ಸಹಜ ಸ್ಥಿತಿಗೆ ಗುಜರಾತ್: ರಾಜಸ್ಥಾನಕ್ಕೆ ಈಗ ಚಂಡಮಾರುತ ಲಗ್ಗೆ, ಭಾರಿ ಮಳೆ
ಗುಜರಾತ್ನಲ್ಲಿ ಭಾರಿ ಪ್ರಾಕೃತಿಕ ವಿನಾಶ ಸೃಷ್ಟಿಸಿದ ಬಿಪರ್ ಜಾಯ್ ಚಂಡಮಾರುತ ಬಹುತೇಕ ದುರ್ಬಲಗೊಂಡಿದೆ. ಹೀಗಾಗಿ ಚಂಡಮಾರುತದಿಂದ ಹೆಚ್ಚು ಬಾಧಿತವಾದ ಕಛ್ ಪ್ರದೇಶವು ಶನಿವಾರ ಸಹಜ ಸ್ಥಿತಿಗೆ ಮರಳತೊಡಗಿದೆ.
ಭುಜ್ (ಗುಜರಾತ್): ಗುಜರಾತ್ನಲ್ಲಿ ಭಾರಿ ಪ್ರಾಕೃತಿಕ ವಿನಾಶ ಸೃಷ್ಟಿಸಿದ ಬಿಪರ್ ಜಾಯ್ ಚಂಡಮಾರುತ ಬಹುತೇಕ ದುರ್ಬಲಗೊಂಡಿದೆ. ಹೀಗಾಗಿ ಚಂಡಮಾರುತದಿಂದ ಹೆಚ್ಚು ಬಾಧಿತವಾದ ಕಛ್ ಪ್ರದೇಶವು ಸಹಜ ಸ್ಥಿತಿಗೆ ಮರಳತೊಡಗಿದೆ. ಅಂಗಡಿ-ಮುಂಗಟ್ಟುಗಳು ವ್ಯಾಪಾರ ವಹಿವಾಟು ಪುನಾರಂಭ ಮಾಡಿವೆ. ಇದೇ ವೇಳೆ, ವಿದ್ಯುತ್ ಕಡಿತದಿಂದಾಗಿ ಕಾರ್ಗತ್ತಲಲ್ಲಿ ಮುಳುಗಿದ್ದ 1000 ಗ್ರಾಮಗಳ ಪೈಕಿ ಬಹುತೇಕ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಮರುಸ್ಥಾಪನೆಯಾಗಿದೆ. ಭುಜ್ (Bhuj), ಮಾಂಡ್ವಿ ಸೇರಿ ಹಲವು ಪಟ್ಟಣಗಳು ಹಾಗೂ ಗ್ರಾಮಗಳಲ್ಲಿ ಮಳೆ ಸಂಪೂರ್ಣ ನಿಂತಿದೆ. ಹೀಗಾಗಿ ಈ ಪಟ್ಟಣ ಹಾಗೂ ಗ್ರಾಮಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿವೆ.
ಅತಿ ಗಂಭೀರ ಸ್ವರೂಪದ ಚಂಡಮಾರುತ ಈಗ ವಾಯುಭಾರ ಕುಸಿತವಾಗಿ ಪರಿರ್ತನೆಯಾಗಿದ್ದು, ಕೆಲವೇ ಗಂಟೆಗಳಲ್ಲಿ ‘ಕಡಿಮೆ ಒತ್ತಡ’ದ ರೂಪ ತಾಳಲಿದೆ. ಹೀಗಾಗಿ ಮಳೆ ಇನ್ನು ಕ್ಷೀಣಿಸಲಿದೆ. ಆದರೆ ರಾಜ್ಯದ ಉತ್ತರ ಭಾಗವನ್ನು ಚಂಡಮಾರುತ ದಾಟಿ ಹೋಗುತ್ತಿರುವ ಕಾರಣ ಅಲ್ಲಿ ಮಾತ್ರ ಹೆಚ್ಚು ಮಳೆ ಆಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಈ ನಡುವೆ ಗುಜರಾತ್ (Gujarat) ದಾಟಿ ರಾಜಸ್ಥಾನಕ್ಕೂ (Rajasthan) ಚಂಡಮಾರುತ (Cylone) ಲಗ್ಗೆ ಇಟ್ಟು, ಅಲ್ಲಿ ಹಾದು ಹೋಗುತ್ತಿದೆ. ಹೀಗಾಗಿ ರಾಜಸ್ಥಾನದ ಅನೇಕ ಕಡೆ ಶನಿವಾರ ಭಾರಿ ಮಳೆ ಬಿದ್ದಿದೆ. ಅತಿ ಗರಿಷ್ಠ ಮಳೆ ಮೌಂಟ್ ಅಬುನಲ್ಲಿ (21 ಸೆಂ.ಮೀ.) ಸುರಿದಿದೆ. ರಾಜ್ಯದ ಅನೇಕ ಭಾಗಗಳಲ್ಲಿ 10 ಸೆಂ.ಮೀ.ಗೂ ಹೆಚ್ಚು ಮಳೆಯಾಗಿದೆ.
