ಲಕ್ಕುಂಡಿಗೂ ಮೊದಲು ರೈತನಿಗೆ ಸಿಕ್ಕಿತ್ತು ನಿಧಿ, ಲಾಟರಿ ಗೆದ್ದ ಹಣದಲ್ಲಿ ಖರೀದಿಸಿದ ಭೂಮಿಯಲ್ಲಿತ್ತು ಸಂಪತ್ತು, ಕೇವಲ 27 ಸೆಂಟ್ ಜಾಗ ಖರೀದಿಸಿ ತರಕಾರಿ ಬೆಳೆಯಲು ಹೋದ ರೈತನಿಗೆ ಅಚ್ಚರಿ ಮೇಲೆ ಅಚ್ಚರಿ ಕಾದಿತ್ತು.

ತಿರುವನಂತಪುರಂ (ಫೆ.10) ಲಕ್ಕುಂಡಿಯಲ್ಲಿ ಅಗೆದಷ್ಟು ಬಗೆದಷ್ಟು ಇತಿಹಾಸಗಳು ಅನಾವರಣಗೊಳ್ಳುತ್ತಿದೆ. ರಾಜ್ಯದ ಗತವೈಭವ ಸಾರುವ ಪ್ರಮುಖ ಪುರಾತತ್ವ ದಾಖಲೆಗಳು ಪತ್ತೆಯಾಗುತ್ತಿದೆ. ಚಿನ್ನ, ಬೆಳ್ಳಿ ಸೇರಿದಂತೆ ಅಪಾರ ನಿಧಿ ಸಂಪತ್ತು ಲಕ್ಕುಂಡಿ ಪುಣ್ಯ ಭೂಮಿಯಲ್ಲಿ ಅನಾವರಣಗೊಳ್ಳುತ್ತಿದೆ. ರೈತನಿಗೆ ಚಿನ್ನಾಭರಣ ಸಿಕ್ಕ ಬೆನ್ನಲ್ಲೇ ಲುಕ್ಕುಂಡಿಯ ಭವ್ಯ ಪರಂಪರೆ ಜಗತ್ತಿಗೆ ಅನಾವರಣಗೊಂಡಿತ್ತು. ಆದರೆ ಇದಕ್ಕೂ ಮೊದಲು ರೈತನೊಬ್ಬನಿಗೆ ರಾಜ ಮಹಾರಾಜರ ಕಾಲದ ಅಪಾರ ನಿಧಿ ಸಂಪತ್ತು ಪತ್ತೆಯಾಗಿತ್ತು. ವಿಶೇಷ ಅಂದರೆ ಈ ರೈತನಿಗೆ 6ಕೋಟಿ ರೂಪಾಯಿ ಲಾಟಿ ಬಹುಮಾನ ಬಂದಿತ್ತು. ಈ ಹಣದಲ್ಲಿ ತರಕಾರಿ ಬೆಳೆಯಲು ಖರೀದಿಸಿದಿ ಭೂಮಿಯಲ್ಲಿ ಸಂಪತ್ತಿನ ನಿಧಿಯೇ ಪತ್ತೆಯಾದ ಘಟನೆ ಕೇರಳದಲ್ಲಿ ನಡೆದಿತ್ತು.

ದೇವಸ್ಥಾನದ ಪಕ್ಕದ ಜಮೀನು ಖರೀದಿಸಿದ ರೈತ

ಕಿಲಿಮನೂರಿನ ರೈತ ಬಿ ರತ್ನಾಕರಂ ಪಿಳ್ಳೆಗೆ ಅದೃಷ್ಠದ ಮೇಲೆ ಅದೃಷ್ಠ ಒಲಿದು ಬಂದಿತ್ತು. ರತ್ನಾಕರಂ ಪಿಳ್ಳೈಗೆ ಅಲ್ಲೊಂದು ಇಲ್ಲೊಂದು ಕೇರಳ ಲಾಟರಿ ಖರೀದಿಸುವ ಹವ್ಯಾಸವಿತ್ತು. ಅಚ್ಚರಿ ಎಂದರೆ ಈತ ಖರೀದಿಸಿದ ಲಾಟರಿಯಲ್ಲಿ ಬರೋಬ್ಬರಿ 6 ಕೋಟಿ ರೂಪಾಯಿ ಬಹುಮಾನ ಬಂದಿತ್ತು. ರತ್ನಾಕರಂ ಪಿಳ್ಳೆ ತನಗೆ ಬಂದಿರುವ ಲಾಟರಿ ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದ. ಈ ಹಣದಲ್ಲಿ ಒಂದು ಭಾಗದಲ್ಲಿ ಜಮೀನು ಖರೀದಿಸಲು ಮುಂದಾಗಿದ್ದರು. ಕೊನೆಗೆ ತರಕಾರಿ ಸೇರಿದಂತೆ ಇತರ ಹಣ್ಣು ಬೆಳೆಯಲು 27 ಸೆಂಟ್ ಜಾಗ ಖರೀದಿಸಿದ್ದರು. ಇದು ತಿರುವಂತಪುರಂ ಶ್ರೀಕೃಷ್ಣ ದೇವಸ್ಥಾನದ ಪಕ್ಕದಲ್ಲಿದ್ದ ಜಾಗ.

