Asianet Suvarna News Asianet Suvarna News

ಜೆಎನ್‌ಯು ಕ್ಯಾಂಪಸ್‌ನಲ್ಲಿ ಬ್ರಾಹ್ಮಣ ವಿರೋಧಿ ಬರಹ, ವರದಿ ಕೇಳಿದ ಕುಲಪತಿ!

ಜವಹರಲಾಲ್‌ ನೆಹರು ಕ್ಯಾಂಪಸ್‌ನಲ್ಲಿ ಬ್ರಾಹ್ಮಣ ವಿರೋಧಿ ಬಹರಗಳನ್ನು ಬರೆದ ವಿಚಾರದಲ್ಲಿ ಕುಲಪತಿ ವರದಿ ಕೇಳಿದ್ದಾರೆ. ಆದಷ್ಟು ಶೀಘ್ರವಾಗಿ ವರದಿಯನ್ನು ನೀಡುವಂತೆ ಉಪಕುಲಪತಿ ಆದೇಶ ಮಾಡಿದ್ದಾರೆ.
 

anti Brahmin slogans on campus buildings in JNU VC seeks report san
Author
First Published Dec 2, 2022, 3:15 PM IST

ನವದೆಹಲಿ (ಡಿ.2): ಜವಹರಲಾಲ್‌ ನೆಹರು ವಿಶ್ವವಿದ್ಯಾಲಯ ಅಥವಾ ಜೆಎನ್‌ಯು ಆವರಣದ ಹಲವು ಕಟ್ಟಡಗಳಲ್ಲಿ ಬ್ರಾಹ್ಮಣ ವಿರೋಧಿ ಘೋಷಣೆಯನ್ನು ಬರೆದು ವಿರೂಪಗೊಳಿಸಿದ ಘಟನೆ ನಡೆದಿದೆ. ಘೋಷಣೆಗಳನ್ನು ಬರೆದಿದ್ದಲ್ಲದೆ ಇದನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಕುರಿತಾಗಿ ಜೆಎನ್‌ಯು ಉಪಕುಲಪತಿ ವಿವಿಯ ಕುಂದುಕೊರತೆ ಸಮಿತಿಯಿಂದ ವರದಿ ನೀಡುವಂತೆ ಸೂಚಿಸಿದ್ದಾರೆ. ಪ್ರಕರಣದ ಕುರಿತಾಗಿ ಕೂಲಂಕಷ ತನಿಖೆ ನಡೆಸಿ ಅದರ ವರದಿಯನ್ನು ಶೀಘ್ರದಲ್ಲಿ ನೀಡಬೇಕು ಎಂದು ಹೇಳಿದ್ದಾರೆ. ಜೆಎನ್‌ಯು ಆವರಣದ ಸ್ಕೂಲ್ ಆಫ್‌ ಇಂಟರ್‌ನ್ಯಾಷನಲ್‌ ಸ್ಟಡೀಸ್‌ನಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು, ಅಧ್ಯಾಪಕರ ಕೊಠಡಿಗಳು ಹಾಗೂ ಆವರಣದ ಗೋಡೆಗಳ ಮೇಲೆ ಬ್ರಾಹ್ಮಣ ವಿರೋಧಿ ಬರಹಗಳನ್ನು ಬರೆದು ವಿರೂಪ ಮಾಡಲಾಗಿದೆ. ಇದನ್ನು ಉಪಕುಲಪತಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಕ್ಯಾಂಪಸ್‌ನ ಆವರಣದಲ್ಲಿ ಈ ರೀತಿಯ ವರ್ತನೆಯನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ. ಜೆಎನ್‌ಯು ಎನ್ನುವುದು ಎಲ್ಲರಿಗೂ ಸೇರಿರುವ ವಿಶ್ವವಿದ್ಯಾಲಯ ಆಗಿರುವ ಕಾರಣ ಇಂಥ ಘಟನೆಯನ್ನು ಸಹಿಸೋದಿಲ್ಲ ಎಂದು ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

"ಡೀನ್, ಸ್ಕೂಲ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್, ಮತ್ತು ಕುಂದುಕೊರತೆಗಳ ಸಮಿತಿಯು ವಿಚಾರಣೆ ನಡೆಸಿ ವಿ-ಸಿಗೆ ವರದಿಯನ್ನು ಸಲ್ಲಿಸಲು ಕೇಳಲಾಗಿದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಬ್ರಾಹ್ಮಣರು ಹಾಗೂ ಬನಿಯಾ ಸಮುದಾಯದ ವಿರುದ್ಧ ಘೋಷಣೆಗಳನ್ನು ಬರೆಯುವ ಮೂಲಕ ಸ್ಕೂಲ್ ಆಫ್ ಇಂಟರ್‌ನ್ಯಾಶನಲ್ ಸ್ಟಡೀಸ್ II ಕಟ್ಟಡದ ಗೋಡೆಗಳನ್ನು ವಿರೂಪ ಮಾಡಲಾಗಿದೆ ಎಂದು ಅಲ್ಲಿನ ವಿದ್ಯಾರ್ಥಿಗಳು ಹೇಳಿದ್ದಾರೆ.

ಗೋಡೆಗಳ ಮೇಲೆ ಬರೆಯಲಾದ ಕೆಲವು ಘೋಷಣೆಗಳಲ್ಲಿ, 'ಬ್ರಾಹ್ಮಣರು ಕ್ಯಾಂಪಸ್‌ಅನ್ನು ತೊರೆಯಿರಿ', 'ಇಲ್ಲಿ ರಕ್ತಪಾತವಾಗಲಿದೆ', 'ಬ್ರಾಹ್ಮಣ್‌ ಭಾರತ್‌ ಚೋಡೋ' ಹಾಗೂ 'ಬ್ರಾಹ್ಮಣ-ಬನಿಯಾಗಳೇ ನಿಮ್ಮ ಬಳಿ ನಾವು ಬರುತ್ತಿದ್ದೇವೆ, ನಿಮ್ಮ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ' ಎಂದು ಅದರಲ್ಲಿ ಬರೆಯಲಾಗಿದೆ.

"ಕಮ್ಯುನಿಸ್ಟ್ ಗೂಂಡಾಗಳಿಂದ ಶೈಕ್ಷಣಿಕ ಜಾಗವನ್ನು ಧ್ವಂಸಗೊಳಿಸುವುದನ್ನು ಎಬಿವಿಪಿ ಖಂಡಿಸುತ್ತದೆ. ಕಮ್ಯುನಿಸ್ಟರು ಜೆಎನ್‌ಯುನ ಸ್ಕೂಲ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್ II ಕಟ್ಟಡದ ಗೋಡೆಗಳ ಮೇಲೆ ನಿಂದನಾರ್ಹ ಬರಹಗಳನ್ನು ಬರೆದಿದ್ದಾರೆ. ಮುಕ್ತ ಚಿಂತನೆಯ ಪ್ರಾಧ್ಯಾಪಕರ ಚೇಂಬರ್‌ಗಳನ್ನು ಇವರು ವಿರೂಪ ಮಾಡಿದ್ದಾರೆ ಎಂದು ಎಬಿವಿಪಿ ಜೆಎನ್‌ಯು ಅಧ್ಯಕ್ಷ ರೋಹಿತ್‌ ಕುಮಾರ್‌ ಹೇಳಿದ್ದಾರೆ. ಜೆಎನ್‌ಯು ಪ್ರಾಧ್ಯಾಪಕರ ವರ್ಗ ಕೂಡ ಈ ವಿಧ್ವಂಸತೆಯನ್ನು ಖಂಡಿಸಿದೆ. ಇದಕ್ಕೆ ಎಡಪಂಥೀಯ ವಿಚಾರಧಾರೆಯ ಗ್ಯಾಂಗ್‌ ಕಾರಣ ಎಂದು ಹೇಳಿದೆ.

Follow Us:
Download App:
  • android
  • ios