ಯು.ಪಿಯಲ್ಲಿ ಬಿಜೆಪಿ ಸಂಸದ ಮೇಲೆ ಕೈ ಕಾರ್ಯಕರ್ತರ ದಾಳಿ!
* ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬಂದ ಸಂಸದನ ಮೇಲೆ ದಾಳಿ
* ಕಾಂಗ್ರೆಸ್ ಮುಖಂಡ ಪ್ರಮೋದ್ ತಿವಾರಿ ತಮ್ಮ ಬೆಂಬಲಿಗರ ಜತೆಗೂಡಿ ಹಲ್ಲೆ
ಪ್ರತಾಪ್ಗಢ(ಸೆ.26): ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬಂದ ತಮ್ಮ ಮೇಲೆ ಕಾಂಗ್ರೆಸ್ ಮುಖಂಡ ಪ್ರಮೋದ್ ತಿವಾರಿ(Pramod Tiwari) ಅವರು ತಮ್ಮ ಬೆಂಬಲಿಗರ ಜತೆಗೂಡಿ ಹಲ್ಲೆ ನಡೆಸಿದ್ದಾರೆ ಎಂದು ಪ್ರತಾಪ್ಗಢದ ಬಿಜೆಪಿ ಸಂಸದ ಸಂಗಮ್ ಲಾಲ್ ಗುಪ್ತಾ(Sangal Lal Gupta) ಆರೋಪಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರ ದಾಳಿಯಿಂದ ಸಂಸದ ಸಂಗಮ್ ಲಾಲ್(Sangal Lal Gupta) ಅವರ ಕುರ್ತಾ ಪೂರ್ತಿ ಛಿದ್ರಗೊಂಡಿದ್ದು, ಸಣ್ಣ ಗಾಯಗಳಾಗಿವೆ.
ಈ ಪ್ರಕರಣ ಸಂಬಂಧ ಕಾಂಗ್ರೆಸ್ನ(Congress) ಹಿರಿಯ ಮುಖಂಡ ಪ್ರಮೋದ್ ತಿವಾರಿ ಹಾಗೂ ಅವರ ಪುತ್ರಿ ಆರಾಧನಾ ಮಿಶ್ರಾ ಸೇರಿದಂತೆ ಒಟ್ಟಾರೆ 27 ಮಂದಿಯ ವಿರುದ್ಧ ಪೊಲೀಸರು ದೂರು ದಾಖಲಿಸಿ, ತನಿಖೆಗೆ ಇಳಿದಿದ್ದಾರೆ.
ಅಲ್ಲದೆ ಈ ಕೃತ್ಯದಲ್ಲಿ ಭಾಗಿಯಾದ ಇತರ 50 ಅಪರಿಚಿತರ ವಿರುದ್ಧವೂ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ ಒಬ್ಬೇ ಒಬ್ಬ ವ್ಯಕ್ತಿಯನ್ನು ಶಿಕ್ಷಿಸದೇ ಬಿಡಬಾರದು ಎಂದು ಹೇಳಿದ್ದಾರೆ.