ಹೋಳಿ ಹಬ್ಬ ಆಚರಣೆಗೆ ಭರ್ಜರಿ ತಯಾರಿ ಆರಂಭಗೊಂಡಿದೆ. ಮಾರ್ಚ್ 8 ರಂದು ದೇಶ ವಿದೇಶದಲ್ಲಿ ಹೋಳಿ ಆಚರಿಸಲಾಗುತ್ತಿದೆ. ಹಿಂದೂಗಳ ಹಬ್ಬ ಆಚರಣೆ ವೇಳೆ ಹೋಳಿ ಬಣ್ಣ ಮಸೀದಿಗೆ ತಾಗದಂತೆ ಅಲಿಘಡ ಮಸೀದಿ ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಲಾಗಿದೆ. 

ಲಖನೌ(ಮಾ.07): ಬಣ್ಣದ ಹಬ್ಬ ಹೋಳಿ ಬಂದಿದೆ. ಮಾರ್ಚ್ 8 ರಂದು ದೇಶಾದ್ಯಂತ ಹೋಳಿ ಆಚರಿಸಲಾಗುತ್ತದೆ. ವಿದೇಶದಲ್ಲೂ ಹೋಳಿ ಹಬ್ಬ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಬೀದಿ ಬೀದಿಗಳಲ್ಲಿ ಹೋಳಿ ಹಬ್ಬ ಆಚರಣೆ, ಸಂಭ್ರಮ ಮನೆಮಾಡಲಿದೆ. ಇದರ ನಡುವೆ ಉತ್ತರ ಪ್ರದೇಶದ ಅಲಿಘಡ ಮಸೀದಿ, ಹೋಳಿ ಹಬ್ಬದ ಆಚರಣೆ ವೇಳೆ ಹೋಳಿ ಬಣ್ಣ ಮಸೀದಿಗೆ ತಾಗದಂತೆ ಎಚ್ಚರವಹಿಸಲು ಮಸೀದಿಯ ಭಾಗಶಃ ಟರ್ಪಾಲ್‌ನಿಂದ ಮುಚ್ಚಲಾಗಿದೆ. ಅಲಿಘಡ ಮಸೀದಿ ಪ್ರದೇಶ ಹಾಗೂ ರಸ್ತೆ ಅತೀ ಸೂಕ್ಷ್ಮ ಪ್ರದೇಶವಾಗಿದೆ. ಮಸೀದಿ ಮುಂಭಾಗದ ರಸ್ತೆಯಿಂದಲೇ ಹಿಂದೂಗಳ ಹಲವು ಹಬ್ಬಗಳ ಆಚರಣೆ, ಮೆರವಣಿಗಳು ಸಾಗುತ್ತದೆ. ಹೀಗಾಗಿ ಈ ಪ್ರದೇಶ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ.

Add Asianetnews Kannada as a Preferred SourcegooglePreferred

ಈ ಬಾರಿ ಹೋಳಿ ಹಬ್ಬ ಆಚರಣೆ ಹಾಗೂ ಮೆರೆವಣಿಗೆಗೆ ಹಿಂದೂ ಸಂಘಟನೆಗಳು ಭಾರಿ ತಯಾರಿ ಮಾಡಿಕೊಂಡಿದೆ. ಇನ್ನು ಉತ್ತರ ಪ್ರದೇಶದಲ್ಲಿ ಯಾವುದೇ ಅಹಿತರ ಘಟನೆ ನಡೆಯದಂತೆ ಎಚ್ಚರ ವಹಿಸಲು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಸ್ಥಳೀಯ ಜಿಲ್ಲಾಡಳಿತದ ಜೊತೆ ಪೊಲೀಸರು ಮಹತ್ವದ ಮಾತುಕತೆ ನಡೆಸಿದ್ದಾರೆ. ಬಳಿಕ ಸ್ಥಳೀಯ ಜಿಲ್ಲಾಡಳಿತ, ಮಸೀದಿ ಆಡಳಿತ ಮಂಡಳಿಗೆ ಮಹತ್ವದ ಸೂಚನೆ ನೀಡಿದೆ. ಹೋಳಿ ಹಬ್ಬದ ಕಾರಣ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಪ್ಲಾಸ್ಟಿಕ್ ಕವರ್ ಮಾಡಲು ಸೂಚಿಸಲಾಗಿತ್ತು.

