Mehbooba Mufti on hijab row gvd
Author
Bangalore, First Published Feb 14, 2022, 1:35 AM IST

ಶ್ರೀನಗರ (ಫೆ.14): ಕರ್ನಾಟಕದಿಂದ (Karnataka) ಭುಗಿಲೆದ್ದ ಹಿಜಾಬ್‌ ವಿವಾದಕ್ಕೆ (Hijab Controversy) ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ  (Mehbooba Mufti) ಪ್ರತಿಕ್ರಿಯಿಸಿದ್ದು ಉತ್ತರಪ್ರದೇಶದ ಚುನಾವಣೆಯಲ್ಲಿ ಲಾಭವನ್ನು ಪಡೆಯಲು ಬಿಜೆಪಿ ಪರಿಸ್ಥಿತಿಯನ್ನು ಧ್ರುವೀಕರಿಸುತ್ತಿದೆ. ಈ ಮೂಲಕ ಮುಸ್ಲಿಂ ಹೆಣ್ಣು ಮಕ್ಕಳನ್ನು (Muslim Womens) ಶಿಕ್ಷಣದಿಂದ ದೂರವಿಡಲು ಪಿತೂರಿ ನಡೆಸಿದೆ ಎಂದು ಆರೋಪಿಸಿದ್ದಾರೆ. 

ಜಮ್ಮು ಕಾಶ್ಮೀರದ ಕುಪ್ವಾರಾದಲ್ಲಿ ಮಾತನಾಡಿದ ಮುಫ್ತಿ ವಸ್ತ್ರ ಸಂಹಿತೆಯು ಸಂಸ್ಕೃತಿಯ ಭಾಗವಾಗಿದೆ. ಇವರು ಗಾಂಧಿ ಭಾರತವನ್ನು (India) ಗೋಡ್ಸೆಯ ಭಾರತವನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳು ಇದರಿಂದ ಖಿನ್ನತೆಗೆ ಒಳಗಾಗಬಾರದು. ಭಾರತದ ನಾಯಕರು ಇದರ ಬಗ್ಗೆ ತಮ್ಮ ನಿಲುವನ್ನು ವ್ಯಕ್ತಪಡಿಸಬೇಕು ಎಂದಿದ್ದಾರೆ.

1947ಕ್ಕಿಂತ ದೊಡ್ಡ ಸ್ವಾತಂತ್ರ್ಯ: ದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ವಿವಿಧ ಸಮುದಾಯಗಳ ನಡುವೆ ದ್ವೇಷದ ಬೀಜವನ್ನು ಬಿತ್ತುತ್ತಿದೆ. ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕಿದೆ. ಬಿಜೆಪಿಯನ್ನು ದೇಶದ ಅತಿದೊಡ್ಡ ರಾಜ್ಯದಿಂದ ತೊಲಗಿಸುವುದು, 1947ರಲ್ಲಿ ಬ್ರಿಟಿಷರನ್ನು ತೊಲಗಿಸಿ ದೇಶ ಸ್ವಾತಂತ್ರ್ಯ ಪಡೆದುಕೊಂಡ ಸಾಧನೆಗಿಂತ ದೊಡ್ಡದಾಗಿರಲಿದೆ ಎಂದು ಜಮ್ಮು ಕಾಶ್ಮೀರದ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮಫ್ತಿ ಹೇಳಿದ್ದಾರೆ. 

Udupi Hijab Controversy: ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯರಿಗೆ ಗೇಟ್‌ ಬಂದ್‌, ಮೆಹಬೂಬಾ ಕಿಡಿ!

ಬಿಜೆಪಿ ಆಡಳಿತದಲ್ಲಿ ಜಮ್ಮು ಮತ್ತು ಕಾಶ್ಮೀರದ ಅಸ್ತಿತ್ವವು ಅಪಾಯದಲ್ಲಿದೆ ಎಂದು ಹೇಳಿದ ಮಾಜಿ ಮುಖ್ಯಮಂತ್ರಿ, ತನ್ನ ವಿರುದ್ಧ ದನಿ ಎತ್ತುವವರ ವಿರುದ್ಧ ಸರ್ಕಾರದ ಶಕ್ತಿಯನ್ನು ಆಡಳಿತ ಪಕ್ಷವು ಬಳಸುತ್ತಿದೆ. ಆದರೆ, ಇದಕ್ಕೆ ಹೆದರದೆ, “ಪ್ರೀತಿ ಮತ್ತು ಸ್ನೇಹ” ಹರಡುವ ಮೂಲಕ ದೇಶ ಎದುರಿಸುತ್ತಿರುವ ಸವಾಲುಗಳ ವಿರುದ್ಧ ಯುವಕರು ನಿಲ್ಲಬೇಕು ಎಂದು ಹೇಳಿದರು.