ಜಮೀನಿನಲ್ಲಿ ಪತ್ತೆಯಾಯಿತು ನಿಧಿ

ಜಮೀನು ಖರೀದಿಸಿ ಕೃಷಿ ಮಾಡಲು ರತ್ನಾಕರಂ ಪಿಳ್ಳೆ ಮುಂದಾಗಿದ್ದ. ಇದರಂತೆ ನೆಲ ಅಗತೆ ಕೆಲಸ ಆರಂಭಗೊಂಡಿತ್ತು. ಈ ವೇಳೆ ಜಮೀನಿನಲ್ಲಿ ನಿಧಿಯೊಂದು ಪತ್ತೆಯಾಗಿದೆ. ತಿರುವಾಂಕೂರು ರಾಜರ ಆಳ್ವಿಕೆಯ ತಾಮ್ರದ ನಾಣ್ಯಗಳ ನಿಧಿ ಪತ್ತೆಯಾಗಿತ್ತು. ಬರೋಬ್ಬರಿ 2,595 ನಾಣ್ಯಗಳು ಇದರಲ್ಲಿತ್ತು. ಮಡಿಕೆಯಲ್ಲಿದ್ದ ಈ ನಾಣ್ಯಗಳು ತಿರುವಾಂಕೂರು ರಾಜರ ಆಳ್ವಿಕೆಯಲ್ಲಿ ಚಲಾವಣೆಯಲ್ಲಿದ್ದ ತಾಮ್ರದ, ಚಿನ್ನದ, ಬೆಳ್ಳಿಯ ನಾಣ್ಯಗಳಾಗಿತ್ತು. 1885ರಿಂದ 1924ರ ವರೆಗೆ ಚಲಾವಣೆಲ್ಲಿದ್ದ ನಾಣ್ಯಗಳು. ಬರೋಬ್ಬರಿ 20 ಕೆಜಿ ತೂಕವಿತ್ತು.

66 ವರ್ಷದ ರೈತ್ನಾಕರಂ ಪಿಳ್ಳೆ ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ಪುರಾತತ್ವ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದ್ದಾರೆ. ಉತ್ಖನನದಲ್ಲಿ ಅಪರೂಪದ ವಸ್ತುಗಳು ಪತ್ತೆಯಾಗಿತ್ತು. ರಾಜರ ಕಾಲದ ಹಲವು ವಸ್ತುಗಳು ಇಲ್ಲಿ ಪತ್ತೆಯಾಗಿತ್ತು. ಶ್ರೀಕೃಷ್ಣ ದೇವಸ್ಥಾನ ಕಟ್ಟಿಸಿದ ತಿರುವಾಂಕೂರು ರಾಜರು ಪಕ್ಕದಲ್ಲೇ ಮನೆಯೊಂದನ್ನು ನಿರ್ಮಿಸಿದ್ರು. ಇಲ್ಲಿ ದೇವಸ್ಥಾನಕ್ಕೆ ಬೇಕಾದ ಸಂಪತ್ತು ಇಟ್ಟಿದ್ದರು. ದೇವಸ್ಥಾನ ಖರ್ಚು ವೆಚ್ಚ ನೋಡಿಕೊಳ್ಳಲು ಈ ಸಂಪತ್ತು ಬಳಕೆ ಮಾಡಲಾಗುತ್ತಿತ್ತು. ಆದರೆ ದಾಳಿಗಳ ಕಾರಣದಿಂದ ಕೆಲ ಸಂಪತ್ತುಗಳನ್ನು ಹೂತಿಡಲಾಗಿತ್ತು. ಈ ಸಂಪತ್ತುಗಳು ಪತ್ತೆಯಾಗಿವೆ ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ಹೇಳಿದ್ದರು.