ಭಾರತ್‌ ಜೋಡೋ ಯಾತ್ರೆಯ ವೇಳೆ ಭಾರತದ ರಾಷ್ಟ್ರಗೀತೆ ಬದಲು ನೇಪಾಳದ ರಾಷ್ಟ್ರಗೀತೆಯನ್ನು ಹಾಕಿ ಪ್ರಮಾದ ಮಾಡಿದ ಘಟನೆ ನಡೆದಿದೆ. ಈ ಕುರಿತಾಗಿ ಬಿಜೆಪಿ ರಾಹುಲ್‌ ಗಾಂಧಿ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದೆ. 

ಮುಂಬೈ (ನ.17): ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ಯಾತ್ರೆ ಮತ್ತೊಮ್ಮೆ ಸುದ್ದಿಯಲ್ಲಿದೆ. ಆದರೆ, ಈ ಬಾರಿ ಈ ಯಾತ್ರೆ ಕೆಟ್ಟ ಕಾರಣಗಳಿಂದಾಗಿ ಸುದ್ದಿಯಾಗಿದೆ. ಮಹಾರಾಷ್ಟ್ರದಲ್ಲಿ ಭಾರತ್‌ ಜೋಡೋ ಯಾತ್ರೆ ನಡೆಯುತ್ತಿದ್ದು, ಬುಧವಾರದ ಪಾದಯಾತ್ರೆ ಮುಕ್ತಾಯದ ವೇಳೆ ರಾಷ್ಟ್ರಗೀತೆ ಹಾಕುವ ವೇಳೆ ಪ್ರಮಾದ ನಡೆದಿದೆ. ದೇಶದ ರಾಷ್ಟ್ರಗೀತೆ ಹಾಕುವ ಬದಲು ನೇಪಾಳದ ರಾಷ್ಟ್ರಗೀತೆಯನ್ನು ಈ ವೇಳೆ ನುಡಿಸಲಾಗಿದೆ. ಇದರ ಕ್ಲಿಪ್‌ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಕ್ಲಿಪ್‌ನಲ್ಲಿ ರಾಹುಲ್‌ ಗಾಂಧಿ ಮಾತನಾಡುತ್ತಿದ್ದು, ತಮ್ಮ ಭಾಷಣದ ಕೊನೆಯಲ್ಲಿ ರಾಷ್ಟ್ರೀಯ ಗೀತ್‌ ನುಡಿಸುವಂತೆ ಹೇಳುತ್ತಾರೆ. ವೇದಿಕೆಯಲ್ಲಿದ್ದ ಪಕ್ಷದ ಎಲ್ಲಾ ನಾಯಕರು ಎದ್ದು ನಿಂತು ರಾಷ್ಟ್ರಗೀತೆಯನ್ನು ಹಾಡಲು ಪ್ರಾರಂಭ ಮಾಡುವ ವೇಳೆಯಲ್ಲಿಯೇ, ಸೌಂಡ್‌ ಬಾಕ್ಸ್‌ನಿಂದ ರಾಷ್ಟ್ರಗೀತೆ ಕೂಡ ಪ್ಲೇ ಆಗುತ್ತದೆ. ಆದರೆ, ಇಲ್ಲಿ ಭಾರತದ ಬದಲು ನೇಪಾಳದ ರಾಷ್ಟ್ರಗೀತೆ ಪ್ಲೇ ಆಗಿತ್ತು. ರಾಷ್ಟ್ರಗೀತೆಗಾಗಿ ಎದ್ದುನಿಂತ ಕಾಂಗ್ರೆಸ್‌ ನಾಯಕರಿಗೆ ಕೆಲ ಕ್ಷಣದ ಬಳಿಕ ಇದು ಭಾರತ್ ರಾಷ್ಟ್ರಗೀತೆಯಲ್ಲ ಎನ್ನುವುದು ಅರಿವಿಗೆ ಬರುತ್ತದೆ.