Holi 2023 : ಆರ್ಥಿಕ ಕೊರತೆ ನೀಗಿಸಲು ಹೋಳಿ ದಿನ ಇವನ್ನು ಖರೀದಿಸಿ

ಸ್ಥಳೀಯ ಜಿಲ್ಲಾಡಳಿತದ ಸೂಚನೆಯಂತೆ ಮಸೀದಿ ಆಡಳಿತ ಮಂಡಳಿ ಅತೀ ದೊಡ್ಡ ಟರ್ಪಾಲ್‌ನಿಂದ ಮಸೀದಿಯನ್ನು ಮುಚ್ಚಿದೆ.ಮಸೀದಿ ಮುಂಭಾಗದ ರಸ್ತೆಯಲ್ಲಿ ಹೋಳಿ ಹಬ್ಬದ ಮೆರವಣಿಗೆ ಸಾಗಲಿದೆ. ಈ ವೇಳೆ ಮಸೀದಿ ಮೇಲೆ ಹೋಳಿ ಬಣ್ಣ ಎರಚದಂತೆ ತಡೆಯಲು ಹಾಗೂ ಮುಂದೆ ಆಗುವ ಗಲಭೆ ತಪ್ಪಿಸಲು ಜಿಲ್ಲಾಡಳಿತ ಈ ಸೂಚನೆ ನೀಡಿದೆ. 

ಕಳೆದ ಕೆಲ ವರ್ಷಗಳಿಂದ ಹೋಳಿ ಹಬ್ಬದ ಸಂದರ್ಭ ಅಲಿಘಡ ಮಸೀದಿಯನ್ನು ಇದೇ ರೀತಿ ಟರ್ಪಾಲ್ ಹಾಕಿ ಮುಚ್ಚಲಾಗುತ್ತದೆ. ಯೋಗಿ ಆದಿತ್ಯನಾಥ್ ಸರ್ಕಾರ ಕೋಮು ಸಂಘರ್ಷ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಇಲ್ಲಿನ ಸ್ಥಳೀಯ ಮುಸ್ಲಿಮರು ಆರೋಪಿಸಿದ್ದಾರೆ. ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ಬಳಿಕ ಹೋಳಿ ಹಬ್ಬ ಆಚರಣೆ ವಿಜೃಂಭಣೆಯಿಂದ ನಡೆಯುತ್ತಿದೆ. ಕಳೆದ ಐದಾರು ವರ್ಷದಿಂದ ಮಸೀದಿಯನ್ನು ಟರ್ಪಾಲ್ ಮೂಲಕ ಮುಚ್ಚಲಾಗುತ್ತಿದೆ. ಇದೀಗ ಯಾರೇ ಬಣ್ಣ ಎರಚಿದರೂ ಮಸೀದಿಗೆ ಹಾನಿಯಾಗಲ್ಲ ಎಂದು ಮಸೀದಿ ಸಮಿತಿ ಸದಸ್ಯ ಅಖೀಲ್ ಪಹಲ್ವಾನ್ ಹೇಳಿದ್ದಾರೆ.

Holi 2023: ಈ ಹೋಳಿ ಹಬ್ಬದಲ್ಲಿ ನಿಮ್ಮ ರಾಶಿಗೆ ತಕ್ಕ ಬಣ್ಣ ಬಳಸಿ, ಅದೃಷ್ಟ ಹೆಚ್ಚಿಸಿ..

ಇತ್ತ ಈ ಹೇಳಿಕೆಯನ್ನು ಹಿಂದೂ ಸಂಘಟನೆಗಳು ಖಂಡಿಸಿದೆ. ಹೋಳಿ ಹಬ್ಬದ ವೇಳೆ ಬಣ್ಣಗಳು ಚಿಮ್ಮುವ ಸಾಧ್ಯತೆ ಇದೆ. ಮಸೀದಿಯನ್ನು ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಿರುವುದಕ್ಕೆ ನಮ್ಮ ಅಕ್ಷೇಪಣೆ ಇಲ್ಲ. ಆದರೆ ವಿನಾ ಕಾರಣ ಯೋಗಿ ಸರ್ಕಾರ ಕೋಮು ಸಂಘರ್ಷ ಸೃಷ್ಟಿಸಲಿದೆ ಅನ್ನೋ ವಿವಾದಿತ ಹೇಳಿಕೆ ನೀಡಬೇಡಿ. ನಿಮ್ಮ ಮಸೀದಿಯನ್ನು ಹೋಳಿ ಬಣ್ಣದಿಂದ ರಕ್ಷಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಿ. ಅದನ್ನು ಬಿಟ್ಟು ಮುಖ್ಯಮಂತ್ರಿ ಮೇಲೆ ಆಧಾರರಹಿತ ಆರೋಪ ಮಾಡುವುದು ಬಿಟ್ಟು ಬಿಡಿ ಎಂದಿದೆ.