* ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ವಿವಾದಾತ್ಮಕ ಹೇಳಿಕೆ* ಹೇಳಿಕೆ ಬೆನ್ನಲ್ಲೇ ಕಾನ್ಪುರದಲ್ಲಿ ಭುಗಿಲೆದ್ದ ಹಿಂಸಾಚಾರ* ಬಿಜೆಪಿಯಿಂದ ವಜಾಗೊಂಡ ನೂಪುರ್ ಶರ್ಮಾ
ಕಾನ್ಪುರ(ಜೂ.06): ಮೇ 27 ರಂದು ಟಿವಿ ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ವಕ್ತಾರ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅವರ ಹೇಳಿಕೆಯ ನಂತರವೇ ಕಾನ್ಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎಂದು ಹೇಳಲಾಗುತ್ತಿದೆ. ಹೀಗಿರುವಾಗಲೇ ವಿವಾದ ಹೆಚ್ಚಾದ ಬೆನ್ನಲ್ಲಿ ಭಾನುವಾರ ಬಿಜೆಪಿ ಹೈಕಮಾಂಡ್ ನೂಪುರ್ ಶರ್ಮಾ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿದೆ. ಅಷ್ಟಕ್ಕೂ ರಾಷ್ಟ್ರ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿರುವ ನೂಪುರ್ ಶರ್ಮಾ ಯಾರು? ಇಲ್ಲಿದೆ ಅವರ ಕುರುತಾದ ಇಂಟರೆಸ್ಟಿಂಗ್ ಮಾಹಿತಿ
ಚುನಾವಣೆಯಲ್ಲಿ ಕೇಜ್ರಿವಾಲ್ ವಿರುದ್ಧ ಸೆಣಸಾಡಿದ್ದ ನೂಪುರ್
ವೃತ್ತಿಯಲ್ಲಿ ವಕೀಲರಾಗಿರುವ ನೂಪುರ್ ಶರ್ಮಾ ಅವರು 2015 ರಲ್ಲಿ ಮೊದಲ ಬಾರಿ ಸದ್ದು ಮಾಡಿದ್ದರು. ಅಂದು ಅವರು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ವಿರುದ್ಧ ಕಣಕ್ಕಿಳಿದಿದ್ದರು. ದುರಾದೃಷ್ಟವಶಾತ್ ಆ ಚುನಾವಣೆಯಲ್ಲಿ ಅವರು 31 ಸಾವಿರ ಮತಗಳ ಅಂತರದಿಂದ ಸೋಲನುಭವಿಸಿದ್ದರು.
DU ನಿಂದಲೇ ಎರಡು ಬಾರಿ ಪದವಿ
23 ಏಪ್ರಿಲ್ 1985 ರಂದು ಜನಿಸಿದ ನೂಪುರ್ ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ಇದರ ನಂತರ, ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಡಿಯುನಿಂದ ಎಲ್ಎಲ್ಬಿ ಮತ್ತು ನಂತರ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಪ್ರವೇಶ ಪಡೆದರು.
ಡಿಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷೆ
ನೂಪುರ್ ಶರ್ಮಾ ತಮ್ಮ ರಾಜಕೀಯ ಜೀವನವನ್ನು ಎಬಿವಿಪಿಯೊಂದಿಗೆ ಪ್ರಾರಂಭಿಸಿದರು. ಅವರು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರೂ ಆಗಿದ್ದಾರೆ. 2008 ರಲ್ಲಿ, ಎಬಿವಿಪಿಯಿಂದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆದ್ದ ಏಕೈಕ ಅಭ್ಯರ್ಥಿಯಾಗಿದ್ದರು. ನೂಪುರ್ ಶರ್ಮಾ 2010ರಲ್ಲಿ ಬಿಜೆಪಿ ಯುವ ಮೋರ್ಚಾದಲ್ಲಿ ಸಕ್ರಿಯರಾಗಿದ್ದರು.
ನೂಪುರ್ ವಿರುದ್ಧ ಮುಂಬೈನಲ್ಲಿ ಪ್ರಕರಣ ದಾಖಲು
ಪ್ರವಾದಿ ಮೊಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ನೂಪುರ್ ವಿರುದ್ಧ ಮುಂಬೈನ ಮುಸ್ಲಿಂ ಸಾಮಾಜಿಕ ಸಂಘಟನೆಯಾದ ರಾಝಾ ಅಕಾಡೆಮಿ ದೂರು ದಾಖಲಿಸಿದೆ. ಇದರ ನಂತರ, ಮುಂಬೈ ಪೊಲೀಸರು ನೂಪುರ್ ಶರ್ಮಾ ವಿರುದ್ಧ ಐಪಿಸಿಯ ಸೆಕ್ಷನ್ 153 ಎ, 295 ಎ ಮತ್ತು 505 (2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ನೂಪುರ್ ಶರ್ಮಾ ವಿರುದ್ಧ ಹೈದರಾಬಾದ್, ಪುಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ವಿಟರ್ ನಲ್ಲಿ ನೂಪುರ್ ಬಂಧನಕ್ಕೆ ಆಗ್ರಹ
ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ನೂಪುರ್ ಶರ್ಮಾ ವಿರುದ್ಧ ಕ್ರಮ ಕೈಗೊಳ್ಳುವ ಜತೆಗೆ ಆಕೆಯನ್ನು ಬಂಧಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ. #ArrestNupurSharma ಶನಿವಾರ ಭಾರತದಲ್ಲಿ ಟ್ವಿಟರ್ನಲ್ಲಿ ಟಾಪ್ ಟ್ರೆಂಡ್ ಆಗಿತ್ತು ಆದರೆ ಪಾಕಿಸ್ತಾನದಲ್ಲಿ ಈ ಹ್ಯಾಶ್ಟ್ಯಾಗ್ ಎರಡು ದಿನಗಳಿಂದ ಟ್ರೆಂಡಿಂಗ್ ಆಗಿದೆ.
ಬಿಜೆಪಿಯಿಂದ ಸ್ಪಷ್ಟನೆ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಸಾವಿರಾರು ವರ್ಷಗಳ ಭಾರತದ ಪಯಣದಲ್ಲಿ ಹಲವು ಧರ್ಮಗಳು ಹುಟ್ಟಿ ಬೆಳೆದು ಬಂದಿದ್ದು, ಯಾವುದೇ ಧರ್ಮದ ಆರಾಧಕರನ್ನು ಅವಮಾನಿಸುವುದನ್ನು ಬಿಜೆಪಿ ಒಪ್ಪುವುದಿಲ್ಲ. ನೂಪುರ್ ಶರ್ಮಾ ಅವರ ವಿವಾದಾತ್ಮಕ ಹೇಳಿಕೆಯ ನಂತರ ಬಿಜೆಪಿಯ ಈ ಹೇಳಿಕೆ ಬಂದಿದೆ. ಈ ಹೇಳಿಕೆಯಿಂದ ಸೃಷ್ಟಿಯಾಗಿರುವ ವಿವಾದಕ್ಕೆ ಅಂತ್ಯ ಹಾಡಲು ಪಕ್ಷವು ಪ್ರಕಟಣೆ ಹೊರಡಿಸಿದೆ ಎನ್ನಲಾಗಿದೆ.