* ಆ.15ರ ಮುನ್ನಾ ದಿನ ಜಮ್ಮುವಿನಲ್ಲಿ ಭಾರೀ ಸ್ಛೋಟಕ್ಕೂ ಸಂಚು* ಅಯೋಧ್ಯೆ ಮೇಲೆ ದಾಳಿ ಸಂಚು: 4 ಜೈಷ್‌ ಉಗ್ರರ ಸೆರೆ* ಪಾಣಿಪತ್‌ನ ತೈಲ ಘಟಕದ ಮೇಲೂ ದಾಳಿಗೆ ಹೊಂಚು ಹಾಕಿದ್ದರು

ಜಮ್ಮು(ಆ.15): ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ನಿರ್ಮಾಣ ಆಗುತ್ತಿರವ ಮಂದಿರದ ಮೇಲಿನ ದಾಳಿಗೆ ಸಂಚು ರೂಪಿಸಿದ್ದ ಪಾಕ್‌ ಮೂಲದ ಜೈಷ್‌- ಎ- ಮೊಹಮ್ಮದ್‌ ಉಗ್ರಗಾಮಿ ಸಂಘಟನೆಗೆ ಸೇರಿದ ನಾಲ್ವರು ಭಯೋತ್ಪಾದಕರನ್ನು ಬಂಧಿಸುವಲ್ಲಿ ಜಮ್ಮು- ಕಾಶ್ಮೀರ ಪೊಲೀಸರು ಯಶಸ್ವಿ ಆಗಿದ್ದಾರೆ.

ಅಲ್ಲದೇ, ಈ ಉಗ್ರರು ಸ್ವಾತಂತ್ರ್ಯೋತ್ಸವದ ಮುನ್ನಾ ದಿನ ವಾಹನದಲ್ಲಿ ಎಲ್‌ಇಡಿ ಬಾಂಬ್‌ ಅನ್ನು ಇಟ್ಟು ಸ್ಛೋಟ ನಡೆಸುವ ಮೂಲಕ ಜಮ್ಮುವಿನಲ್ಲಿ ಹಿಂಸಾಚಾರವನ್ನು ಪ್ರೇರೇಪಿಸಲು ಸಂಚು ರೂಪಿಸಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.

ಉಗ್ರರ ಮುಖ್ಯಗುರಿ ಅಯೋಧ್ಯೆಯ ರಾಮಮಂದಿರ ಹಾಗೂ ಹರ್ಯಾಣದ ಪಾಣಿಪತ್‌ನಲ್ಲಿರುವ ತೈಲ ಸಂಸ್ಕರಣಾ ಘಟಕವನ್ನು ಸ್ಛೋಟಿಸುವುದಾಗಿತ್ತು. ಸೆರೆ ಸಿಕ್ಕಿರುವ ನಾಲ್ವರು ಜೆಇಎಂ ಉಗ್ರರು ಪಾಕಿಸ್ತಾನ ಜೈಷ್‌ ಕಮಾಂಡರ್‌ಗಳ ಜೊತೆ ಸಂಪರ್ಕವನ್ನು ಹೊಂದಿದ್ದರು. ನಾಲ್ವರ ಪೈಕಿ ಒಬ್ಬನಾದ ಉತ್ತರ ಪ್ರದೇಶ ಮೂಲದ ಇಜಹಾರ್‌ ಖಾನ್‌ ಎಂಬಾತನಿಗೆ ಅಯೋಧ್ಯೆ ರಾಮಜನ್ಮಭೂಮಿ ಮತ್ತುಉ ಪಾಣಿಪತ್‌ ತೈಲ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುವಂತೆ ಪಾಕಿಸ್ತಾನದ ಕಮಾಂಡರ್‌ ಸೂಚನೆಯನ್ನು ನೀಡಿದ್ದ. ಆದರೆ ದಾಳಿಗೆ ಯೋಜಿಸುವುದಕ್ಕೆ ಮುನ್ನವೇ ಉಗ್ರರನ್ನು ಬಂಧಿಸುವಲ್ಲಿ ಜಮ್ಮು- ಕಾಶ್ಮೀರ ಪೊಲೀಸರು ಯಶಸ್ವಿ ಆಗಿದ್ದಾರೆ.

