2-3 ತಿಂಗಳಲ್ಲಿ ನಡೆಯಲಿರುವ ಕೇರಳದ ವಿಧಾನಸಭೆ ಚುನಾವಣೆಗಾಗಿ ಭರದ ಸಿದ್ಧತೆ| ಮೆಟ್ರೋ ಶ್ರೀಧರನ್‌ ನಂತರ ಪಿ.ಟಿ.ಉಷಾಗೆ ಬಿಜೆಪಿ ಗಾಳ

ತಿರುವನಂತಪುರಂ(ಫೆ.23): 2-3 ತಿಂಗಳಲ್ಲಿ ನಡೆಯಲಿರುವ ಕೇರಳದ ವಿಧಾನಸಭೆ ಚುನಾವಣೆಗಾಗಿ ಭರದ ಸಿದ್ಧತೆ ನಡೆಸಿರುವ ಬಿಜೆಪಿ, ‘ಮೆಟ್ರೋ ಮ್ಯಾನ್‌’ ಇ.ಶ್ರೀಧರನ್‌ ನಂತರ ಇದೀಗ ಒಲಿಂಪಿಕ್‌ ಪದಕ ವಿಜೇತ ಓಟಗಾರ್ತಿ ಪಿ.ಟಿ.ಉಷಾ ಅವರನ್ನು ಪಕ್ಷಕ್ಕೆ ಸೆಳೆಯಲು ಮುಂದಾಗಿದೆ.

Add Asianetnews Kannada as a Preferred SourcegooglePreferred

ದೇಶದ ಮೆಟ್ರೋ ರೈಲ್ವೆ ಯೋಜನೆಗಳ ಹಿಂದಿನ ಮೆದುಳು ಎನ್ನಲಾಗುವ ಶ್ರೀಧರನ್‌ ಕೆಲ ದಿನಗಳ ಹಿಂದಷ್ಟೇ ಬಿಜೆಪಿ ಸೇರಿದ್ದರು. ಅದರ ಬೆನ್ನಲ್ಲೇ ಬಿಜೆಪಿ ನಾಯಕರು ಉಷಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ತೆರೆಮರೆಯಲ್ಲಿ ಸಿದ್ಧತೆ ನಡೆಸಿದ್ದಾರೆ. ಉಷಾ ಕೂಡ ಬಿಜೆಪಿ ಬಗ್ಗೆ ಒಲವು ಹೊಂದಿದ್ದಾರೆ ಎನ್ನಲಾಗಿದ್ದು, ಇತ್ತೀಚೆಗೆ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡು ಅವರು ಟ್ವೀಟ್‌ ಮಾಡಿದ್ದು ಎಲ್ಲರ ಗಮನ ಸೆಳೆದಿತ್ತು. ಉಷಾ ಹಾಗೂ ಶ್ರೀಧರನ್‌ ರೀತಿಯ ಸೆಲೆಬ್ರಿಟಿಗಳು ಬಿಜೆಪಿ ಸೇರಿದರೆ ನಗರ ಪ್ರದೇಶಗಳ ಮತದಾರರನ್ನು ಸೆಳೆಯುವುದು ಸುಲಭವಾಗುತ್ತದೆ ಎಂಬ ಚಿಂತನೆ ಪಕ್ಷದಲ್ಲಿದೆ.

ಕೇರಳದಲ್ಲಿ ಗೆಲ್ಲಲು ‘ಮಿಷನ್‌ ಸೌತ್‌’ ಹೆಸರಿನಲ್ಲಿ ಪಣ ತೊಟ್ಟಿರುವ ಬಿಜೆಪಿ ನಾಯಕರು ಚಿತ್ರರಂಗದ ಜನಪ್ರಿಯ ತಾರೆಗಳು, ಸಾಮಾಜಿಕ ಹಾಗೂ ಸಾಂಸ್ಕೃತಿಕ ನೇತಾರರನ್ನು ಪಕ್ಷಕ್ಕೆ ಸೆಳೆಯಲು ಯತ್ನಿಸುತ್ತಿದ್ದಾರೆ. ಶೀಘ್ರದಲ್ಲೇ ಇನ್ನಷ್ಟುಖ್ಯಾತನಾಮರು ಪಕ್ಷ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.