ದೇಶ್ಮುಖ್ರಿಂದ 4 ಕೋಟಿ ರು. ಹಫ್ತಾ ವಸೂಲಿ: ಜಾರಿ ನಿರ್ದೇಶನಾಲಯ
* ಮಹಾರಾಷ್ಟ್ರದ ಅಂದಿನ ಸಚಿವ ಅನಿಲ್ ದೇಶಮುಖ್ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಗಂಭೀರ ಆರೋಪ
* ಬಾರ್ ಮಾಲೀಕರಿಂದ 4.7 ಕೋಟಿ ರು.ಗಳನ್ನು ದೇಶಮುಖ್ ಸಂಗ್ರಹಿಸಿ, ಟ್ರಸ್ಟ್ ಮೂಲಕ ಡಮ್ಮಿ ಕಂಪನಿಗಳಲ್ಲಿ ಹೂಡಿಕೆ
* ಮುಂಬೈ ಕೋರ್ಟ್ಗೆ ಮಾಹಿತಿ ನೀಡಿದ ಜಾರಿ ನಿರ್ದೇಶನಾಲಯ ಅಧಿಕಾರಿಗಳು
ಮುಂಬೈ(ಜೂ.27): ಹಫ್ತಾ ವಸೂಲು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಅಂದಿನ ಸಚಿವ ಅನಿಲ್ ದೇಶಮುಖ್ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಶನಿವಾರ ಗಂಭೀರ ಆರೋಪ ಮಾಡಿದೆ. ಬಾರ್ ಮಾಲೀಕರಿಂದ 4.7 ಕೋಟಿ ರು.ಗಳನ್ನು ದೇಶಮುಖ್ ಸಂಗ್ರಹಿಸಿ, ತಮ್ಮ ಟ್ರಸ್ಟ್ ಮೂಲಕ ಡಮ್ಮಿ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದರು ಎಂದು ಅದು ಮುಂಬೈ ಕೋರ್ಟ್ಗೆ ಹೇಳಿದೆ.
ಬಾರುಗಳನ್ನು ನಿಗದಿತ ಅವಧಿ ಮೀರಿ ಅಕ್ರಮವಾಗಿ ತೆರೆಯಲು ದೇಶಮುಖ್ ಲಂಚ ವಸೂಲಿ ಮಾಡಿದ್ದರು. ಪೊಲೀಸ್ ಅಧಿಕಾರಿ ಸಚಿನ್ ವಾಝೆ ಬಳಸಿಕೊಂಡು ಈ ಕೃತ್ಯ ಎಸಗಿದ್ದರು ಎಂದು ಬಾರ್ ಮಾಲೀಕರು ಹೇಳಿಕೆ ನೀಡಿದ್ದಾರೆ ಎಂದು ಇ.ಡಿ. ತಿಳಿಸಿದೆ.
ವಿಚಾರಣೆಗೆ ಗೈರು:
ಈ ನಡುವೆ, ಶನಿವಾರ ದೇಶಮುಖ್ ಅವರು ಇ.ಡಿ. ವಿಚಾರಣೆಗೆ ಹಾಜರಾಗಲಿಲ್ಲ. ಮತ್ತೊಂದು ದಿನಾಂಕಕ್ಕೆ ಕೋರಿಕೆ ಸಲ್ಲಿಸಿದ್ದಾರೆ. ಮತ್ತೊಂದೆಡೆ ಬಂಧಿತ ಇಬ್ಬರು ದೇಶಮುಖ್ ಆಪ್ತರನ್ನು ಜು.1ರವರೆಗೆ ಇ.ಡಿ. ವಶಕ್ಕೆ ಕೋರ್ಟ್ ಒಪ್ಪಿಸಿದೆ.