ಸೋಮವಾರ ಜಮ್ಮುವಿನಲ್ಲಿ ನಡೆದ ಬುಡಕಟ್ಟು ಯುವ ಸಮಾವೇಶದಲ್ಲಿ ಮಾತನಾಡಿದ ಅವರು, "ಇಡೀ ದೇಶವನ್ನು ಬಿಜೆಪಿ ಹಾಳು ಮಾಡಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರಲ್ಲೂ ಅಸುರಕ್ಷಿತ ಭಾವನೆ ಕಾಡುತ್ತಿದೆ.  ನಾಳೆ ನಾವು ಜೀವಂತವಾಗಿ ಇರುತ್ತೇವೋ, ಇಲ್ಲವೋ ಎನ್ನುವುದು ಗೊತ್ತಿಲ್ಲ. ವಿರೋಧ ಪಕ್ಷದ ನಾಯಕರ ವಿರುದ್ಧ ಇಡಿ ದಾಳಿ, ಸರ್ಕಾರಿ ಏಜೆನ್ಸಿಗಳಿಂದ ಬಂಧನಗಳು ಪ್ರತಿ ದಿನದ ಸುದ್ದಿಗಳಾಗಿ ಮಾರ್ಪಟ್ಟಿದೆ. ದೇಶದ ಇತರ ಎಲ್ಲಾ ಭಾಗಕ್ಕಿಂತ ಜಮ್ಮು ಕಾಶ್ಮೀರದಲ್ಲಿ ಇದು ಹೆಚ್ಚಾಗಿದೆ' ಎಂದು ಹೇಳಿದರು.ಉತ್ತರ ಪ್ರದೇಶದಲ್ಲಿ ಚುನಾವಣೆ ಘೋಷಣೆಯಾಗಿದೆ. ಈಗ ಅವರು ಬಾಬರ್ ಹಾಗ ಔರಂಗಜೇಬ್ ಅವರನ್ನು ನೆನಪು ಮಾಡಿಕೊಳ್ಳುತ್ತಾರೆ. 

ಬಿಜೆಪಿಯನ್ನು ತೊಲಗಿಸಲು ನಮಗೆ ಒಂದು ಅವಕಾಶ ಸಿಕ್ಕಿದೆ. ದೇಶವನ್ನು ವಿಭಜನೆ ಮಾಡುವ ಹುನ್ನಾರದಲ್ಲಿರುವ ಬಿಜೆಪಿಯನ್ನು ನಾವು ಉತ್ತರ ಪ್ರದೇಶ ಹಾಗೂ ದೇಶದಿಂದ ತೊಲಗಿಸಿದರೆ, ಅದು 1947ರಲ್ಲಿ ಬ್ರಿಟಿಷರಿಂದ ಪಡೆದುಕೊಂಡ ಸ್ವಾತಂತ್ರ್ಯಕ್ಕಿಂತ ದೊಡ್ಡದಾಗಿರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹರಿದ್ವಾರದ "ದ್ವೇಷ ಸಮಾವೇಶ"ವನ್ನು ಉಲ್ಲೇಖಿಸಿದ ಅವರು, "ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖರು ಮುಸ್ಲಿಮರ ನರಮೇಧಕ್ಕೆ ಬಹಿರಂಗವಾಗಿ ಕರೆ ನೀಡಿದರು. ಆದರೆ, ಇಡೀ ಬಿಜೆಪಿ ನಾಯಕತ್ವ ಮೌನವಾಗಿದ್ದು ಮಾತ್ರವಲ್ಲದೆ ದೇಶದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ಹೇಳಲು ಹಕ್ಕಿದೆ ಎನ್ನುವ ಅರ್ಥದಲ್ಲಿ ಮಾತನಾಡಿದೆ' ಎಂದರು.

Gandhi to Godse: ಗಾಂಧಿ ಭಾರತ ಗೋಡ್ಸೆ ಭಾರತವಾಗಿ ಬದಲಾಗುತ್ತಿದೆ: ಮೆಹಬೂಬಾ ಮುಫ್ತಿ

ಮಹಾತ್ಮಾ ಗಾಂಧೀ ಅವರ ಭಾರತಕ್ಕೆ ಜಮ್ಮು ಕಾಶ್ಮೀರ ಸೇರಿಕೊಂಡಿದೆ. ಈ ದೇಶವನ್ನು ಯಾವುದೇ ಕಾರಣಕ್ಕೂ ಅವರ ಹಂತಕ ನಾಥೂರಾಮ್ ಗೋಡ್ಸೆ ಅವರ ದೇಶವಾಗಲು ನಾವು ಬಿಡುವುದಿಲ್ಲ."ಅವರು ಗೋಡ್ಸೆಯನ್ನು ಪೂಜಿಸುತ್ತಾರೆ. ಗಾಂಧಿ ದೇಶ ಕಂಡ ಅತೀದೊಡ್ಡ ಹಿಂದು. ಸಸ್ಯಾಹಾರಿಯಾಗಿದ್ದು ಮಾತ್ರವಲ್ಲದೆ ಜಾತ್ಯತೀತ ನಾಯಕರಾಗಿದ್ದರು, ಅವರು ಮಾಂಸಾಹಾರಿಗಳು ಸೇರಿದಂತೆ ಯಾರ ವಿರುದ್ಧವೂ ದ್ವೇಷವನ್ನು ಹೊಂದಿರಲಿಲ್ಲ" ಎಂದು ಮಫ್ತಿ ಹೇಳಿದ್ದಾರೆ.

Follow Us:
Download App:
  • android
  • ios