ಮುಖ್ಯಮಂತ್ರಿಯಾಗಿ ತಾರತಮ್ಯ ಮಾಡಲ್ಲ, ಹಿಂದೂ ಆಗಿ ಮಸೀದಿ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ: ಆದಿತ್ಯನಾಥ್!
ರಾಮ ಮಂದಿರ ಭೂಮಿ ಪೂಜೆ ಕಾರ್ಯ ಸುಸೂತ್ರವಾಗಿ ನೆರವೇರಿದೆ. ಇದೀಗ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಮಸೀದಿ ಕಾರ್ಯಕ್ರಮದಲ್ಲಿ ಸಿಎಂ ಭಾಗವಹಿಸುತ್ತೀರಾ ಅನ್ನೋ ಪ್ರಶ್ನೆಗೆ ಖಡಕ್ ಉತ್ತರ ನೀಡಿದ್ದಾರೆ.
ಉತ್ತರ ಪ್ರದೇಶ(ಆ.07): ಅಯೋಧ್ಯೆಯಲ್ಲಿ ಸರಿಸುಮಾರು 5 ಶತಮಾನಗಳ ವಿವಾದ ಬಗೆಹರಿದು ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯ ನೆರವೇರಿದೆ. ಸಂಪೂರ್ಣ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಂಡಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದೀಗ ಮಂದಿರ ನಿರ್ಮಾಣ, ಅಯೋಧ್ಯೆಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಮಂದಿರ ಭೂಮಿ ಪೂಜೆ ಕಾರ್ಯಕ್ರಮದ ಬಳಿಕ ಇದೀಗ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಮಾತು ಕೇಳಿ ಬರುತ್ತಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ಕೇಳಲಾದ ಪ್ರಶ್ನೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಪಷ್ಟ ಉತ್ತರ ನೀಡಿದ್ದಾರೆ.
ರಾಮ ಮಂದಿರ ಕಟ್ಟಲು ಅವಿರತ ಶ್ರಮಿಸಿದ ಕಲಿಯುಗದ ರಾಮಸೈನ್ಯವಿದು..!.
ಮಸೀದಿ ನಿರ್ಮಾಣ ಕಾರ್ಯಕ್ರಮದಲ್ಲಿ ನೀವು ಭಾಗವಹಿಸುತ್ತೀರಾ ಎಂದು ಮಾಧ್ಯಮ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿತ್ತು. ಇದಕ್ಕೆ ಉತ್ತರಿಸಿದ ಯೋಗಿ, ನನ್ನನ್ನುು ಮಸೀದಿ ನಿರ್ಮಾಣ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಾರೆಯೇ ಅನ್ನೋದು ತಿಳಿದಿಲ್ಲ. ನನ್ನ ನಿಲುವಿನಲ್ಲಿ ನನಗೆ ಗೊಂದಲವೂ ಇಲ್ಲ. ಯಾವುದೇ ಧರ್ಮ, ಜಾತಿ, ಪಂಥವನ್ನು ತಾರತಮ್ಯ ಮಾಡಿಲ್ಲ, ಮಾಡುವುದು ಇಲ್ಲ. ಮುಖ್ಯಮಂತ್ರಿಯಾಗಿ ಎಲ್ಲರನ್ನು ಸಮಾನತೆಯಿಂದ ನೋಡಿದ್ದೇನೆ. ಆದರೆ ನಾನೋರ್ವ ಯೋಗಿಯಾಗಿ, ಹಿಂದೂವಾಗಿ ಮಸೀದಿ ನಿರ್ಮಾಣ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ ಎಂದಿದ್ದಾರೆ.
ಮೋದಿಗೆ ಕೊಟ್ಟ ಕೋದಂಡರಾಮನ ಪ್ರತಿಮೆ ಕರ್ನಾಟಕದಲ್ಲಿ ಕೆತ್ತನೆಯಾಗಿದ್ದು..!
ಇದೇ ವೇಳೆ ಯೋಗಿ ಆತಿಥ್ಯನಾಥ್ ರಾಮ ಜನ್ಮಭೂಮಿ ದಾವೆದಾರ ಇಕ್ಬಾಲ್ ಅನ್ಸಾರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಎಲ್ಲರೂ ಅನ್ಸಾರಿಯಿಂದ ಪ್ರೇರಿತರಾಗಬೇಕು. ಸುಪ್ರೀಂ ಕೋರ್ಟ್ ಆದೇಶವನ್ನು ಇಕ್ಬಾಲ್ ಅನ್ಸಾರಿ ಸ್ವೀಕರಿಸಿದ್ದಾರೆ. ದಶಕಗಳಿಂದ ಬಾಬ್ರಿ ಮಸೀದಿಗಾಗಿ ಅಯೋಧ್ಯೆಯಲ್ಲಿ ಕಾನೂನು ಹೋರಾಟ ಮಾಡುತ್ತಾ ಬಂದಿದ್ದಾರೆ. ಆದರೆ ಓರ್ವ ಮುಸ್ಲಿಂ ಆಗಿ ಇಕ್ಬಾಲ್ ಅನ್ಸಾರಿಗೆ ಯಾವತ್ತೂ ಅಭದ್ರತೆ ಕಾಡಿಲ್ಲ. ಇದೇ ಪರಿಸ್ಥಿತಿ ಪಾಕಿಸ್ತಾನ, ಆಫ್ಘಾನಿಸ್ತಾನದಲ್ಲಿ ಇದ್ದರೆ ಆಲೋಚಿಸಿ. ಅಲ್ಪಸಂಖ್ಯಾತ ಹಿಂದೂ ಆ ದೇಶದಲ್ಲಿ ಸುರಕ್ಷಿತವಾಗಿರುತ್ತಿದ್ದೇನೆ ಎಂದು ಪ್ರಶ್ನಿಸಿದ್ದಾರೆ.
ರಾಮಜನ್ಮ ಭೂಮಿ ವಿವಾದವನ್ನು ಶತಮಾನಗಳ ಹಿಂದೆಯೇ ಮುಗಿಸಬಹುದಿತ್ತು. ಆದರೆ ಅಂದಿನ ಕಾಂಗ್ರೆಸ್ ಸರ್ಕಾರ ರಾಜಕಾರಣಕ್ಕೆ ಬಳಸಿಕೊಂಡಿತ್ತು. ಇದೀಗ ಕ್ರೆಡಿಟ್ ತೆಗೆದುಕೊಳ್ಳಲು ಬಯಸುತ್ತಿದೆ. ಇದೀಗ ಎಲ್ಲವೂ ಸುಖಾಂತ್ಯಗೊಂಡಿದೆ ಎಂದು ಯೋಗಿ ಹೇಳಿದ್ದಾರೆ.