* ಕೇಂದ್ರದ ಕೃಷಿ ಕಾಯ್ದೆ ವಿರೋ​ಧಿಸಿ ದೇಶ​ವ್ಯಾಪಿ ಪ್ರತಿ​ಭ​ಟ​ನೆ* ಬಂದ್‌ಗೆ ಕಾಂಗ್ರೆಸ್‌, ಬಿಎಸ್‌ಪಿ, ಆರ್‌ಜೆಡಿ, ಡಿಎಂಕೆ, ವೈಎ​ಸ್ಸಾ​ರ್‌ ಬೆಂಬ​ಲ* ಉತ್ತರ ರಾಜ್ಯ​ಗ​ಳು, ವಿಪಕ್ಷ ಆಡ​ಳಿ​ತದ ರಾಜ್ಯ​ಗ​ಳಲ್ಲಿ ಯಶ ಸಾಧ್ಯ​ತೆ

ನವದೆಹಲಿ(ಸೆ.27): ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು(Farm Law) ವಿರೋಧಿಸಿ ರೈತರು ಕಳೆದ 10 ತಿಂಗಳಿನಿಂದ ನಡೆಸುತ್ತಿರುವ ಪ್ರತಿ​ಭ​ಟನೆ ಮತ್ತಷ್ಟು ಕಾವು ಪಡೆ​ದು​ಕೊ​ಳ್ಳುವ ಸಾಧ್ಯ​ತೆ ಇದೆ. ಕೃಷಿ ಕಾಯ್ದೆ​ಗಳ ರದ್ದ​ತಿಗೆ ಆಗ್ರ​ಹಿಸಿ 40 ರೈತ ಸಂಘ​ಟ​ನೆ​ಗಳ(Farmers Union) ಮಾತೃ ಸಂಸ್ಥೆ​ಯಾದ ಸಂಯುಕ್ತ ಕಿಸಾನ್‌ ಮೋರ್ಚಾ(Kisan Morcha), ಸೋಮ​ವಾರ ಭಾರತ್‌ ಬಂದ್‌ಗೆ(Bharat bandh) ಕರೆ ನೀಡಿ​ದೆ.

ಮುಂಜಾನೆ 6 ರಿಂದ ಸಾಯಂಕಾಲ 6ರವರೆಗೆ ನಡೆಯುವ ಬಂದ್‌ ನಡೆ​ಯ​ಲಿ​ದೆ. ಭಾರತ್‌ ಬಂದ್‌ಗೆ ಕಾಂಗ್ರೆಸ್‌ ಪಕ್ಷ ಸೇರಿದಂತೆ ಹಲವು ವಿಪಕ್ಷಗಳು ಹಾಗೂ ವಿಪಕ್ಷ ಆಡ​ಳಿ​ತದ ರಾಜ್ಯ​ಗ​ಳು ಬೆಂಬಲ ಸೂಚಿಸಿವೆ. ಹೀಗಾಗಿ ರೈತ ಹೋರಾ​ಟದ ತಾಣ​ವಾ​ಗಿ​ರುವ ಪಂಜಾಬ್‌, ಹರ್ಯಾಣ, ಉತ್ತರ ಪ್ರದೇಶ, ರಾಜ​ಸ್ಥಾ​ನ ಹಾಗೂ ವಿಪಕ್ಷ ಆಡ​ಳಿ​ತದ ರಾಜ್ಯ​ಗ​ಳಲ್ಲಿ ಬಂದ್‌ಗೆ ಉತ್ತಮ ಪ್ರತಿ​ಕ್ರಿಯೆ ವ್ಯಕ್ತ​ವಾ​ಗುವ ಸಾಧ್ಯತೆ ಇದೆ. ವ್ಯಾಪಾರ ವಹಿ​ವಾಟು ಹಾಗೂ ಸಾರಿಗೆ ವ್ಯವಸ್ಥೆ ಏರು​ಪೇ​ರಾ​ಗುವ ಸಂಭ​ವ​ವಿ​ದೆ.

ಕಳೆದ ವರ್ಷ ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾಯಿದೆಗಳು ರೈತ​ರಿಗೆ ಮಾರ​ಕ​ವಾ​ಗಿವೆ. ಖಾಸಗಿ ಉದ್ಯ​ಮಿ​ಗಳ ಏಕಸ್ವಾಮ್ಯ ಆಗ​ಲಿದ್ದು, ಸರ್ಕಾ​ರದ ಎಪಿ​ಎಂಸಿ(APMC) ವ್ಯವಸ್ಥೆ ಬಲ ಕಳೆ​ದು​ಕೊ​ಳ್ಳ​ಲಿ​ದೆ ಎಂದು ಹಲವಾರು ರೈತ ಸಂಘಟನೆಗಳು 300ಕ್ಕೂ ಹೆಚ್ಚು ದಿನದಿಂದ ದೆಹಲಿ ಹೊರ​ವ​ಲ​ಯ​ದಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿವೆ. ಈ ಕಾಯಿದೆಗಳು ರೈತರ ಬದುಕನ್ನು ಬೀದಿಗೆ ತರುತ್ತವೆ. ಈ ಕಾಯಿದೆಗಳನ್ನು ಹಿಂಪಡೆಯಬೇಕು ಎಂಬುದು ಸಂಘ​ಟ​ನೆ​ಗಳ ಆಗ್ರ​ಹ.

ವಿಪ​ಕ್ಷ​, ಕೆಲವು ಸರ್ಕಾ​ರ​ಗ​ಳ ಬೆಂಬ​ಲ:

ಸೋಮ​ವಾ​ರದ ಬಂದ್‌​ಗೆ ಕಾಂಗ್ರೆಸ್‌ ಪಕ್ಷ ಸಂಪೂರ್ಣ ಬೆಂಬಲ ವ್ಯಕ್ತಡಿಸಿದ್ದು, ತನ್ನಲ್ಲೇ ಕಾರ್ಯಕರ್ತರಿಗೆ, ರಾಜ್ಯ ಹಾಗೂ ಸಮಿತಿಗಳ ಪದಾಧಿಕಾರಿಗಳಿಗೆ ಪ್ರತಿಭಟನೆಗೆ ಬೆಂಬಲ ನೀಡುವಂತೆ ಮನವಿ ಮಾಡಿದೆ.

ಅಲ್ಲದೆ, ಆಮ್‌ ಆದ್ಮಿ ಪಕ್ಷ, ವೈಎಸ್‌ಆರ್‌ಸಿ, ಡಿಎಂಕೆ, ತೆಲುಗು ದೇಶಂ ಪಕ್ಷ, ಬಿಎಸ್‌ಪಿ, ಆರ್‌ಜೆಡಿ ಪಕ್ಷಗಳು ಬಂದ್‌ಗೆ ಬೆಂಬಲ ಸೂಚಿಸಿವೆ. ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳು ಬಂದ್‌ಗೆ ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿವೆ. ಆಂಧ್ರ ಸರ್ಕಾರ ಸೆ.26ರ ಮಧ್ಯರಾತ್ರಿಯಿಂದ ಸೆ.27ರ ಮಧ್ಯಾಹ್ನದವರೆಗೆ ಸರ್ಕಾರಿ ಸಾರಿಗೆ ವಾಹನಗಳನ್ನು ನಿಲ್ಲಿಸುವುದಾಗಿ ಭರವಸೆ ನೀಡಿದೆ.

ಈ ನಡುವೆ, ಪ್ರತಿಭಟನಾಕಾರಿಗೆ ದೆಹಲಿ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ದೆಹಲಿ ಪೊಲೀಸ್‌ ಹೇಳಿದೆ.