ಗರ್ಭಿಣಿಯನ್ನು ಹೊತ್ತು ಆಸ್ಪತ್ರೆಗೆ ನಡೆದ ಸೈನಿಕರು: ಪ್ರಧಾನಿ ಎಂದರು ಇವರೇ ನಮ್ಮ ರಕ್ಷಕರು!
ಮೈ ಕೊರೆಯುವ ಚಳಿಯಲ್ಲಿ ಸೈನಿಕರ ಸಾಹಸ, ಬದ್ಧತೆ| ಗರ್ಭಿಣಿಯನ್ನು 4 ಗಂಟೆ ಹೊತ್ತುಕೊಂಡು ಸಾಗಿ ಆಸ್ಪತ್ರೆ ಸೇರಿಸಿದ ಸೈನಿಕರು| ಸೈನಿಕರ ಸಮಯಪ್ರಜ್ಞೆಯಿಂದ ಆರೋಗ್ಯದಿಂದಿದ್ದಾರೆ ತಾಯಿ, ಮಗು
ಶ್ರೀನಗರ[ಜ.15]: ಇಂಡೋ ಪಾಕ್ ಗಡಿಯಲ್ಲಿ ಉಂಟಾಗಿರುವ ಹಿಮಪಾತದಿಂದ ಅನೇಕ ಮಂದಿ ಸಾವನ್ನಪ್ಪಿದ್ದಾರೆ. ಭಾರತೀಯರೇ ಸುಮಾರು 60 ಮಂದಿ ಸಾವನ್ನಪ್ಪಿದ್ದು, ಅನೇಕ ಮಂದಿಗೆ ಗಾಯಗಳಾಗಿವೆ ಮತ್ತೆ ಕೆಲವರು ನಾಪತ್ತೆಯಾಗಿದ್ದಾರೆ. ಮತ್ತೊಂದೆಡೆ ಭಾರೀ ಗಾತ್ರದ ಹಿಮವೊಂದು ಹೆದ್ದಾರಿಗೆ ಹರಿದು ಬಂದಿದೆ. ಹೀಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹೀಗಿರುವಾಗ ಕಾಶ್ಮೀರದಲ್ಲಿ ಕೊರೆಯುವ ಚಳಿ ನಡುವೆಯೇ ಮಹಿಳೆಯೊಬ್ಬಳು ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ, ಇದರ ವಿಡಿಯೋ ಭಾರೀ ವೈರಲ್ ಆಗಿದೆ. ಆದರೆ ತಾಯಿ ಮಗು ಆರೋಗ್ಯವಾಗಿದ್ದಾರೆಂದರೆ ನಮ್ಮ ಸೇನೆಯ ಸೈನಿಕರಿಗೆ ಸಲಾಂ ಎನ್ನಲೇಬೇಕು.
ಹೌದು ಭಾರೀ ಹಿಮಪಾತದಿಂದ ಕಾಶ್ಮೀರದ ಬಹುತೇಕ ರಸ್ತೆಗಳು ಬಂದ್ ಆಗಿವೆ. ಹೀಗಿರುವಾಗ ಶಮೀಮಾ ಎಂಬ ಮಹಿಳೆ ಕೊರೆಯುವ ಚಳಿ ನಡುವೆಯೇ ಪುಟ್ಟ ಕಂದನಿಗೆ ಜನ್ಮ ನೀಡಿದ್ದಾಳೆ. ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸುವುದು ಅಸಾಧ್ಯವೆಂದೇ ಹೇಳಲಾಗಿತ್ತು. ಆದರೆ ಈ ಸಂದರ್ಭದಲ್ಲಿ ಭಾರತೀಯ ಸೇನೆಯ 100 ಸೈನಿಕರು ಮತ್ತು 30 ಸ್ಥಳೀಯರು ಸೇರಿ ಸುಮಾರು 4 ಗಂಟೆ ಮಹಿಳೆಯನ್ನು ಹೊತ್ತುಕೊಂಡು ಸಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ.
ಹೆದ್ದಾರಿಗೆ ಜಾರಿಬಂದ ಹಿಮ, ದಿಕ್ಕಾಪಾಲಾಗಿ ಓಡಿದ ಪ್ರವಾಸಿಗರು!
ಸೈನಿಕರ ಹಾಗೂ ಸ್ಥಳೀಯರ ಈ ಪರಿಶ್ರಮದಿಂದಾಗಿ ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿ ಕೂಡಾ ಸೈನಿಕರ ಶೌರ್ಯ, ಸಾಹಸ, ಬದ್ಧತೆಹಾಗೂ ಸಮಯಪ್ರಜ್ಞೆಗೆ ತಲೆಬಾಗಿದ್ದಾರೆ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಪಿಎಂ ಮೋದಿ ತಾಯಿ ಹಾಗೂ ಮಗುವಿಗೆ ದೇವರು ಆರೋಗ್ಯ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.