ತೆಲಂಗಾಣದಲ್ಲಿ ಚುನಾವಣಾ ಭರವಸೆ ಈಡೇರಿಸಲು 900ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಮತ್ತೊಂದೆಡೆ, ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಸಮಸ್ಯೆಗಳನ್ನು ಪರಿಹರಿಸಲು ಸಿಬಿಎಸ್‌ಇ ತನ್ನೆಲ್ಲಾ ಶಾಲೆಗಳಲ್ಲಿ ಆಪ್ತ ಸಮಾಲೋಚಕರ ನೇಮಕವನ್ನು ಕಡ್ಡಾಯಗೊಳಿಸಿದೆ.

ಹೈದರಾಬಾದ್‌: ಚುನಾವಣಾ ಭರವಸೆ ಈಡೇರಿಕೆಗಾಗಿ ತೆಲಂಗಾಣದಲ್ಲಿ ಶ್ವಾನಹತ್ಯೆ ಮುಂದುವರೆದಿದ್ದು, ಇಲ್ಲಿನ ಜಗ್ತಿಯಾಲ್ ಜಿಲ್ಲೆಯ ಪೆಗಡಪಲ್ಲಿ ಗ್ರಾಮದಲ್ಲಿ 300 ಬೀದಿ ನಾಯಿಗಳನ್ನು ಸಾಯಿಸಲಾಗಿದೆ. ಇದರೊಂದಿಗೆ ಒಂದೇ ತಿಂಗಳಲ್ಲಿ ರಾಜ್ಯದಲ್ಲಿ ಹತ್ಯೆಯಾದ ನಾಯಿಗಳ ಸಂಖ್ಯೆ 900ಕ್ಕೇರಿಕೆಯಾಗಿದೆ.

Add Asianetnews Kannada as a Preferred SourcegooglePreferred

ಕಳೆದ ಡಿಸೆಂಬರ್‌ನಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ಅಧಿಕಾರಕ್ಕೆ ಬಂದರೆ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವುದಾಗಿ ಭರವಸೆ ನೀಡಲಾಗಿತ್ತು. ಅದನ್ನು ನೆರವೇರಿಸಲು ಸರಪಂಚ, ಜನಪ್ರತಿನಿಧಿಗಳು ಸೇರಿ ಈ ಕೃತ್ಯ ನಡೆಸಿರುವ ಶಂಕೆಯಿದೆ. ಈ ಸಂಬಂಧ ಇಬ್ಬರ ವಿರುದ್ಧ ಬಿಎನ್‌ಎಸ್‌ ಅಡಿ ಎಫ್ಐಆರ್‌ ದಾಖಲಾಗಿದೆ. ತನಿಖೆ ವೇಳೆ ಪೊಲೀಸರು 70-80 ಶ್ವಾನಗಳ ಮೃತದೇಹಗಳನ್ನು ಸಮಾಧಿಯಿಂದ ಹೊರತೆಗೆದಿದ್ದಾರೆ.

ಮೊದಲು ಹನಮಕೊಂಡ ಜಿಲ್ಲೆಯಲ್ಲಿ 300, ಕಾಮರೆಡ್ಡಿಯಲ್ಲಿ 200, ಯಾಚಾರಂ ಗ್ರಾಮದಲ್ಲಿ 100 ನಾಯಿಗಳನ್ನು ವಿಷವಿಕ್ಕಿ ಕೊಲ್ಲಲಾಗಿತ್ತು.

ಇನ್ನು ಸಿಬಿಎಸ್‌ಇ ಶಾಲೆಗಳಲ್ಲಿ ಆಪ್ತ ಸಮಾಲೋಚಕರ ನೇಮಕ ಕಡ್ಡಾಯ

ಕೋಟಾ: ವಿದ್ಯಾರ್ಥಿಗಳಲ್ಲಿ ಖಿನ್ನತೆ, ಒತ್ತಡ, ಏಕಾಗ್ರತೆ ಕೊರತೆಯಂತಹ ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತನ್ನ ಎಲ್ಲ ಶಾಲೆಗಳಲ್ಲಿ ಆಪ್ತ ಸಮಾಲೋಚಕರ ನೇಮಕವನ್ನು ಕಡ್ಡಾಯಗೊಳಿಸಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿನಿಎಸ್‌ಇ) ಮಹತ್ವದ ನಿರ್ಧಾರ ಕೈಗೊಂಡಿದೆ.

ಸಿಬಿಎಸ್‌ಇ ಶಾಲೆಗಳಲ್ಲಿ ಆಪ್ತಸಮಾಲೋಚಕರ ನಿಯೋಜನೆಯನ್ನು ಕಡ್ಡಾಯಗೊಳಿಸುವಂತೆ ಕೋರಿ ಕೋಟಾದ ಕೆಲವರು ರಾಜಸ್ಥಾನ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಬೆನ್ನಲ್ಲೇ ರಾಷ್ಟ್ರೀಯ ಶಿಕ್ಷಣ ಮಂಡಳಿಯು ಸಿಬಿಎಸ್‌ಇ ಕಾನೂನಿಗೆ ತಿದ್ದುಪಡಿ ತಂದಿದೆ. ಇದರನ್ವಯ ಸಿಬಿಎಸ್‌ಇ ಶಾಲೆಗಳು ಪ್ರತಿ 500 ವಿದ್ಯಾರ್ಥಿಗೆ ಒಬ್ಬ ಪೂರ್ಣಾವಧಿ ಸಮಾಲೋಚಕ, ಸ್ವಾಸ್ಥ್ಯ ಶಿಕ್ಷಕ ಅಥವಾ ಸಾಮಾಜಿಕ-ಭಾವನಾತ್ಮಕ ಸಲಹೆಗಾರ ಹಾಗೂ ವೃತ್ತಿ ಸಲಹೆಗಾರರನ್ನು ನೇಮಿಸುವುದು ಕಡ್ಡಾಯವಾಗಿದೆ.

ಶಾಲೆಗಳಿಗೆ ಅರೆಕಾಲಿಕ ಸಲಹೆಗಾರರನ್ನು ನೇಮಿಸಿಕೊಳ್ಳಲು ಅನುಮತಿ

ಈ ಹಿಂದೆ, 9ರಿಂದ 12ನೇ ತರಗತಿಗಳವರೆಗಿನ 300ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ಮಾತ್ರ ಪೂರ್ಣ ಸಮಯದ ಆಪ್ತ ಸಮಾಲೋಚಕರ ನೇಮಕಕ್ಕೆ ಅವಕಾಶವಿತ್ತು. ಆದರೆ ಸಣ್ಣ ಶಾಲೆಗಳಿಗೆ ಅರೆಕಾಲಿಕ ಸಲಹೆಗಾರರನ್ನು ನೇಮಿಸಿಕೊಳ್ಳಲು ಅನುಮತಿ ನೀಡಲಾಗಿತ್ತು.