ಗುಬ್ಬಿ ಮೇಲೆ ಬ್ರಹ್ಮಾಸ್ತ್ರ... ಬಡ ವ್ಯಾಪಾರಿಯ ಮೇಲೆ ಮಹಿಳೆಯ ದೌರ್ಜನ್ಯ... ವಿಡಿಯೋ ವೈರಲ್
- ಬಡ ವ್ಯಾಪಾರಿಯ ಮೇಲೆ ಮಹಿಳೆಯ ದೌರ್ಜನ್ಯ
- ಕಾರಿಗೆ ತಳ್ಳುಗಾಡಿ ಕುಟ್ಟಿದ್ದಕ್ಕೆ ಅವಾಂತರ
- ಮಧ್ಯಪ್ರದೇಶದ ಭೋಪಾಲ್ನಲ್ಲಿ ಘಟನೆ
ಭೋಪಾಲ್(ಜ.12): ಕೆಲವು ಮನುಷ್ಯ ಅಹಂಕಾರಕ್ಕೆ ಮಿತಿ ಎಂಬುದಿರುವುದಿಲ್ಲ. ಇನ್ನು ಕೆಲವರು ಐಷಾರಾಮಿ ವಸ್ತುಗಳಿಗೆ ನೀಡುವ ಬೆಲೆಯನ್ನು ಭಾವನೆಗಳಿರುವ ಜೀವಿಗೆ, ಮನುಷ್ಯನಿಗೆ ನೀಡಲು ಬಯಸುವುದಿಲ್ಲ. ದುರಹಾಂಕಾರಿ ಮಹಿಳೆಯೊಬ್ಬಳು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬ ಗಾದೆ ಮಾತಿನಂತೆ ತಳ್ಳುಗಾಡಿಯಲ್ಲಿ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದ ಬಡಪಾಯಿ ವ್ಯಕ್ತಿಯ ಮೇಲೆ ತನ್ನ ದೌರ್ಜನ್ಯವೆಸಗಿದ್ದಾಳೆ. ಮಧ್ಯಪ್ರದೇಶದ ಭೋಪಾಲ್ನಲ್ಲಿ ಈ ಘಟನೆ ನಡೆದಿದೆ.
ವಿಡಿಯೋದಲ್ಲಿ ತೋರಿಸುವಂತೆ ಸಿಟ್ಟುಗೊಂಡ ಮಹಿಳೆಯೊಬ್ಬಳು ತಳ್ಳುಗಾಡಿಯಲ್ಲಿದ್ದ ಹಣ್ಣುಗಳನ್ನು ಎತ್ತಿ ಎತ್ತಿ ನೆಲಕ್ಕೆಸೆಯುತ್ತಿರುವುದನ್ನು ಕಾಣಬಹುದು. ಹಣ್ಣು ವ್ಯಾಪರಿಯೊಂದಿಗೆ ಒಂದೇ ಸಮನೆ ವಾದ ಮಾಡುತ್ತಾ ಆಕೆ ಗಾಡಿಯಿಂದ ಒಂದೊಂದೇ ಹಣ್ಣುಗಳನ್ನು ತೆಗೆದು ನೆಲಕ್ಕೆಸೆಯುತ್ತಿದ್ದಾಳೆ. ಈಕೆಯ ಎದುರು ಹಣ್ಣಿನ ವ್ಯಾಪಾರಿ ದಯವಿಟ್ಟು ಹಣ್ಣುಗಳನ್ನು ಹಾಳು ಮಾಡುವುದನ್ನು ನಿಲ್ಲಿಸುವಂತೆ ಬೇಡಿಕೊಳ್ಳುತ್ತಿರುವ ದೃಶ್ಯವಿದೆ. ಆದರೆ ಆತನ ಮನವಿಯನ್ನು ಕೇಳಿಸಿಕೊಳ್ಳದೆ ಕ್ರೋಧದ ಕೈಗೆ ಬುದ್ದಿ ಕೊಟ್ಟ ಆಕೆ ಒಂದೇ ಸಮನೆ ಹಣ್ಣುಗಳನ್ನು ಕೆಳಗೆ ಎಸೆಯುತ್ತಲೇ ಇದ್ದಾಳೆ. ಇತ್ತ ರಸ್ತೆಯಲ್ಲಿ ಮಹಿಳೆಯ ಬೊಬ್ಬೆ ಕೇಳಿ ಸಮೀಪದ ಮನೆಗಳ ನಿವಾಸಿಗಳು ಹೊರಗೆ ಬಂದಿದ್ದು, ಈ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋ ಈಗ ಟ್ವಿಟ್ಟರ್, ಫೇಸ್ಬುಕ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿ ವೈರಲ್ ಆಗಿದೆ.