Scroll to load tweet…


ಅದಲ್ಲದೆ, ಕಾಂಗ್ರೆಸ್ ನಾಯಕರು ಈ ಹಂತದಲ್ಲಿ ಪದೇ ಪದೇ ರಾಷ್ಟ್ರೀಯ ಗೀತ್‌ ಹಾಕುವಂತೆ ಹೇಳುತ್ತಾರೆ. ಆದರೆ, ಈ ದೇಶದ ರಾಷ್ಟ್ರೀಯ ಗೀತ್‌, ವಂದೇ ಮಾತರಂ ಆಗಿದ್ದರೆ, ರಾಷ್ಟ್ರೀಯ ಗಾನ ಜನ ಗಣ ಮನವಾಗಿದೆ. ಇದನ್ನು ತಿಳಿಯದ ಕಾಂಗ್ರೆಸ್‌ ನಾಯಕರು ಪದೇ ಪದೇ ರಾಷ್ಟ್ರೀಯ ಗಾನ ಎನ್ನುವ ಬದಲು ರಾಷ್ಟ್ರೀಯ ಗೀತ್‌ ಹಾಕುವಂತೆ ಹೇಳಿದ್ದರು.

ಸಾಕಷ್ಟು ಗೊಂದಲಗಳು ಹಾಗೂ ಮುಜುಗರದ ಸನ್ನಿವೇಶದ ಬಳಿಕ, ರಾಷ್ಟ್ರಗೀತೆಯನ್ನು ಹಾಕಲು ನಿಂತಿದ್ದ ವ್ಯಕ್ತಿ ಜನ ಗಣ ಮನನ್ನು ಪ್ಲೇ ಮಾಡುತ್ತಾರೆ. ಆದರೆ, ರಾಹುಲ್‌ ಗಾಂಧಿಗೆ ಮುಜುಗರ ಇಲ್ಲಿಗಷ್ಟೇ ನಿಲ್ಲುವುದಿಲ್ಲ. ರಾಷ್ಟ್ರಗೀತೆಯ ಬದಲು 'ಭಾರತ ಭಾಗ್ಯ ಬಿದಾತ'ದ ಸಂಪೂರ್ಣ ಐದು ಪ್ಯಾರಾಗ್ರಾಫ್‌ಗಳಿದ್ದ ಹಾಡನ್ನು ಪ್ಲೇ ಮಾಡಲಾಗಿತ್ತು. ಜನ ಗಣ ಮನ ಗೀತೆ, 'ಜಯ ಜಯ ಜಯ ಜಯ ಹೇ..' ಎನ್ನುವಲ್ಲಿಗೆ ಕೊನೆಗೊಳ್ಳುತ್ತದೆ. ಆದರೆ, ಭಾರತ ಭಾಗ್ಯ ಬಿದಾತ ಗೀತೆ ಅದರ ನಂತರವೂ ಮುಂದುವರಿಯುತ್ತದೆ.

Accident In Bharat Jodo Yatra: ಭಾರತ್‌ ಜೋಡೋ ಯಾತ್ರೆಯಲ್ಲಿ ಅಪಘಾತ, ಕಾಂಗ್ರೆಸ್‌ ಕಾರ್ಯಕರ್ತ ಸಾವು!

