ನಕ್ಸಲರ ನಿಗ್ರಹ ಚುರುಕಿಗೆ ಕೇಂದ್ರ ನಿರ್ಧಾರ!
* 10 ರಾಜ್ಯಗಳ ಜತೆ ಸಿಎಂಗಳ ಜತೆ ಶಾ ಮಹತ್ವದ ಸಭೆ
* ನಕ್ಸಲರ ನಿಗ್ರಹ ಚುರುಕಿಗೆ ಕೇಂದ್ರ ನಿರ್ಧಾರ
* ನಕ್ಸಲರಿಗೆ ಹಣದ ಹರಿವು ತಡೆಯುವ ಬಗ್ಗೆ ತಂತ್ರ
* ರಾಜ್ಯಗಳ ಗುಪ್ತಚರ ವ್ಯವಸ್ಥೆ ಬಲಪಡಿಸಲು ತೀರ್ಮಾನ
* ನಕ್ಸಲರ ಪ್ರದೇಶಗಳಲ್ಲಿ ಅಂಚೆ ಕಚೇರಿ, ಏಕಲವ್ಯ ಶಾಲೆ ಸ್ಥಾಪನೆ
* ರಸ್ತೆ, ಶಾಲೆ ಸೇರಿ ಇನ್ನಿತರ ಮೂಲಸೌಕರ್ಯವಿಸ್ತರಣೆ
ನವದೆಹಲಿ(ಸೆ.27): ಮಾವೋವಾದಿ(Maoist) ಉಗ್ರರ ವಿರುದ್ಧದ ಕಾರ್ಯಾಚರಣೆ ಹಾಗೂ ನಕ್ಸಲರಿಗೆ(Naxals) ಹರಿದುಹೋಗುವ ನಿಧಿಗಳನ್ನು ತಡೆ ಹಿಡಿಯಲು ಹಾಗೂ ನಕ್ಸಲ್ ನಿಗ್ರಹ ಕಾರ್ಯಾಚರಣೆ ತೀವ್ರಗೊಳಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅಧ್ಯಕ್ಷತೆಯಲ್ಲಿ ನಡೆದ 10 ನಕ್ಸಲ್ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಿರ್ಧರಿಸಿದೆ.
ಭಾನುವಾರ ನಕ್ಸಲ್ ಪೀಡಿತ ಒಡಿಶಾ(Odisha), ಪಶ್ಚಿಮ ಬಂಗಾಳ(West Bengal), ಬಿಹಾರ(Bihar), ಮಧ್ಯಪ್ರದೇಶ(Madhya Pradesh), ಜಾರ್ಖಂಡ್(Jarkhand), ಮಹಾರಾಷ್ಟ್(Maharashtra) ಸೇರಿದಂತೆ ಒಟ್ಟಾರೆ 10 ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಶಾ(Amit Shah) 3 ತಾಸು ಸಭೆ ನಡೆಸಿದರು. ಈ ವೇಳೆ ಭದ್ರತಾ ನಿರ್ವಾತದ ಭರ್ತಿ, ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ (ಇ.ಡಿ), ಎನ್ಐಎ ಹಾಗೂ ರಾಜ್ಯ ಪೊಲೀಸರು ಒಟ್ಟುಗೂಡಿ ನಿರ್ವಹಿಸಬಹುದಾದ ಕ್ರಮಗಳ ಬಗ್ಗೆಯೂ ಚರ್ಚಿಸಲಾಗಿದೆ.
ಉಗ್ರರ ವಿರುದ್ಧದ ಕ್ರಮಕ್ಕಾಗಿ ರಾಜ್ಯಗಳ ನಡುವಿನ ಸಮನ್ವಯತೆ, ರಾಜ್ಯಗಳ ಗುಪ್ತಚರ ವ್ಯವಸ್ಥೆ ಹಾಗೂ ವಿಶೇಷ ಪಡೆಗಳ ಬಲಪಡಿಸುವಿಕೆಗೆ ನಿರ್ಣಯಿಸಲಾಯಿತು. ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ ರಸ್ತೆ, ಶಾಲೆಗಳು, ಮೇಲ್ಸೇತುವೆಗಳು, ಆರೋಗ್ಯ ಕೇಂದ್ರಗಳ ಮೂಲಸೌಕರ್ಯ ಬಲಪಡಿಸಲು ಒಮ್ಮತಕ್ಕೆ ಬರಲಾಯಿತು. ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಏಕಲವ್ಯ ಶಾಲೆಗಳು ಮತ್ತು ಅಂಚೆ ಕಚೇರಿಗಳನ್ನು ಸ್ಥಾಪಿಸಲೂ ನಿರ್ಣಯ ತೆಗೆದುಕೊಳ್ಳಲಾಯಿತು.
ಮುಖ್ಯಮಂತ್ರಿಗಳಾದ ಉದ್ಧವ್ ಠಾಕ್ರೆ, ಶಿವರಾಜ್ ಸಿಂಗ್ ಚೌಹಾಣ್, ನಿತೀಶ್ ಕುಮಾರ್, ಕೆಸಿಆರ್ ಹಾಗೂ ನವೀನ್ ಪಟ್ನಾಯಕ್ ಅವರು ಈ ಸಭೆಗೆ ಹಾಜರಾದರು. ಆದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಭೂಪೇಶ್ ಬಾಘೇಲ್, ಆಂಧ್ರ ಪ್ರದೇಶದ ಜಗನ್ ಮೋಹನ್ ರೆಡ್ಡಿ ಹಾಗೂ ಕೇರಳದ ಪಿಣರಾಯಿ ವಿಜಯನ್ ಅವರು ಭಾಗಿಯಾಗಿರಲಿಲ್ಲ. ಆದರೆ ರಾಜ್ಯದ ಪ್ರತಿನಿಧಿಗಳನ್ನು ಕಳಿಸಿಕೊಟ್ಟಿದ್ದರು.