ಬಿಪೊರ್ಜಾಯ್ ಚಂಡಮಾರುತಕ್ಕೆ ನಲುಗಿದ ಗ್ರಾಮ, 4 ದಿನದ ಕಂದನ ರಕ್ಷಿಸಿದ ಪೊಲೀಸ್!
ಅಮಿತ್ ಶಾ ಭೇಟಿ:
ಚಂಡಮಾರುತದಿಂದ ಹೆಚ್ಚು ಬಾಧೆಗೆ ಒಳಗಾದ ಜಖಾವು ಬಂದರು ಹಾಗೂ ಮಾಂಡ್ವಿ ಬಂದರಿಗೆ ಶನಿವಾರ ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amith Shah)ಭೇಟಿ ನೀಡಿದರು. ಬಳಿಕ ಭುಜ್ನಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆ, ಮರುನಿರ್ಮಾಣ ಕಾರ್ಯಗಳ ಮಾಹಿತಿ ಪಡೆದು ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು. ಈ ವೇಳೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ (Bhupendra Patel) ಇದ್ದರು.
ಅವಿರತ ಶ್ರಮ:
1127 ವಿದ್ಯುತ್ ಇಲಾಖೆ ತಂಡಗಳು ಹಗಲಿರುಳು ಶ್ರಮಪಟ್ಟು ವಿದ್ಯುತ್ ಸಂಪರ್ಕ (electricity conection) ಮರುಸ್ಥಾಪಿಸಿವೆ. ಇದೇ ವೇಳೆ ಹೆದ್ದಾರಿಗಳು ಹಾಗೂ ಇತರ ರಸ್ತೆಗಳ ಮೇಲೆ ಬಿದ್ದಿದ್ದ 581 ಮರಗಳನ್ನು ಅರಣ್ಯ ಇಲಾಖೆ ತಂಡಗಳು ತೆರವು ಮಾಡಿವೆ. ಆದರೆ ಕಛ್ನಲ್ಲಿ ಚಂಡಮಾರುತ ಸಾಕಷ್ಟುವಿನಾಶ ಸೃಷ್ಟಿಸಿ ಹೋಗಿದೆ. ದೇವಭೂಮಿ ದ್ವಾರಕಾ (DevBhumi Dwaraka) , ಬನಾಸ್ಕಂಠಾ, ಪಾಟಣ್ ಸೇರಿ ಹಲವು ಜಿಲ್ಲೆಗಳಲ್ಲಿ ರಸ್ತೆಗಳು, ಕಟ್ಟಡಗಳು, ಮನೆಗಳು, ವಿದ್ಯುತ್ ಕಂಬಗಳಿಗೆ ಭಾರಿ ಹಾನಿಯಾಗಿದೆ. ಹೀಗಾಗಿ ಇಲ್ಲಿನ ಮೂಲಸೌಕರ್ಯದ ಸಂಪೂರ್ಣ ಸುಧಾರಣೆಗೆ ಹಲವು ದಿನಗಳೇ ಬೇಕಾಗಲಿವೆ.
ಗುಜರಾತ್ ತೀರಕ್ಕೆ ಅಪ್ಪಳಿಸಿದ ಬಿಪರ್ ಜಾಯ್: ಮಾಂಡವಿ ಬೀಚ್ ಆಪೋಶನ ತೆಗೆದುಕೊಂಡ ಚಂಡಮಾರುತ
ಶನಿವಾರ ಉತ್ತರ ಗುಜರಾತ್ನ ಪಾಟಣ್, ಬನಾಸ್ಕಂಠಾ ಹಾಗೂ ಸಬರ್ಕಂಠಾ ಜಿಲ್ಲೆಗಳ ಮೇಲೆ ಚಂಡಮಾರುತ ಹಾದು ಹೋದ ಪರಿಣಾಮ ಸರಾಸರಿ 5 ಸೆಂ.ಮೀ. ಮಳೆ ಬಿದ್ದಿದೆ. ಭಾನುವಾರ ಇಲ್ಲಿ ಮಳೆ ಕ್ಷೀಣಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇನ್ನು 1 ಲಕ್ಷ ಮಂದಿ ಇನ್ನೂ ನಿರ್ವಸಿತ ಕೇಂದ್ರಗಳಲ್ಲೇ ಇದ್ದಾರೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಅವರು ನಿರ್ವಸಿತ ಕೇಂದ್ರಗಳಲ್ಲೇ ಇರಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.