ರಾಜಧಾನಿಗೆ ಹೊರಗಿನಿಂದ ಕೋಳಿ ಮಾಂಸ ತರುವಂತೆ ಇಲ್ಲ!
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿಯೂ ಕಾಣಿಸಿಕೊಂಡ ಹಕ್ಕಿ ಜ್ವರ/ ದೇಶದ ಎಂಟು ರಾಜ್ಯದಲ್ಲಿ ಹಕ್ಕಿ ಜ್ವರ ಪ್ರಕರಣ/ ರಾಷ್ಟ್ರ ರಾಜಧಾನಿ ಒಳಕ್ಕೆ ಸಂಸ್ಕರಿಸಿದ ಕೋಳಿ ಮಾಂಸ ಇಲ್ಲ
ನವದೆಹಲಿ(ಜ. 11) ಕೊರೋನಾ ನಂತರ ಹಕ್ಕಿಜ್ವರ ಕಾಡುತ್ತಿದೆ. ಈಗ ನವದೆಹಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮವೊಂದಕ್ಕೆ ಮುಂದಾಗಿದೆ. ದೆಹಲಿಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ನಂತರದಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆದೇಶ ಒಂದನ್ನು ಹೊರಡಿಸಿದ್ದಾರೆ.
ದೆಹಲಿಗೆ ಹೊರಗಿನಿಂದ ಸಂಸ್ಕರಿಸಿದ ಮಾಂಸ ಬರುವುದಕ್ಕೆ ತಡೆ ಹೇರಲಾಗಿದೆ. ಹಕ್ಕಿ ಜ್ವರಕ್ಕೆ ಸಂಬಂಧಿಸಿ ಸಾರ್ವಜನಿಕರು ಗೊಂದಲಕ್ಕೆ ಸಿಲುಕಬಾರದು. ಸರ್ಕಾರ ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದು ಜನರ ಹಿತ ಕಾಪಾಡಲು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಕೊರೋನಾ ಆತಂಕ ಕಡಿಮೆಯಾಯಿತು ಎಂದಾಗಲೆ ಹಕ್ಕಿ ಜ್ವರದ ಭೀತಿ ಕಾಣಿಸಿಕೊಂಡಿದೆ. ದೇಶದ ಎಂಟು ರಾಜ್ಯಗಳಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದೆ. ಉತ್ತರ ಪ್ರದೇಶ, ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಗುಜರಾತ್ ನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ಇದೀಗ ದೆಹಲಿಯಲ್ಲಿಯೂ ಪ್ರಕರಣ ವರದಿಯಾದ ನಂತರ ಸರ್ಕಾರ ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ.