Asianet Suvarna News Asianet Suvarna News

ಆಪರೇಷನ್‌ ಹೈಡ್ರಾಮಾ! ಕಾಂಗ್ರೆಸ್‌ಗೆ ಕೈಕೊಟ್ಟು ಹಾರಿದ 8 ಶಾಸಕರು

ಕಾಂಗ್ರೆಸಿನ 8 ಶಾಸಕರು ಕೈ ಕೊಟ್ಟು ನಾಪತ್ತೆಯಾಗಿದ್ದಾರೆ. ಇದರಿಂದ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಆತಂಕ ಎದುರಾಗಿದ್ದು, ದೊಡ್ಡ ಹೈ ಡ್ರಾಮಾ ನಡೆಯುತ್ತಿದೆ. 

8 MLAs missing  High drama erupts in Madhya Pradesh
Author
Bengaluru, First Published Mar 5, 2020, 7:54 AM IST

ಭೋಪಾಲ್‌ [ಮಾ.05]: ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಕಳೆದ ವರ್ಷ ಕರ್ನಾಟಕದಲ್ಲಿ ಕಂಡುಬಂದಿದ್ದಂತಹ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಿಗೆ ಈಗ ಕಾಂಗ್ರೆಸ್‌ ಆಳ್ವಿಕೆಯ ಮಧ್ಯಪ್ರದೇಶವೂ ಸಾಕ್ಷಿಯಾಗುತ್ತಿದೆ. ಮುಖ್ಯಮಂತ್ರಿ ಕಮಲನಾಥ್‌ ಸರ್ಕಾರದ 8 ಮಂದಿ ಶಾಸಕರು ರಾತ್ರೋರಾತ್ರಿ ಸಂಪರ್ಕ ಕಡಿದುಕೊಂಡು ಹರಾರ‍ಯಣಕ್ಕೆ ತೆರಳಿದ್ದು, ಈ ಹಠಾತ್‌ ಬೆಳವಣಿಗೆಯಿಂದಾಗಿ 2018ರ ಡಿಸೆಂಬರ್‌ನಲ್ಲಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್‌ ಸರ್ಕಾರ ಅಲುಗಾಡಲು ಆರಂಭಿಸಿದೆ.

ಈ ಬೆನ್ನಲ್ಲೇ ಕ್ಷಿಪ್ರ ಕಾರ್ಯಾಚರಣೆಗೆ ಇಳಿದ ಕಾಂಗ್ರೆಸ್‌ ನಾಯಕರಾದ ದಿಗ್ವಿಜಯ ಸಿಂಗ್‌, ಅವರ ಪುತ್ರ ಜೈವರ್ಧನ್‌ ಸಿಂಗ್‌ ಹಾಗೂ ಜೀತೂ ಪತ್ವಾರಿ ಅವರು ಹರಾರ‍ಯಣ ಹೋಟೆಲ್‌ನಲ್ಲಿ ಮಂಗಳವಾರ ತಡರಾತ್ರಿ 2ರ ಸುಮಾರಿಗೆ ಕಸರತ್ತು ನಡೆಸಿದ್ದು, ಶಾಸಕರ ಗುಂಪು ವಿಶೇಷ ವಿಮಾನದಲ್ಲಿ ಮಧ್ಯಪ್ರದೇಶಕ್ಕೆ ಮರಳಿದೆ ಎಂದು ತಿಳಿದು ಬಂದಿದೆ. ಆದರೆ, ಎಲ್ಲ ಭಿನ್ನಮತೀಯ ಶಾಸಕರು ವಾಪಸ್‌ ಬಂದಿದ್ದಾರೋ, ಕೆಲವರು ಮಾತ್ರ ಮರಳಿದ್ದಾರೋ ಎಂಬುದು ಖಚಿತವಾಗಿಲ್ಲ. ಇದರೊಂದಿಗೆ ಕಮಲನಾಥ್‌ ಸರ್ಕಾರ ಸದ್ಯಕ್ಕೆ ಸುರಕ್ಷಿತವಾಗಿ ಕಂಡು ಬಂದರೂ, ಅತಂತ್ರ ಸ್ಥಿತಿಯಿಂದ ಸಂಪೂರ್ಣವಾಗಿ ಪಾರಾಗಿಲ್ಲ ಎನ್ನಲಾಗುತ್ತಿದೆ.

ಈ ನಡುವೆ, ಬಿಜೆಪಿಯ ಹಿರಿಯ ನಾಯಕರೊಬ್ಬರು ಕಾಂಗ್ರೆಸ್ಸಿಗೆ ಬೆಂಬಲ ನೀಡುತ್ತಿದ್ದ ಬಿಎಸ್ಪಿ ಶಾಸಕರೊಬ್ಬರನ್ನು ಬಾಡಿಗೆ ವಿಮಾನದಲ್ಲಿ ಕರೆದೊಯ್ದಿದ್ದಾರೆ ಎಂದು ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್‌ ಆರೋಪಿಸಿದ್ದಾರೆ. ಆದರೆ ಇದಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಮಾಸಾಂತ್ಯಕ್ಕೆ ನಡೆಯಲಿರುವ ರಾಜ್ಯಸಭೆ ಚುನಾವಣೆ ಟಿಕೆಟ್‌ ಪಡೆಯಲು ಈ ರೀತಿಯ ಆರೋಪವನ್ನು ಕಾಂಗ್ರೆಸ್ಸಿಗ ಮಾಡುತ್ತಿದ್ದಾರೆ ಎಂದು ಕಿಡಿಕಾರುತ್ತಿದೆ. ತನ್ನ ಶಾಸಕರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲಾಗದ ಕಾಂಗ್ರೆಸ್‌ ನಮ್ಮ ಮೇಲೆ ಆರೋಪ ಮಾಡುತ್ತಿದೆ ಎಂದು ಬಿಜೆಪಿ ನಾಯಕ ಶಿವರಾಜ ಸಿಂಗ್‌ ಚೌಹಾಣ್‌ ಚಾಟಿ ಬೀಸಿದ್ದಾರೆ.

ಏನಿದು ಹೈಡ್ರಾಮಾ?:

230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಗೆ 2018ರ ನ.28ರಂದು ಚುನಾವಣೆ ನಡೆದು, ಡಿ.11ರಂದು ಫಲಿತಾಂಶ ಹೊರಬಿದ್ದಿತ್ತು. ಬಹುಮತಕ್ಕೆ 116 ಸ್ಥಾನಗಳು ಬೇಕಿದ್ದವು. ಆದರೆ ಕಾಂಗ್ರೆಸ್‌ 114 ಸ್ಥಾನ ಗಳಿಸಿ, 2 ಸ್ಥಾನಗಳಿಂದ ