15 ದಿನದ ಭಾರಿ ಯುದ್ಧಕ್ಕೆ ಶಸ್ತಾ್ರಸ್ತ್ರ ಸಂಗ್ರಹ| ಇಷ್ಟು ದಿನ ಇದ್ದ 10 ದಿನದ ಮಿತಿಯೀಗ 15 ದಿನಕ್ಕೆ ವಿಸ್ತರಣೆ| ಏಕಕಾಲಕ್ಕೆ ಎರಡು ಕಡೆ ಯುದ್ಧ ನಡೆಸಲು ಭಾರತ ಸನ್ನದ್ಧ

ನವದೆಹಲಿ(ಡಿ.14): ಗಡಿಯಲ್ಲಿ ಒಂದೆಡೆ ಚೀನಾ ಹಾಗೂ ಇನ್ನೊಂದೆಡೆ ಪಾಕಿಸ್ತಾನದ ಸೇನೆಗಳು ಪದೇಪದೇ ಕೆಣಕುತ್ತಿರುವುದರಿಂದ ಏಕಕಾಲಕ್ಕೆ ಎರಡೂ ಗಡಿಯಲ್ಲಿ ಯುದ್ಧ ಮಾಡಲು ಬೇಕಾದ ಸಾಮರ್ಥ್ಯವನ್ನು ಭಾರತೀಯ ಸೇನಾಪಡೆಗಳಿಗೆ ಒದಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅದಕ್ಕೆ ಪೂರಕವಾಗಿ, ಸತತ 15 ದಿನಗಳ ಕಾಲ ಭಾರಿ ಪ್ರಮಾಣದ ಯುದ್ಧ ನಡೆದರೆ ಸೇನಾಪಡೆಗಳಿಗೆ ಎಷ್ಟುಶಸ್ತಾ್ರಸ್ತ್ರಗಳು ಬೇಕಾಗುತ್ತವೆಯೋ ಅಷ್ಟುಶಸ್ತಾ್ರಸ್ತ್ರಗಳನ್ನು ದೇಶದಲ್ಲಿ ದಾಸ್ತಾನು ಮಾಡಲು ಕೆಲ ದಿನಗಳ ಹಿಂದೆ ಒಪ್ಪಿಗೆ ನೀಡಿದೆ.

Add Asianetnews Kannada as a Preferred SourcegooglePreferred

ಇಷ್ಟುದಿನಗಳವರೆಗೆ, ತೀವ್ರ ಯುದ್ಧ ನಡೆದರೆ ದೇಶಕ್ಕೆ 10 ದಿನಗಳ ಕಾಲ ಅಗತ್ಯಬೀಳುವಷ್ಟುಶಸ್ತಾ್ರಸ್ತ್ರಗಳನ್ನು ಮಾತ್ರ ಸಂಗ್ರಹಿಸಿಡಲು ಸೇನಾಪಡೆಗಳಿಗೆ ಒಪ್ಪಿಗೆಯಿತ್ತು. ಅದನ್ನೀಗ 15 ದಿನಗಳಿಗೆ ಏರಿಕೆ ಮಾಡಲಾಗಿದೆ. ಇದರ ಜೊತೆಗೆ, ಮೂರೂ ಸೇನಾಪಡೆಗಳ ಮುಖ್ಯಸ್ಥರು ಅಗತ್ಯಬಿದ್ದಾಗ ತಲಾ 500 ಕೋಟಿ ರು.ವರೆಗಿನ ಶಸ್ತಾ್ರಸ್ತ್ರಗಳನ್ನು ತುರ್ತಾಗಿ ಖರೀದಿಸಲು ಅನುಮತಿ ನೀಡುವುದಕ್ಕೆ ಮನೋಹರ್‌ ಪರ್ರಿಕರ್‌ ರಕ್ಷಣಾ ಸಚಿವರಾಗಿದ್ದಾಗಲೇ (‘ಉರಿ’ ದಾಳಿಯ ನಂತರ) ಒಪ್ಪಿಗೆ ನೀಡಿದ್ದರು. ಆ ನೀತಿಯೂ ಈಗ ಮುಂದುವರೆಯಲಿದೆ. ಪರ್ರಿಕರ್‌ ರಕ್ಷಣಾ ಸಚಿವರಾಗುವವರೆಗೆ ಸೇನಾಪಡೆಗಳ ಮುಖ್ಯಸ್ಥರು 100 ಕೋಟಿ ರು.ವರೆಗಿನ ಶಸ್ತಾ್ರಸ್ತ್ರಗಳನ್ನು ಮಾತ್ರ ಖರೀದಿಸಬಹುದಿತ್ತು.

ಬದಲಾವಣೆ ಏಕೆ?

ಇತ್ತೀಚೆಗೆ ಚೀನಾದ ಗಡಿಯಲ್ಲಿ ಹಾಗೂ ಪಾಕಿಸ್ತಾನದ ಗಡಿಯಲ್ಲಿ ಶತ್ರು ಸೇನೆಗಳಿಂದ ಒಂದೇ ರೀತಿಯ ಒತ್ತಡ ನಿರ್ಮಾಣವಾಗುತ್ತಿದೆ. ಅದನ್ನೆದುರಿಸಲು ಭಾರತದ ರಕ್ಷಣಾ ಪಡೆಗಳು ಎರಡೂ ಗಡಿಯಲ್ಲೂ ಏಕಕಾಲಕ್ಕೆ ಯುದ್ಧಸನ್ನದ್ಧ ಸ್ಥಿತಿಯಲ್ಲಿರಬೇಕಾದ ಅಗತ್ಯವಿದೆ. ಅದನ್ನು ಮನಗಂಡು ಭಾರತ ಸರ್ಕಾರ ಶಸ್ತಾ್ರಸ್ತ್ರಗಳ ದಾಸ್ತಾನು ಹೆಚ್ಚಿಸಲು ಅನುಮತಿ ನೀಡಿದೆ ಎನ್ನಲಾಗುತ್ತಿದೆ.

ಕಾಲಕ್ಕೆ ತಕ್ಕಂತೆ ನೀತಿ ಬದಲು

ಬಹಳ ವರ್ಷಗಳ ಹಿಂದಿನವರೆಗೆ 40 ದಿನಗಳ ಕಾಲದ ಯುದ್ಧಕ್ಕೆ ಬೇಕಾಗುವಷ್ಟುಶಸ್ತಾ್ರಸ್ತ್ರ ದಾಸ್ತಾನಿಡಲು ಭಾರತೀಯ ಸೇನಾಪಡೆಗಳಿಗೆ ಅನುಮತಿಯಿತ್ತು. ಆದರೆ, ಪರಿಸ್ಥಿತಿ ಹಾಗೂ ಯುದ್ಧದ ರೀತಿಗಳು ಬದಲಾದ ಮೇಲೆ ಅದನ್ನು 10 ದಿನಕ್ಕೆ ಇಳಿಸಲಾಗಿತ್ತು.