ಬೆಂಗಳೂರು ಟ್ರಾಫಿಕ್ನಲ್ಲಿ ಸಿಲುಕಿದ ವೈದ್ಯ: ರೋಗಿ ಪ್ರಾಣ ಉಳಿಸಲು ಮೂರು ಕೀ.ಮೀ. ರನ್ನಿಂಗ್
ಬೆಂಗಳೂರಿನ ಈ ಟ್ರಾಫಿಕ್ ಪಾಡನ್ನು ಹೇಳಿ ಸುಖವಿಲ್ಲ. ಇಂತಹ ಸ್ಥಿತಿಯಲ್ಲಿ ಬೆಂಗಳೂರಿನ ವೈದ್ಯರೊಬ್ಬರು ಮಾಡಿದ ಕಾರ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವೈದ್ಯರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅದರಲ್ಲೂ ಮಳೆ ಬಂದರಂತು ಪರಿಸ್ಥಿತಿ ಕೇಳುವುದೇ ಬೇಡ. ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಬೆಂಗಳೂರಿನ ಟ್ರಾಫಿಕ್ನಿಂದಾಗಿ ಅನೇಕರು ಸರಿಯಾದ ಸಮಯಕ್ಕೆ ಕಚೇರಿ ತಲುಪಲಾಗದೆ ಮನೆ ತಲುಪಲಾಗದೆ ಸಂಕಷ್ಟ ಎದುರಿಸಿದ್ದಾರೆ. ಮತ್ತೆ ಕೆಲವರಿಗೆ ತುರ್ತು ಸಮಯದಲ್ಲಿ ಚಿಕಿತ್ಸೆ ಸಿಗದೇ ಪ್ರಾಣ ಕಳೆದುಕೊಂಡ ನಿದರ್ಶನಗಳಿವೆ. ಬೆಂಗಳೂರಿನ ಈ ಟ್ರಾಫಿಕ್ ಪಾಡನ್ನು ಹೇಳಿ ಸುಖವಿಲ್ಲ. ಇಂತಹ ಸ್ಥಿತಿಯಲ್ಲಿ ಬೆಂಗಳೂರಿನ ವೈದ್ಯರೊಬ್ಬರು ಮಾಡಿದ ಕಾರ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವೈದ್ಯರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
ಬೆಂಗಳೂರಿನ ವೈದ್ಯರಾದ ಡಾ, ಗೋವಿಂದ್ ನಂದಕುಮಾರ್ ಅವರು ಸರ್ಜಾಪುರದ ಮಣಿಪಾಲ ಆಸ್ಪತ್ರೆಯಲ್ಲಿ ಗ್ಯಾಸ್ಟ್ರೋಎಂಟರಾಲಜಿ ಸರ್ಜನ್ (gastroenterology surgeon) ಆಗಿದ್ದು, ಅವರು ಆಸ್ಪತ್ರೆಗೆ ಕರ್ತವ್ಯಕ್ಕೆ ಬರುವ ವೇಳೆ ಸರ್ಜಾಪುರ ಮಾರತ್ಹಳ್ಳಿ (Sarjapur-Marathahalli) ಮಧ್ಯೆ ಟ್ರಾಫಿಕ್ನಲ್ಲಿ ಸಿಲುಕಿಕೊಂಡಿದ್ದರು. ಸರ್ಜಾಪುರದಿಂದ ಕನ್ಹಿಂಗ್ಹ್ಯಾಮ್ (Cunningham Road) ರಸ್ತೆಯ ಮೂಲಕ ಅವರು ಮಣಿಪಾಲ ಆಸ್ಪತ್ರೆಗೆ ಬರಬೇಕಾಗಿತ್ತು. ಆದರೆ ಟ್ರಾಫಿಕ್ನಲ್ಲಿ ಸಿಲುಕಿದ ಅವರು ಅಂದೇ ತುರ್ತಾಗಿ ರೋಗಿಯೊಬ್ಬರಿಗೆ ಲ್ಯಾಪರೊಸ್ಕೋಪಿಕ್ ಪಿತ್ತಕೋಶದ ಶಸ್ತ್ರಚಿಕಿತ್ಸೆ ಮಾಡಬೇಕಾಗಿತ್ತು.
