* ಪೆಗಾಸಸ್ ಹಗರಣ ಮತ್ತು ದೈನಿಕ್ ಭಾಸ್ಕರ್ ಮೇಲಿನ ದಾಳಿ ವಿಚಾರವಾಗಿ ಮಮತಾ ಮಾತು* ಕಪ್ಪುಹಣ ಕೇವಲ ವಿಪಕ್ಷ, ಮಾಧ್ಯಮದ ಬಳಿ ಇದೆಯಾ? ಸರ್ಕಾರ ದೀದೀ ಪ್ರಶ್ನೆ* ಮುಂದಿನ ಲೋಕಸಭಾ ಚುನಾವಣೆ ಬಗ್ಗೆಯೂ ದೀದೀ ಮಾತು
ನವದೆಹಲಿ(ಜು.28): ಪೆಗಾಸಸ್ ಹಗರಣ ಮತ್ತು ದೈನಿಕ್ ಭಾಸ್ಕರ್ ಮೇಲಿನ ದಾಳಿ ವಿಚಾರವಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪೆಗಾಸಸ್ ವಿಷಯದಲ್ಲಿ, ನನ್ನ ಫೋನ್ ಹ್ಯಾಕ್ ಮಾಡಲಾಗಿದೆ. ಎನ್ ರಾಮ್ ತನಿಖೆಗೆ ಹೇಳಿದ್ದಾರೆ. ದೈನಿಕ್ ಭಾಸ್ಕರ್ ಮಾಧ್ಯಮ ಸಂಸ್ಥೆ ಮೇಲೂ ದಾಳಿ ನಡೆಸಲಾಗಿದೆ. ಹಾಗಾದ್ರೆ ಕಪ್ಪು ಹಣ ಕೇವಲ ಪ್ರತಿಪಕ್ಷಗಳು ಮತ್ತು ಮಾಧ್ಯಮ ಸಂಸ್ಥೆಗಳಲ್ಲಿ ಮಾತ್ರ ಇದೆಯಾ? ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಪೆಗಾಸಸ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ ನ್ಯಾಯಾಧೀಶರ ಮೇಲ್ವಿಚಾರಣೆ ಇರಬೇಕು ಎಂದೂ ಒತ್ತಾಯಿಸಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರದ ವಿರುದದ್ಧ, ವಿರೋಧ ಪಕ್ಷಗಳನ್ನು ಒಂದುಗೂಡಿಸುವ ಅಭಿಯಾನದಲ್ಲಿ ತೊಡಗಿರುವ ಮಮತಾ ಬಳಿ, ಮುಂದಿನ ವರ್ಷ ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸುತ್ತೀರಾ ಮತ್ತು ಪ್ರತಿಪಕ್ಷಗಳು ಒಟ್ಟಾಗಿ ಪ್ರಚಾರ ಮಾಡಬೇಕೆಂದು ನೀವು ಭಾವಿಸುತ್ತೀರಾ ಎಂದು ಪ್ರಶ್ನಿಸಿದಾಗ ಪ್ರತಿಪಕ್ಷಗಳು ಒಟ್ಟಾಗಿ ಕೆಲಸ ಮಾಡುವ ವೇದಿಕೆ ಇರಬೇಕು. ಸಂಸತ್ತಿನ ಅಧಿವೇಶನದ ನಂತರ ನಾವು ಒಟ್ಟಾಗಿ ಕೆಲಸ ಮಾಡಬಹುದು.
ಇನ್ನು ವಿರೋಧ ಪಕ್ಷದ ಒಕ್ಕೂಟದ ನಾಯಕ(ಮುಖ) ಯಾರಾಗಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಮಮತಾ, 'ನಾನು ರಾಜಕೀಯ ಪ್ರವಾದಿಯಲ್ಲ. ಇದು ಸಂದರ್ಭಗಳನ್ನು ಅವಲಂಬಿಸಿರುತ್ತದೆ. ನನ್ನ ಅಭಿಪ್ರಾಯಗಳನ್ನು ಯಾರ ಮೇಲೂ ಹೇರಲು ನಾನು ಬಯಸುವುದಿಲ್ಲ. ನಾವು ಭೇಟಿಯಾದಾಗ ಈ ಬಗ್ಗೆ ಚರ್ಚಿಸುತ್ತೇವೆ ಎಂದಿದ್ದಾರೆ.
