ನೀನು RSSವಾಲಾ, ಬಾಹರ್ ಜಾವೋ: ಡಾಕ್ಟರ್ಗೆ ರೇಗಿದ ಅಖಿಲೇಶ್!
ಸರ್ಕಾರಿ ವೆದ್ಯನನ್ನು ತರಾಟೆಗೆ ತೆಗೆದುಕೊಂಡ ಎಸ್’ಪಿ ಮುಖ್ಯಸ್ಥ| ನೀನು RSS ಅಥವಾ ಬಿಜೆಪಿ ಸದಸ್ಯ ಇರಬಹುದು ಎಂದ ಅಖಿಲೇಶ್| ಕನೌಜ್ ಸರ್ಕಾರಿ ಆಸ್ಪತ್ರೆಯಲ್ಲಿ ಅಖಿಲೇಶ್ ರಂಪಾಟ| ಗಾಯಾಳುಗಳ ಭೇಟಿ ನೆಪದಲ್ಲಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಮಾಜಿ ಸಿಎಂ| ಕಿರಿಯ ವೈದ್ಯ ಡಿಎಸ್ ಮಿಶ್ರಾ ಅವರಿಗೆ ಬೈದ ಅಖಿಲೇಶ್ ಯಾದವ್|
ಕನೌಜ್(ಜ.14): ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಕಳೆದ ವಾರ ನಡೆದ ಅಪಘಾತದಲ್ಲಿ 20 ಜನರು ಮೃತಪಟ್ಟು ಹಲವರು ಗಾಯಗೊಂಡಿದ್ದರು. ಗಾಯಾಳುಗಳ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದಿದ್ದ ಅಖಿಲೇಶ್ ಯಾದವ್, ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಗಾಯಾಳುಗಳು ಅಖಿಲೇಶ್ ಮುಂದೆ ತಮ್ಮ ಅಳಲು ತೋಡಿಕೊಳ್ಳುತ್ತಿರುವಾಗ ವೈದ್ಯ ಮಧ್ಯಪ್ರವೇಶಿಸಿದ್ದಾರೆ. ಇದರಿಂದ ಕೆರಳಿದ ಅಖಿಲೇಶ್ ಯಾದವ್, ನೀವು ಸರ್ಕಾರಿ ಅಧಿಕಾರಿ, RSS ಹಾಗೂ ಬಿಜೆಪಿ ವ್ಯಕ್ತಿ, ನೀವು ಮಾತನಾಡಬೇಡಿ ಎಂದು ಗದರಿದರು.
ನೀವು ಅತ್ಯಂತ ಕಿರಿಯ ಅಧಿಕಾರಿ, ನೀವು RSS ಅಥವಾ ಬಿಜೆಪಿ ಸದಸ್ಯರಾಗಿರಬಹುದು ಎಂದು ಅಖಿಲೇಶ್ ಸರ್ಕಾರಿ ವೈದ್ಯ ಡಿಎಸ್ ಮಿಶ್ರಾ ಅವರನ್ನು ಗದರಿರುವ ವಿಡಿಯೋ ವೈರಲ್ ಆಗಿದೆ.
ಸದ್ಯ ಅಖಿಲೇಶ್ ಯಾದವ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಸರ್ಕಾರಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಪರಿಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.