ಭೀತಿ ದೂರ ಮಾಡಲು ಕೋವ್ಯಾಕ್ಸಿನ್ ಪಡೆದ ಏಮ್ಸ್ ನಿರ್ದೇಶಕ!
ಶನಿವಾರದಿಂದ ಆರಂಭವಾಗಿರುವ ಐತಿಹಾಸಿಕ ಕೋವಿಡ್ ಲಸಿಕೆ ಮಹಾ ಅಭಿಯಾನ| ಭೀತಿ ದೂರ ಮಾಡಲು ಕೋವ್ಯಾಕ್ಸಿನ್ ಪಡೆದ ಏಮ್ಸ್ ನಿರ್ದೇಶಕ
ನವದೆಹಲಿ(ಜ.12): ಶನಿವಾರದಿಂದ ಆರಂಭವಾಗಿರುವ ಐತಿಹಾಸಿಕ ಕೋವಿಡ್ ಲಸಿಕೆ ಮಹಾ ಅಭಿಯಾನದ ಬಗ್ಗೆ ವಿಶ್ವಾಸ ಮೂಡಿಸುವ ಉದ್ದೇಶದಿಂದ ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಅವರು ಟೀವಿ ನೇರ ಪ್ರಸಾರದಲ್ಲಿಯೇ ಲಸಿಕೆ ಪಡೆದಿದ್ದಾರೆ.
ಅದರಲ್ಲೂ ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಬಹುಚರ್ಚಿತ ಕೋವ್ಯಾಕ್ಸಿನ್ ಲಸಿಕೆಯನ್ನೇ ಡಾ. ಗುಲೇರಿಯಾ ಅವರು ಪಡೆದುಕೊಂಡಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮೊಟ್ಟಮೊಲಿಗೆ ಪೌರ ಕಾರ್ಮಿಕ ಮನೀಶ್ ಕುಮಾರ್ ಅವರು ಲಸಿಕೆ ಪಡೆದರು.
ನಂತರದಲ್ಲಿ ಡಾ.ಗುಲೇರಿಯಾ ಮತ್ತು ಅನಂತರ ಸರ್ಕಾರ ನೇಮಿಸಿರುವ ಲಸಿಕೆ ಯೋಜನೆ ಸಮಿತಿ ಮುಖ್ಯಸ್ಥರೂ ಆಗಿರುವ ನೀತಿ ಆಯೋಗದ ಸದಸ್ಯ ವಿನೋದ್ ಕೆ. ಪೌಲ್ ಅವರು ಟೀವಿ ನೇರ ಪ್ರಸಾರದಲ್ಲಿಯೇ ಲಸಿಕೆ ಪಡೆದರು. ಈ ವೇಳೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರೂ ಉಪಸ್ಥಿತರಿದ್ದರು.