ಪೌರತ್ವ ಕಾಯ್ದೆ: ಪ್ರತಿಭಟನೆ ನಡುವೆಯೂ ನಮಾಜ್ ನಿಲ್ಲಿಸಿ ಅಯ್ಯಪ್ಪ ಭಕ್ತರಿಗೆ ದಾರಿ!
ಪೌರತ್ವ ಕಾಯ್ದೆಗೆ ತೀವ್ರ ವಿರೋಧ| ರಸ್ತೆಗಿಳಿದು ಪ್ರತಿಭಟಿಸುತ್ತಿರುವ ಪ್ರತಿಭಟನಾಕಾರರು| ಹಿಂಸಾತ್ಮಕ ರೂಪ ತಳೆದ ಪ್ರತಿಭಟನೆ| ಪ್ರತಿಭಟನೆಯ ನಡುವೆಯೂ ನಮಾಜ್ ನಿಲ್ಲಿಸಿ ಅಯ್ಯಪ್ಪ ಭಕ್ತರಿಗೆ ದಾರಿಕೊಟ್ಟ ಮುಸಲ್ಮಾನರು
ಚೆನ್ನೈ[ಡಿ.22]: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದೆಲ್ಲೆಡೆ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನಾಕಾರರು ಹಿಂಸಾಚಾರದಲ್ಲೂ ತೊಡಗಿಸಿಕೊಂಡಿದ್ದಾರೆ. ಇವೆಲ್ಲದರ ನಡುವೆ ಪ್ರತಿಭಟನೆ ವೇಳೆ ನಡೆದ ಘಟನೆಯೊಂದನ್ನು ಅನೇಕರು ಹಾಡಿ ಹೊಗಳಿದ್ದಾರೆ. ಈ ಅಪರೂಪದ ದೃಶ್ಯ CAA ವಿರುದ್ಧದ ಪ್ರತಿಭಟನೆ ನಡೆಯುತ್ತಿದ್ದರೂ ಹಿಂದೂ ಹಾಗೂ ಮುಸಲ್ಮಾನರ ನಡುವಿನ ಬಾಂಧವ್ಯ ಹಾಗೂ ಏಕತೆಯ ನಡುವೆ ಯಾವುದೇ ಬಿರುಕಿಲ್ಲ ಎಂಬುವುದನ್ನು ತೋರಿಸಿಕೊಟ್ಟಿದೆ.
ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ CAA ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರು ನಮಾಜ್ ನಿಲ್ಲಿಸಿ ಶಬರಿಮಲೆಗೆ ತೆರಳುತ್ತಿದ್ದ ಭಕ್ತರಿಗೆ ದಾರಿ ಮಾಡಿಕೊಟ್ಟಿರುವುದು ನೋಡಬಹುದಾಗಿದೆ. ಈ ಘಟನೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದಿದ್ದು, ಪ್ರತಿಭಟನಾಕಾರರು ರಸ್ತೆಯಲ್ಲೇ ನಮಾಜ್ ಮಾಡುತ್ತಿರುತ್ತಾರೆ. ಈ ಸಂದರ್ಭದಲ್ಲಿ ಶಬರಿಮಲೆ ಅಯ್ಯಪ್ಪ ಭಕ್ತರು ಅದೇ ದಾರಿಯಲ್ಲಿ ಬಂದಿದ್ದಾರೆ. ಇಲ್ಲಿ ಜನರ ಬಹುದೊಡ್ಡ ಗುಂಪೇ ನೆರೆದಿತ್ತು. ಹೀಗಿರುವಾಗ ಈ ಗುಂಪಿನಿಂದ ವ್ಯಕ್ತಿಯೊಬ್ಬ ಹೊರಬಂದು, ಶಬರಿಮಲೆಗೆ ತೆರಳುತ್ತಿದ್ದ ಭಕ್ತರಿಗೆ ದಾರಿ ಮಾಡಿಕೊಟ್ಟಿದ್ದಾರೆ.
ಕೊಯಂಬತ್ತೂರಿನಲ್ಲಿ CAA ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಸುಮಾರು 15 ಸಾವಿರ ಮಂದಿ ಪಾಲ್ಗೊಂಡಿದ್ದರು. ಈ ಪ್ರತಿಭಟನೆಗೆ ಆಲ್ ಜಮಾತ್ ಹಾಗೂ ಇಸ್ಲಾಮಿಕ್ ಸಂಘಟನೆಗಳು ಕರೆ ಕೊಟ್ಟಿದ್ದವು. ತಮಿಳುನಾಡಿನ ಹಲವಾರು ನಗರಗಳಲ್ಲಿ ಕಳೆದ ಕೆಲ ವಾರಗಳಿಂದ ಪ್ರತಿಭಟನೆ ನಡೆಯುತ್ತಿದೆ. ಜನರು ಈ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.