ಕಳೆದ 20-20 ದಿನಗಳಿಂದ ಜೈಷ್‌ ಉಗ್ರರ ಘಟಕದ ಮೇಲೆ ನಿರಂತರ ನಿಗಾ ಇಡಲಾಗಿತ್ತು. ಪಾಕಿಸ್ತಾನದಲ್ಲಿರುವ ಜೈಷ್‌ ಕಮಾಂಡರ್‌ ಷಾಹಿದ್‌ ಎಂಬಾತ ಜಮ್ಮುವಿನಲ್ಲಿ ಜೈಷ್‌-ಎ-ಮೊಹಮ್ಮದ್‌ ಸಂಘಟನೆಯ ಘಟಕವನ್ನು ನಿರ್ವಹಣೆ ಮಾಡುತ್ತಿದ್ದ. ಈ ಘಟಕದಲ್ಲಿ ಹೆಚ್ಚಿನ ಸಂಖ್ಯೆಯ ಉಗ್ರರು ಇರಬಹುದಾದ ಶಂಕೆ ಇದೆ. ಇದುವರೆಗೆ ನಾವು ನಾಲ್ವರನ್ನು ಬಂಧಿಸಿದ್ದೇವೆ. ಬಂಧಿತರ ಪೈಕಿ ಒಬ್ಬ ಉತ್ತರ ಪ್ರದೇಶದವನಾಗಿದ್ದು, ಮೂವರು ಜಮ್ಮುವಿನವರಾಗಿದ್ದಾರೆ ಎಂದು ಜಮ್ಮು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಮುಕೇಶ್‌ ಸಿಂಗ್‌ ತಿಳಿಸಿದ್ದಾರೆ.

ಇದೇ ವೇಳೆ ಬಂಧಿತ ಉಗ್ರರು ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನ ಜಮ್ಮುವಿನಲ್ಲಿ ಭಾರೀ ಪ್ರಮಾಣದ ಸ್ಛೋಟ ನಡೆಸುವುದುಕ್ಕೂ ಸಂಚು ರೂಪಿಸಿದ್ದರು. ಡ್ರೋನ್‌ಗಳು ಬಿಟ್ಟು ಹೋಗುವ ಶಸ್ತಾ್ರಸ್ತ್ರಗಳನ್ನು ಸಂಗ್ರಹಿಸಿ ಜೈಷ್‌ ಎ ಮೊಹಮ್ಮದ್‌ ಸಂಘಟನೆಯ ಸಕ್ರಿಯ ಉಗ್ರರಿಗೆ ಪೂರೈಸಲು ಮತ್ತು ಆ.15ಕ್ಕೂ ಮುನ್ನ ವಾಹನದಲ್ಲಿ ಎಲ್‌ಇಡಿ ಸ್ಛೋಟಕಗಳನ್ನು ಇರಿಸಿ ಜಮ್ಮುವಿನಲ್ಲಿ ಬಾಂಬ್‌ ಸ್ಛೋಟ ನಡೆಸಲು ಉಗ್ರರು ಸಂಚು ರೂಪಿಸಿದ್ದರು. ಶಸ್ತಾ್ರಸ್ತ್ರಗಳನ್ನು ಸಾಗಿಸಲು ಉಗ್ರರು ಬಳಸಿದ್ದ ಟ್ರಕ್‌ ಹಾಗೂ ಬಂಧಿತ ಉಗ್ರರ ಬಳಿ ಇದ್ದ ಶಸ್ತಾ್ರಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಕೇಶ್‌ ಸಿಂಗ್‌ ತಿಳಿಸಿದ್ದಾರೆ.