20 ಲಕ್ಷ ರೂ ಆಸೆಗೆ ಶೋಫಿಯಾನ್ ಎನ್ಕೌಂಟರ್; ಸೇನಾ ಕ್ಯಾಪ್ಟನ್ ವಿರುದ್ಧ ಚಾರ್ಜ್ಶೀಟ್!
20 ಲಕ್ಷ ರೂಪಾಯಿ ಬಹುಮಾನದ ಆಸೆಗೆ ಶೋಫಿಯಾನ್ ಎನ್ಕೌಂಟರ್ ನಡೆಸಲಾಗಿದೆ. ಈ ಕುರಿತು 1,400 ಪುಟುದ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಚಾರ್ಜ್ಶೀಟ್ನಲ್ಲಿರುವ ಮಾಹಿತಿ ಇಲ್ಲಿದೆ.
ನವದೆಹಲಿ(ಜ.11): ಜಮ್ಮ ಮತ್ತು ಕಾಶ್ಮೀರಯ ಶೋಫಿಯಾನ್ನಲ್ಲಿ ನಡೆದ ಎನ್ಕೌಂಟರ್ ಭಾರಿ ವಿವಾದ ಸೃಷ್ಟಿಸಿತ್ತು. 2020ರ ಜುಲೈ ತಿಂಗಳಲ್ಲಿ ಶೋಫಿಯಾನ್ ಅಂಚೀಪುರದಲ್ಲಿ ಮೂವರು ಯುವಕರನ್ನು ಉಗ್ರರು ಎಂದು ಎನ್ಕೌಂಟರ್ ಮಾಡಲಾಗಿತ್ತು. ಆದರೆ ಈ ಎನ್ಕೌಂಟರ್ ನಕಲಿ ಎಂದು ವಿವಾದ ಆರಂಭಗೊಂಡಿತ್ತು. ಇದೀಗ ಜಮ್ಮ ಮತ್ತು ಕಾಶ್ಮೀರ ಪೊಲೀಸ್ ವಿಶೇಷ ತನಿಖಾ ತಂಡ ಚಾರ್ಜ್ ಶೀಟ್ ಸಲ್ಲಿಸಿದೆ.
ಸತತ 18 ಗಂಟೆಗಳ ಗನ್ಫೈಟ್; ಮೂವರ ಉಗ್ರರ ಹೆಡೆಮುರಿ ಕಟ್ಟಿದ ಭಾರತೀಯ ಸೇನೆ!.
ತನಿಖಾ ತಂಡ 1,400 ಪುಟಗಳ ಚಾರ್ಜ್ ಶೀಟನ್ನು ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ಗೆ ಸಲ್ಲಿಸಿದೆ. ಈ ಚಾರ್ಜ್ಶೀಟ್ನಲ್ಲಿ ಶೋಫಿಯಾನ್ ಎನ್ಕೌಂಟರ್ನಲ್ಲಿ ಸೇನಾ ಕ್ಯಾಪ್ಟನ್ ಭೂಪಿಂದರ್ ಸಿಂಗ್ ಅಲಿಯಾಸ್ ಬಶೀರ್ ಖಾನ್ 20 ಲಕ್ಷ ರೂಪಾಯಿ ಬಹುಮಾನದ ಆಸೆಗೆ ಈ ಎನ್ಕೌಂಟರ್ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇಮ್ತಯಾಝ್ ಅಹಮ್ಮದ್, ಅಬ್ರಾರ್ ಅಹಮ್ಮದ್ ಹಾಗೂ ಮೊಹಮ್ಮದ್ ಇಬ್ರಾರ್ ಯುವಕರಿಗೆ ಉಗ್ರರ ಹಣೆಪಟ್ಟಿ ಕಟ್ಟಿ ಎನ್ಕೌಂಟರ್ ಮಾಡಲಾಗಿದೆ. 75 ಸಾಕ್ಷಿಗಳ ಹೇಳಿಕೆಗಳನ್ನು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಭೂಪಿಂದರ್ ಸಿಂಗ್ ಅವರ ದೂರವಾಣಿ ಕರೆ ಹಾಗೂ ಎನ್ಕೌಂಟರ್ ಮಾತುಕತೆಗಳನ್ನು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ.
ಕ್ಯಾಪ್ಟನ್ ಭೂಪಿಂದರ್ ಸಿಂಗ್ ಎನ್ಕೌಂಟರ್ ತಂಡದಲ್ಲಿದ್ದ ಸುಬೇದಾರ್ ಗುರುರಾಮ್, ಲ್ಯಾನ್ಸ್ ನಾಯಕ್ ರವಿ ಕುಮಾರ್, ಸಿಪಾಯಿ ಅಶ್ವಿನ್ ಕುಮಾರ್ ಹಾಗೂ ಯೋಗೇಶ್ ಹೇಳಿಕೆಯನ್ನು ಚಾರ್ಜ್ಶೀಟ್ನಲ್ಲಿ ದಾಖಲಿಸಲಾಗಿದೆ. ಸ್ಥಳೀಯ ಮಾಹಿತಿದಾರರೊಂದಿಗೆ ಭೂಪಿಂದರ್ ಸಿಂಗ್ ಸ್ಥಳಕ್ಕೆ ತೆರಳಿದ್ದರು.
ಯುವಕರನ್ನು ಸುತ್ತುವರೆಯುವ ಮೊದಲೇ ಗುಂಡು ಹಾರಿಸಿ ಕೊಲ್ಲಲಾಗಿದೆ ಎಂದು ಚಾರ್ಜ್ಶೀಟ್ನಲ್ಲಿ ಹೇಳಿದೆ. ಎನ್ಕೌಂಟರ್ ಬಳಿಕ ಮೂವರು ಯುವಕರು ಉಗ್ರರಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು. ಹೀಗಾಗಿ ಸೇನೆ ತನಿಖೆಗೆ ಆದೇಶಿಸಿತು. ಇದೀಗ ಕ್ಯಾಪ್ಟನ್ ಭೂಪಿಂದರ್ ಸಿಂಗ್ ತಪ್ಪೆಸಗಿದ್ದಾರೆ ಎಂದು ಹೇಳಿದೆ.