ಬಳಿಕ ಮಹಿಳೆಯ ಕ್ರೋಧಕ್ಕೆ ಕಾರಣವೇನು ಎಂಬುದು ತಿಳಿದು ಬಂದಿದ್ದು, ಮಹಿಳೆ ಪಾರ್ಕಿಂಗ್ ಸ್ಥಳದಿಂದ ತನ್ನ ಕಾರನ್ನು ಹೊರ ತೆಗೆಯುತ್ತಿದ್ದ ವೇಳೆ ಅಲ್ಲೇ ಸಾಗುತ್ತಿದ್ದ ತಳ್ಳುಗಾಡಿಯೊಂದು ಆಕೆಯ ಕಾರಿಗೆ ಸ್ವಲ್ಪ ತಾಗಿದ್ದು, ಕಾರಿಗೆ ಗೀರಿದಂತಾಗಿದೆ. ಇದನ್ನು ನೋಡಿದ ಮಹಿಳೆಯ ಸಿಟ್ಟು ಗಗನಕ್ಕೇರಿದ್ದು, ಪ್ರಾರಂಭದಲ್ಲಿ ಹಣ್ಣಿನ ವ್ಯಾಪಾರಿಗೆ ಬಯ್ಯಲು ಶುರು ಮಾಡಿದ ಆಕೆ ನಂತರ ಆತನ ಗಾಡಿಯಲ್ಲಿದ್ದ ಒಂದೊಂದೇ ಹಣ್ಣುಗಳನ್ನು ಕೆಳಕ್ಕೆಸೆದಿದ್ದಾಳೆ. ಈ ವೇಳೆ ಹಣ್ಣಿನ ವ್ಯಾಪಾರಿ ಮ್ಯಾಡಮ್ ದಯವಿಟ್ಟು ಈ ರೀತಿ ಮಾಡಬೇಡಿ, ನಾನು ಬಡವ ಎಂದು ಮನವಿ ಮಾಡಿದ್ದಾನೆ. ಅಲ್ಲದೇ ಕಾರಿಗೊಳಗಾದ ಹಾನಿಗೆ ಪರಿಹಾರ ನೀಡುವುದಾಗಿಯೂ ಹೇಳಿದ್ದಾನೆ. ಆದರೆ ಇದ್ಯಾವುದಕ್ಕೂ ಆಕೆ ಕ್ಯಾರೇ ಅಂದಿಲ್ಲ.
Bulli Bai Deal: ಮುಸ್ಲಿಂ ಮಹಿಳೆಯರ ಹರಾಜು, 18 ವರ್ಷದ ಯುವತಿಯೇ ಮಾಸ್ಟರ್ ಮೈಂಡ್!
ಇತ್ತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಹಿಳೆಯ ವರ್ತನೆ ಕಂಡು ಶಾಕ್ ಆಗಿದ್ದಾರೆ. ಬಡ ವ್ಯಾಪಾರಿಯ ತಳ್ಳು ಗಾಡಿಯಿಂದ 8-10 ಪಪ್ಪಾಯಿಗಳನ್ನು ಕೆಳಗೆಸೆದು ಮಹಿಳೆ ಏನು ಸಾಧನೆ ಮಾಡಿದಳು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಅಲ್ಲದೇ ಆಕೆಯ ಅತೀಯಾದ ವರ್ತನೆ ವೇಳೆ ಸಂಯಮದಿಂದ ವರ್ತಿಸಿದ ವ್ಯಾಪಾರಿಯ ತಾಳ್ಮೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ ವ್ಯಾಪಾರಿಯೂ ಕೂಡ ಮಹಿಳೆಯಂತೆ ವರ್ತಿಸಿದ್ದಾರೆ ಈ ಘಟನೆಯ ಚಿತ್ರಣವೇ ಬೇರೆ ರೀತಿ ಇರುತ್ತಿತ್ತು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Woman Murder: ಕಿಟಕಿಯಲ್ಲಿ ಇಣುಕಿದ ಕಿರಾತಕರು, ಪ್ರಶ್ನೆ ಮಾಡಿದ್ದಕ್ಕೆ 3 ಮಕ್ಕಳ ತಾಯಿ ಕೊಂದೇ ಬಿಟ್ಟರು!