* ಮತ್ತೆ ಪಕ್ಷ ಸೇರಿ, ಜಯಾ ಉತ್ತರಾಧಿಕಾರಿ ಆಗುವ ಗುರಿ* ಅಣ್ಣಾಡಿಎಂಕೆಗೆ ಶೀಘ್ರ ಏಕನಾಯಕತ್ವ: ಶಶಿಕಲಾ* ಇಪಿಎಸ್‌, ಒಪಿಎಸ್‌ ಜಗಳದ ಲಾಭ ಗಿಟ್ಟಿಸಲಿರುವ ಶಶಿ?

ಚೆನ್ನೈ(ಜೂ.28): ಎಡಪ್ಪಾಡಿ ಪಳನಿಸ್ವಾಮಿ ಹಾಗೂ ಒ. ಪನ್ನೀರಸೆಲ್ವಂ ಅವರು ಅಣ್ಣಾ ಡಿಎಂಕೆಯ ನೇತೃತ್ವ ಯಾರು ವಹಿಸಬೇಕು ಎಂದು ಕಾದಾಡುತ್ತಿರುವ ನಡುವೆಯೇ, ‘ಪಕ್ಷಕ್ಕೆ ಏಕನಾಯಕತ್ವ ಬೇಕು. ಮುಂದಿನ ಲೋಕಸಭೆ ಚುನಾವಣೆ ಒಳಗೆ ಪಕ್ಷಕ್ಕೆ ಒಬ್ಬರೇ ನಾಯಕರಿರಲಿದ್ದಾರೆ’ ಎನ್ನುವ ಮೂಲಕ ಇಬ್ಬರ ಜಗಳದ ಲಾಭ ಪಡೆದು ತಾವು ನಾಯಕಿ ಆಗುವ ಪರೋಕ್ಷ ಇಂಗಿತ ವ್ಯಕ್ತಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಪಕ್ಷದಿಂದ ಉಚ್ಚಾಟಿತರಾದರೂ ಅಣ್ಣಾ ಡಿಎಂಕೆ ಕಾರ್ಯಕರ್ತರನ್ನು ಉದ್ದೇಶಿಸಿ ಚೆನ್ನೈ ಸೇರಿದಂತೆ ತಮಿಳುನಾಡಿನ 3 ಜಿಲ್ಲೆಗಳಲ್ಲಿ ರೋಡ್‌ ಶೋ ನಡೆಸಿದ ಶಶಿಕಲಾ, ‘ಇಬ್ಬರು ಜಗಳ ಆಡುತ್ತಾರೆ ಎಂದ ಮಾತ್ರಕ್ಕೆ ಅಣ್ಣಾ ಡಿಎಂಕೆ ಸಮಸ್ಯೆಯಲ್ಲಿದೆ ಎಂದರ್ಥವಲ್ಲ’ ಎಂದರು. ಆಗ ಕಾರ್ಯಕರ್ತರೊಬ್ಬರು ‘ನೀವು ನಾಯಕಿ ಆಗಿ’ ಎಂದು ಆಗ್ರಹಿಸಿದಾಗ, ‘ಇದು (ಏಕನಾಯಕತ್ವ) ಪಕ್ಷಕ್ಕೆ ಒಳ್ಳೆಯದು. ಲೋಕಸಭೆ ಚುನಾವಣೆಗೆ ಮುನ್ನ ಅಣ್ಣಾಡಿಎಂಕೆ ಒಬ್ಬರ ನಾಯಕತ್ವದ ಅಡಿ ಬರಲಿದೆ’ ಎನ್ನುವ ಮೂಲಕ ತಾವು ಮತ್ತೆ ಪಕ್ಷಕ್ಕೆ ಮರಳಿ ಪಕ್ಷದ ಪ್ರಧಾನ ಕಾರ್ಯದರ್ಶಿ ಆಗುವ ಸುಳಿವು ನೀಡಿದರು.

ಪನ್ನೀರಸೆಲ್ವಂ ಹಾಗೂ ಎಡಪ್ಪಾಡಿ ಪಕ್ಷದ ಸಹ ಸಂಚಾಲಕರು. ಜಯಾ ನಿಧನಾನಂತರ ಪ್ರಧಾನ ಕಾರ್ಯದರ್ಶಿ ಹುದ್ದೆ ಖಾಲಿ ಇದೆ. ಹೀಗಾಗಿ ಇತ್ತೀಚೆಗೆ ಆ ಸ್ಥಾನಕ್ಕಾಗಿ ಇಬ್ಬರ ನಡುವೆ ಕಾದಾಟ ಏರ್ಪಟ್ಟಿದೆ.