ಆದರೆ, ಕಾರ್ಯಕ್ರಮದ ವೇದಿಕೆಯಲ್ಲಿ ಜಯ ಜಯ ಜಯ ಜಯ ಹೇ.. ಎನ್ನುವಲ್ಲಿಗೆ ಕಾಂಗ್ರೆಸ್‌ ಕಾರ್ಯಕರ್ತರು ಭಾರತ್‌ ಮಾತಾ ಕೀ ಜೈ ಎನ್ನುವ ಘೋಷಣೆ ಕೂಗಲು ಆರಂಭಿಸುತ್ತಾರೆ. ಆದರೆ, ಹಾಡು ಮುಂದುವರಿಯುತ್ತಲೇ ಇದ್ದಾಗ ರಾಹುಲ್‌ ಗಾಂಧಿ ಮುಖದಲ್ಲೂ ಪ್ರಶ್ನಾರ್ಥಕ ಚಿಹ್ನೆ ಎದ್ದಿತ್ತು. ಇದರ ನಡುವೆ ಕೆಲವರು ಹಾಡನ್ನು ನಿಲ್ಲಿಸುವಂತೆ ಹೇಳುತ್ತಿದ್ದರು.
ಭಾರತ ಭಾಗ್ಯ ಬಿದಾತ ಹಾಡಿನ ಮೊದಲ ಪ್ಯಾರಾವನ್ನು ಮಾತ್ರವೇ ರಾಷ್ಟ್ರಗೀತೆಯನ್ನಾಗಿ ಮಾಡಿ 57 ಸೆಕೆಂಡ್‌ಗಳ ಕಾಲ ಹಾಡಲಾಗುತ್ತದೆ. ಆದರೆ, ಭಾರತ ಭಾಗ್ಯ ಬಿದಾತ ಹಾಡು ಐದು ಪ್ಯಾರಾ ಇರುವ ಹಾಡಾಗಿದೆ. ಇನ್ನು ಬಂಗಾಳಿ ಭಾಷೆಯಲ್ಲಿ ರವೀಂದ್ರನಾಥ್‌ ಟ್ಯಾಗೋರರು ಬರೆದಿದ್ದರು.

ಭಾರತ್‌ ಜೋಡೋ ಯಾತ್ರೆಯಿಂದ ಯಾವುದೇ ರೀತಿಯ ಪರಿಣಾಮವಾಗೋದಿಲ್ಲ: ಕೇಂದ್ರ ಸಚಿವ ಜೋಶಿ

ಬಿಜೆಪಿಯಿಂದ ಟೀಕೆ: ಇನ್ನು ಬಿಜೆಪಿ ನಾಯಕರು ಇದೇ ಸಿಕ್ಕ ಅವಕಾಶ ಎಂದುಕೊಂಡು ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ಪಕ್ಷವನ್ನು ಪ್ರಮಾದಕ್ಕಾಗಿ ಟೀಕಿಸಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಮಹಾರಾಷ್ಟ್ರ ಬಿಜೆಪಿ ನಾಯಕ ನಿತೀಶ್‌ ರಾಣೆ, 'ಪಪ್ಪು ವಿನ ಕಾಮಿಡಿ ಸರ್ಕಸ್‌' ಎಂದು ಟೀಕಿಸಿದ್ದಾರೆ. ತಮಿಳುನಾಡು ಬಿಜೆಪಿ ನಾಯಕ ಅಮರ್‌ ಪ್ರಸಾದ್ ರೆಡ್ಡಿ ವಿಡಿಯೋವನ್ನು ಹಂಚಿಕೊಂಡು, 'ರಾಹುಲ್‌ ಗಾಂಧಿ, ಏನಿದು?' ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ನೆಟ್ಟಿಗರು, ರಾಷ್ಟ್ರಗೀತ್‌ ಹಾಗೂ ರಾಷ್ಟ್ರಗಾನದ ನಡುವಿನ ವ್ಯತ್ಯಾಸ ಗೊತ್ತಿಲ್ಲದ, ಜನ ಗಣ ಮನ ಹಾಗೂ ಭಾರತ ಭಾಗ್ಯ ಬಿದಾತ ಹಾಡಿನ ವ್ಯತ್ಯಾಸ ಗುರುತಿಸದ ರಾಹುಲ್‌ ಗಾಂಧಿಯನ್ನು ಟೀಕೆ ಮಾಡಿದ್ದಾರೆ. ಅವರು ನೇಪಾಳದ ರಾಷ್ಟ್ರಗೀತೆಯನ್ನು ಮುಂದುವರಿಸಬೇಕಿತ್ತು. ಪಪ್ಪು ನೇಪಾಳದ ಪಿಎಂ ಆದರೂ ಆಗ್ತಿದ್ರು ಎಂದು ಒಬ್ಬ ವ್ಯಕ್ತಿ ಪ್ರತಿಕ್ರಿಯೆ ನೀಡಿದ್ದಾನೆ.