ಬಂಗಾಳ ಪೊಲೀಸರ ಪ್ರಕಾರ, ಅಪ್ರಾಪ್ತ ಬಾಲಕಿಯ ಮೇಲೆ ಅಪರಿಚಿತ ದುಷ್ಕರ್ಮಿಗಳು ಅತ್ಯಾಚಾರವೆಸಗಿ ಹತ್ಯೆಗೈದಿದ್ದಾರೆ. ಇದು ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಕಲಿಯಾಗಂಜ್‌ನಲ್ಲಿ ನಡೆದಿದೆ.

ಕೋಲ್ಕತ್ತಾ (ಏ.22): ಅತ್ಯಾಚಾರವೇ ಕ್ರೂರ. ಅಂಥದ್ದರಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಸಾವು ಕಂಡ ಯುವತಿಯ ಶವವನ್ನು ರಸ್ತೆಯಲ್ಲಿ ದರದರನೆ ಎಳೆದುಕೊಂಡು ಹೋಗುವ ಮೂಲಕ ಪಶ್ಚಿಮ ಬಂಗಾಳದ ಪೊಲೀಸರು ಕ್ರೌರ್ಯ ಮೆರೆದ ಘಟನೆ ನಡೆದಿದೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಇದರ ಹಿನ್ನಲೆಯಲ್ಲಿ ಬಿಜೆಪಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಟೀಕೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಪೊಲೀಸ್‌ ಮತ್ತು ಪ್ಯಾರಾ ಪೋರ್ಸ್‌ ಮೇಲೆ ಉದ್ರಿಕ್ತ ಜನರು ಕಲ್ಲು ತೂರಾಟ ಮಾಡುತ್ತಿದ್ದ ವೇಳೆ, ಗುಂಪಿನ ನಡುವಿನಿಂದ ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಶವವನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವುದು ಕಂಡಿದೆ. ಇದನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿರುವ ಬಿಜೆಪಿ ನಾಯಕ ಅಮಿತ್‌ ಮಾಳವಿಯ, , 'ಸಾಕ್ಷ್ಯವನ್ನು ನಿರ್ಮೂಲನೆ ಮಾಡುವುದು ಅಥವಾ ದುರ್ಬಲಗೊಳಿಸುವುದು ಮತ್ತು ಅಪರಾಧವನ್ನು ಮುಚ್ಚಿಹಾಕುವ ಉದ್ದೇಶದಿಂದ ಇಂತಹ ಆತುರ ಹೆಚ್ಚಾಗಿ ಕಂಡುಬರುತ್ತದೆ' ಎಂದು ಹೇಳಿದ್ದಾರೆ. ಇದರ ಬೆನ್ನಲ್ಲಿಯೇ ರಾಷ್ಟ್ರೀಯ ಮಹಿಳಾ ಆಯೋಗ ಪಶ್ಚಿಮ ಬಂಗಾಳ ಪೊಲೀಸರಿಗೆ ನೋಟಿಸ್‌ ಜಾರಿ ಮಾಡಿದ್ದು, ಘಟನೆಯ ಕುರಿತಾಗಿ ವರದಿ ನೀಡುವಂತೆ ಸೂಚಿಸಿದೆ.

Add Asianetnews Kannada as a Preferred SourcegooglePreferred

"ಈ ವೀಡಿಯೋದಲ್ಲಿ ಇರುವುದು ಉತ್ತರ ದಿನಜ್‌ಪುರದ ಕಲಿಯಗಂಜ್‌ನಲ್ಲಿ ರಾಜ್‌ಬೊಂಗ್ಷಿ ಸಮುದಾಯದ ಅಪ್ರಾಪ್ತ ಬಾಲಕಿಯ ದೇಹ. ಅತ್ಯಾಚಾರಕ್ಕೆ ಒಳಗಾಗಿ ಸಾವು ಕಂಡಿದ್ದ ಈಕೆಯ ದೇಹವನ್ನು ಪಶ್ಚಿಮ ಬಂಗಾಳ ಪೊಲೀಸರು ಅಮಾನವೀಯವಾಗಿ ಎಳೆದುಕೊಂಡು ಹೋಗುತ್ತಿದ್ದಾರೆ. ಸಾಕ್ಷ್ಯವನ್ನು ಮುಚ್ಚಿಹಾಕುವುದು ಅಥವಾ ದುರ್ಬಲಗೊಳಿಸುವುದು ಮತ್ತು ಅಪರಾಧವನ್ನು ಮುಚ್ಚಿಡುವ ಉದ್ದೇಶದಿಂದ ಇಂತಹ ಆತುರ ಹೆಚ್ಚಾಗಿ ಕಂಡುಬರುತ್ತದೆ. ಅಚ್ಚರಿ ಎನ್ನುವಂತೆ ಮಮತಾ ಬ್ಯಾನರ್ಜಿ ಸರ್ಕಾರವು ಸ್ಥಳೀಯ ಬಿಜೆಪಿ ಶಾಸಕರಾದ ಸತ್ಯೇಂದ್ರ ನಾಥ್ ರೇ (ರಾಜಬೊಂಗ್ಶಿ ಸಮುದಾಯದಿಂದ) ಮತ್ತು ಬುಧರಾಯ್ ತುಡು ಅವರನ್ನು ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ. ಆದರೆ ಉತ್ತರ ದಿನಜ್‌ಪುರ ಟಿಎಂಸಿ ಅಧ್ಯಕ್ಷ ಕನಯಾ ಲಾಲ್ ಅಗರ್ವಾಲ್‌ಗೆ ಕುಟುಂಬವನ್ನು ಭೇಟಿ ಮಾಡುವ ಅವಕಾಶ ನೀಡಲಾಗಿದೆ. ಸರ್ಕಾರ ಇಲ್ಲಿ ಯಾರನ್ನು ರಕ್ಷಿಸಲು ಯತ್ನಿಸುತ್ತಿದೆ ಎನ್ನುವುದೇ ಅಚ್ಚರಿಯಾಗಿದೆ' ಎಂದು ಮಾಳವೀಯ ಬರೆದುಕೊಂಡಿದ್ದಾರೆ.

ಇನ್ನು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂಧು ಅಧಿಕಾರಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಇಂಥದ್ದೊಂದು ಹೀನ ಕೃತ್ಯಕ್ಕೆ ರಾಜ್ಯ ಪೊಲೀಸರೇ ಜವಾಬ್ದಾರಿ. ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮುಂದಿನ ತಿಂಗಳು ಜಿಲ್ಲೆಗೆ ಭೇಟಿ ನೀಡಲಿರುವ ಉದ್ದೇಶಿತ ಪ್ರವಾಸಕ್ಕೆ ಭದ್ರತಾ ವ್ಯವಸ್ಥೆಯಲ್ಲಿ ಪೊಲೀಸರು ನಿರತರಾಗಿದ್ದಾರೆ ಎಂದು ಬಿಜೆಪಿ ನಾಯಕ ಆರೋಪಿಸಿದ್ದಾರೆ.

Scroll to load tweet…

ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಬಳಿ ಹೋಟೆಲ್‌ ನಿರ್ಮಿಸುತ್ತೆ ಟಾಟಾ ಗ್ರೂಪ್‌!

ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಅತ್ಯಾಚಾರ ಹಾಗೂ ಕೊಲೆ ಪ್ರಕರಣವಾಗಿದೆ. ಉತ್ತರ ದಿನಜ್‌ಪುರದ ಕಲಿಯಗಂಜ್‌ನಲ್ಲಿ ರಾಜಬೊಂಗ್ಶಿ ಸಮುದಾಯದ 10ನೇ ತರಗತಿ ಬಾಲಕಿಯ ಮೃತದೇಹ ಇಂಥ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬುಡಕಟ್ಟು ಮಹಿಳೆಯರ ಮೇಲೆ ನಿರಂತರವಾಗಿ ಇಲ್ಲಿ ಹಲ್ಲೆಗಳು ಆಗುತ್ತಿವೆ. ಒಶ್ಚಿಮ ಬಂಗಾಳದ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ನಿಜಕ್ಕೂ ದುಃಖವಾಗುತ್ತಿದೆ. ಪಶ್ಚಿಮ ಬಂಗಾಳ ಪೊಲೀಸರು ಅಭಿಷೇಕ್‌ ಬ್ಯಾನರ್ಜಿಗೆ ಭದ್ರತೆಯನ್ನು ನೀಡಲು ನಿರತರಾಗಿದ್ದಾರೆ. ಆದರೆ, ಸಾಮಾನ್ಯ ಜನರು ಈ ರೀತಿಯಲ್ಲಿ ಸಾವು ಕಾಣುತ್ತಿದ್ದಾರೆ. ಅದರಲ್ಲೂ ಮಹಿಳೆಯರು ಭಾರಿ ಬೆಲೆ ತೆರುತ್ತಿದ್ದಾರೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ದುಷ್ಕರ್ಮಿಗಳು ಸುಲಭವಾಗಿ ಹೊರಗಡೆ ತಿರುಗಾಡುತ್ತಿದ್ದಾರೆ ಎಂದು ಸುವೇಂದು ಅಧಿಕಾರಿ ಟೀಕಿಸಿದ್ದಾರೆ.

ಗಲಭೆ ಉದ್ದೇಶಕ್ಕೆ ರಾಮನವಮಿ, ಹನುಮಾನ್‌ ಜಯಂತಿ ಆಯೋಜನೆ, ಎನ್‌ಸಿಪಿ ನಾಯಕನ ವಿವಾದಿತ ಹೇಳಿಕೆ!

ಏನಿದು ಪ್ರಕರಣ: ಬಂಗಾಳ ಪೊಲೀಸರ ಪ್ರಕಾರ, ಅಪ್ರಾಪ್ತ ಬಾಲಕಿಯ ಮೇಲೆ ಅಪರಿಚಿತ ದುಷ್ಕರ್ಮಿಗಳು ಅತ್ಯಾಚಾರವೆಸಗಿ ಹತ್ಯೆಗೈದಿದ್ದಾರೆ. ಇದು ರಾಜ್ಯದ ಉತ್ತರ ದಿನಾಜ್‌ಪುರ ಜಿಲ್ಲೆಯ ಕಲಿಯಾಗಂಜ್‌ನಲ್ಲಿ ನಡೆದಿದೆ. ಶುಕ್ರವಾರ ಬೆಳಗ್ಗೆ ಕಾಲುವೆಯಲ್ಲಿ ಶವ ತೇಲುತ್ತಿದ್ದಾಗ ಗ್ರಾಮಸ್ಥರು ಪತ್ತೆ ಮಾಡಿದ್ದಾರೆ. ಗುರುವಾರ ಸಂಜೆ ಅಪ್ರಾಪ್ತ ಬಾಲಕಿ ನಾಪತ್ತೆಯಾಗಿದ್ದಳು. ಸಂತ್ರಸ್ತೆ ಗಂಗುವ ಗ್ರಾಮದ ನಿವಾಸಿಯಾಗಿದ್ದು, ಟ್ಯೂಷನ್ ತರಗತಿ ಮುಗಿಸಿ ಬರುವಾಗ ನಾಪತ್ತೆಎಯಾಗಿದ್ದಳು. ಸ್ಥಳೀಯರು ಮತ್ತು ಪೊಲೀಸರು ವ್ಯಾಪಕ ಹುಡುಕಾಟ ನಡೆಸಿದರೂ ಆಕೆ ಪತ್ತೆಯಾಗಿಲ್ಲ. ಆಕೆಯ ಕುಟುಂಬಸ್ಥರಿಂದ ಈ ಕುರಿತು ದೂರು ದಾಖಲಾಗಿತ್ತು.