2017ಕ್ಕೂ ಮುನ್ನ ಉ.ಪ್ರ. ಆಳುತ್ತಿದ್ದ ಪಾತಕಿಗಳು ಈಗ ಜೈಲು ಸೇರಿದ್ದಾರೆ: ಮೋದಿ!
* 2017ಕ್ಕೂ ಮುನ್ನ ಉತ್ತರ ಪ್ರದೇಶವನ್ನು ಭೂಗತ ಪಾತಕಿಗಳು ಆಳುತ್ತಿದ್ದರು
* ಈಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಪರಿಸ್ಥಿತಿ ಬದಲಾಗಿದೆ
* 2017ಕ್ಕೂ ಮುನ್ನ ಉ.ಪ್ರ. ಆಳುತ್ತಿದ್ದ ಪಾತಕಿಗಳು ಈಗ ಜೈಲು ಸೇರಿದ್ದಾರೆ
ಅಲಿಗಢ(ಸೆ.15): 2017ಕ್ಕೂ ಮುನ್ನ ಉತ್ತರ ಪ್ರದೇಶವನ್ನು ಭೂಗತ ಪಾತಕಿಗಳು ಆಳುತ್ತಿದ್ದರು. ಆದರೆ, ಈಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಪರಿಸ್ಥಿತಿ ಬದಲಾಗಿದೆ. ದುಷ್ಕರ್ಮಿಗಳನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಲಿಗಢದಲ್ಲಿ ರಾಜ ಮಹೇಂದ್ರ ಪ್ರತಾಪ್ ಸಿಂಗ್ ರಾಜ್ಯ ವಿಶ್ವವಿದ್ಯಾಲಯಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಮೋದಿ, ಈ ಮುನ್ನ ಬಡವರಿಗಾಗಿ ರೂಪಿಸಿದ ಸಮಾಜ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಲು ತಡೆಯೊಡ್ಡಲಾಗಿತ್ತು. ಆದರೆ, ಈಗ ಅಂತಹ ಯಾವುದೇ ರೀತಿಯ ಅಡೆತಡೆಗಳಿಲ್ಲ. ಯೋಜನೆಯ ಪ್ರಯೋಜನಗಳು ಅಗತ್ಯ ಇದ್ದವರಿಗೆ ತಲುಪುತ್ತಿವೆ ಎಂದು ಹೇಳಿದ್ದಾರೆ.
ಇದೇ ವೇಳೆ ಉತ್ತರ ಪ್ರದೇಶ ಡಿಫೆನ್ಸ್ ಇಂಡಸ್ಟ್ರಿಯಲ್ ಕಾರಿಡಾರ್ ವತಿಯಿಂದ ಆಯೋಜಿಸಿದ್ದ ವಸ್ತು ಪ್ರದರ್ಶನಕ್ಕೂ ಮೋದಿ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಮುಂಚೆಯಲ್ಲಾ ಶಸ್ತ್ರಾಸ್ತ್ರಗಳು, ಯದ್ಧ ವಿಮಾನಗಳು, ಡ್ರೋನ್ಗಳು ಮತ್ತಿತರ ರಕ್ಷಣಾ ಸಲಕರಣೆಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ಅವುಗಳನ್ನು ದೇಶದಲ್ಲೇ ಉತ್ಪಾದಿಸುತ್ತಿರುವುದನ್ನು ಭಾರತ ಮಾತ್ರವಲ್ಲ ಇಡೀ ವಿಶ್ವವೇ ನೋಡುತ್ತಿದೆ ಎಂದು ಹೇಳಿದರು.