ಟ್ರಾಫಿಕ್ನಿಂದಾಗಿ ಶಸ್ತ್ರಚಿಕಿತ್ಸೆಗೆ ಈಗಾಗಲೇ ವಿಳಂಬವಾಗಿದ್ದು,ಹೀಗಾಗಿ ಅವರು ತಮ್ಮ ಕಾರಿನಿಂದ ಇಳಿದು ಆಸ್ಪತ್ರೆಗೆ ಓಡಿಕೊಂಡು ಹೋಗಲು ನಿರ್ಧರಿಸಿದ್ದರು. ಆಗಸ್ಟ್ 30 ರಂದು ಈ ಘಟನೆ ನಡೆದಿದ್ದು, ನಾನು ಕೊನೆಯ ಕ್ಷಣದಲ್ಲಿ ಇನ್ನೇನು ಆಸ್ಪತ್ರೆಗೆ ತಲುಪಬೇಕು ಎನ್ನುವಷ್ಟರಲ್ಲಿ ಟ್ರಾಫಿಕ್ ಮಧ್ಯೆ ಸಿಲುಕಿಕೊಂಡಿದ್ದೆ. ಈಗಾಗಲೇ ತಡವಾಗಿರುವುದಕ್ಕೆ ಆತಂಕಕ್ಕೊಳಗಾಗಿದೆ ಎಂದು ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತಾನಿರುವ ಸ್ಥಳದಿಂದ ಆಸ್ಪತ್ರೆ ತಲುಪಲು ಮೂರು ಕಿಲೋ ಮೀಟರ್ ದೂರವಿತ್ತು. ಟ್ರಾಫಿಕ್ನಲ್ಲಿ(traffic) ಕಾದು ಸಮಯ ಹಾಳು ಮಾಡಿಕೊಳ್ಳಲು ನನಗೆ ಇಷ್ಟವಿರಲಿಲ್ಲ. ಅಲ್ಲದೇ ನನ್ನ ರೋಗಿಯೂ ಕೂಡ ಸರ್ಜರಿ ಆಗುವವರೆಗೆ ಯಾವುದೇ ಆಹಾರವನ್ನು ಸೇವಿಸದೇ ಉಪವಾಸ ಇರಬೇಕಿತ್ತು. ಹೀಗಾಗಿ ನಾನು ಅವರನ್ನು ಕಾಯಿಸುವುದಕ್ಕೆ ಮನಸ್ಸಾಗಲಿಲ್ಲ.
ನನ್ನ ಕಾರಿಗೆ ಚಾಲಕನಿದ್ದು, ಹೀಗಾಗಿ ಕಾರು (Car) ಹಾಗೂ ಚಾಲಕ (driver) ಇಬ್ಬರನ್ನು ರಸ್ತೆಯಲ್ಲಿಯೇ ಬಿಟ್ಟು ಮೂರು ಕಿ.ಮೀಟರ್ ಓಡುತ್ತಾ ಬಂದು ಆಸ್ಪತ್ರೆ ತಲುಪಿದೆ. ನಾನು ಯಾವಾಗಲೂ ಜಿಮ್ ಮಾಡುತ್ತೇನೆ. ಹೀಗಾಗಿ ನನಗೆ ಓಡುವುದಕ್ಕೆ ಅಷ್ಟೇನು ಕಷ್ಟವೆನಿಸಲಿಲ್ಲ ಎಂದು ಅವರು ಹೇಳಿದ್ದಾರೆ. ಇಂತಹ ಪರಿಸ್ಥಿತಿಯನ್ನು ತಾನು ಅನುಭವಿಸಿದ್ದು, ಇದೇ ಮೊದಲೇನಲ್ಲ. ಅಲ್ಲದೇ ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ನಾನು ನಡೆದುಕೊಂಡೆ ಸಾಗುತ್ತೇನೆ.
ನಮ್ಮ ಆಸ್ಪತ್ರೆಯಲ್ಲಿ ರೋಗಿಯನ್ನು ಚೆನ್ನಾಗಿ ನೋಡಿಕೊಳ್ಳಲು ಸಾಕಷ್ಟು ಸಿಬ್ಬಂದಿ ಮತ್ತು ಮೂಲ ಸೌಕರ್ಯಗಳಿರುವುದರಿಂದ (infrastructure) ನಾನು ಚಿಂತಿಸಲಿಲ್ಲ. ಆದರೆ ಕೆಲ ಸಣ್ಣ ಆಸ್ಪತ್ರೆಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಇಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಅಲ್ಲದೇ ರೋಗಿಗಳ ಕುಟುಂಬದವರು ಹಾಗೂ ರೋಗಿಗಳು ಕೂಡ ವೈದ್ಯರಿಗೆ ಕಾದು ಕಾದು ಸುಸ್ತಾಗುತ್ತಾರೆ. ಒಂದು ವೇಳೆ ಟ್ರಾಫಿಕ್ ಮಧ್ಯೆ ರೋಗಿ ಸಿಲುಕಿಕೊಂಡರೆ ಪರಿಸ್ಥಿತಿ ಏನಾಗಬಹುದು ಎಂದು ಅವರು ಪ್ರಶ್ನಿಸಿದ್ದಾರೆ. ಕನಿಷ್ಠ ಆಂಬುಲೆನ್ಸ್ (ambulances) ಪಾಸಾಗಲು ಕೂಡ ಅಲ್ಲಿ ದಾರಿ ಇಲ್ಲ ಎಂದು ಅವರು ಹೇಳಿದರು.
ಒಟ್ಟಿನಲ್ಲಿ ಈ ಬೆಂಗಳೂರಿನ ವೈದ್ಯರು ವೈದ್ಯೋ ನಾರಾಯಣ ಹರಿಃ ಎಂಬ ಮಾತನ್ನು ನಿಜಗೊಳಿಸಿದ್ದಾರೆ.