ಇನ್ನು ನಿತ್ಯ ಮಧ್ಯಾಹ್ನ 1 ಗಂಟೆ ರಾಮ ಮಂದಿರ ಬಂದ್‌. ಮಧ್ಯಾಹ್ನ 12.30 ರಿಂದ 1.30ರವೆರೆ ರಾಮಲಲ್ಲಾ ದರ್ಶನವಿಲ್ಲ.  ‘ರಾಮ ಮಗು, ಅವನಿಗೆ ವಿಶ್ರಾಂತಿ ಬೇಕು, ಒತ್ತಡ ಹೇರಬಾರದು ಎಂದ ಅರ್ಚಕರು.

ಅಯೋಧ್ಯೆ (ಫೆ.17): ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ನೂತನ ರಾಮ ಮಂದಿರವನ್ನು ಇನ್ನು ಮುಂದೆ ಪ್ರತಿದಿನ ಮಧ್ಯಾಹ್ನದ ವೇಳೆ 1 ಗಂಟೆಗಳ ಕಾಲ ಮುಚ್ಚಲಾಗುತ್ತದೆ ಎಂದು ಮಂದಿರದ ಮುಖ್ಯ ಅರ್ಚಕರು ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಶುಕ್ರವಾರ ಮಾತನಾಡಿದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ‘ರಾಮಲಲ್ಲಾ 5 ವರ್ಷದ ಮಗು. ಅವನು ದೀರ್ಘ ಕಾಲ ಎಚ್ಚರವಾಗಿರಲು ಒತ್ತಡವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಬಾಲಕ ದೇವರಿಗೆ ಸ್ವಲ್ಪ ವಿಶ್ರಾಂತಿ ನೀಡಲು, ದೇವಾಲಯದ ಬಾಗಿಲುಗಳನ್ನು ಮಧ್ಯಾಹ್ನ 12:30 ರಿಂದ 1:30 ರವರೆಗೆ ಮುಚ್ಚಲು ಟ್ರಸ್ಟ್ ನಿರ್ಧರಿಸಿದೆ. ಆದ್ದರಿಂದ ದೇವರು ವಿಶ್ರಾಂತಿ ಪಡೆಯುತ್ತಾನೆ’ ಎಂದಿದ್ದಾರೆ.

ಸೋನಿಯಾ ಗಾಂಧಿಗೆ ಭಾರತದಲ್ಲಿ ಸ್ವಂತ ಮನೆಯೇ ಇಲ್ಲ, ಕಾರು ಇಲ್ಲ, ಅಫಿಡವಿಟ್‌ನಲ್ಲಿ ಆಸ್ತಿ ಬಹಿರಂಗ

ಮಂದಿರಕ್ಕೆ ನಿತ್ಯ ಸಾವಿರಾರು ಭಕ್ತರ ದಂಡು ಹರಿದುಬರುತ್ತಿರುವ ಕಾರಣ, ಈವರೆಗೆ ಮಧ್ಯಾಹ್ನದ ವಿರಾಮವೂ ಇಲ್ಲದೆ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.

ಮಂದಿರವನ್ನು 6 ಗಂಟೆಗೆ ತೆರೆದರೂ ಅದರ ಮುನ್ನ, ಮುಂಜಾನೆ 4 ರಿಂದ 6ರವರೆಗೆ 2 ಗಂಟೆಗಳ ಕಾಲ ವಿಧಿ ವಿಧಾನಗಳನ್ನು ಆಚರಿಸಲಾಗುತ್ತದೆ ಎಂದು ಅರ್ಚಕರು ತಿಳಿಸಿದ್ದಾರೆ.

ಒಂದು ಬದಿಯಲ್ಲಿ ರಾಮಲಲ್ಲಾ, ಮತ್ತೊಂದೆಡೆ ಮಂದಿರ
ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿರುವ ಸ್ಮರಣಾರ್ಥ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಗುರುವಾರ ಸ್ಮರಣಿಕೆಯ ನಾಣ್ಯವನ್ನು ಬಿಡುಗಡೆಗೊಳಿಸಿದರು.

ಈ ನಾಣ್ಯದಲ್ಲಿ ಒಂದು ಬದಿಯಲ್ಲಿ ರಾಮಲಲ್ಲಾ ವಿಗ್ರಹ ಹಾಗೂ ಇನ್ನೊಂದು ಬದಿಯಲ್ಲಿ ಶ್ರೀರಾಮ ಮಂದಿರವನ್ನು ಮುದ್ರಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಸೆಕ್ಯುರಿಟಿ ಪ್ರಿಂಟಿಂಗ್‌ ಮತ್ತು ಮಿಂಟಿಂಗ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ (ಎಸ್‌ಪಿಎಮ್‌ಸಿಐಎಲ್‌)ದ 19ನೇ ಸಂಸ್ಥಾಪನಾ ದಿನದಂದು ನಿರ್ಮಲಾ ಒಟ್ಟು 3 ನಾಣ್ಯಗಳನ್ನು ಬಿಡುಗಡೆಗೊಳಿಸಿದರು.

ರೈತರು- ಕೇಂದ್ರದ ಮಾತುಕತೆ ಅಪೂರ್ಣ, ನಾಳೆ 4ನೇ ಸುತ್ತಿನ ಚರ್ಚೆ, ಪ್ರತಿಭಟನೆ ವೇಳೆ ಅಶ್ರುವಾಯು ಸಿಡಿಸಿದ ಪೊಲೀಸ್‌

ಈ ಪೈಕಿ ಒಂದು ರಾಮ ಮಂದಿರ ಸ್ಮರಣಾರ್ಥವಾಗಿದ್ದರೆ ಇನ್ನೊಂದು ಭಗವಾನ್ ಬುದ್ಧ ಹಾಗೂ ಸ್ತೂಪಗಳ ಚಿತ್ರಗಳನ್ನು ಹೊಂದಿದೆ. ಮೂರನೇಯ ನಾಣ್ಯದಲ್ಲಿ ಭಾರತದ ಅಳಿವಿನಂಚಿನಲ್ಲಿರುವ ಘೇಂಡಾಮೃಗ (ಒನ್‌ ಹಾರ್ನ್ಡ್‌ ರೈನೋಸರಸ್‌) ಪ್ರಾಣಿಯ ಚಿತ್ರವನ್ನು ಹೊಂದಿದೆ.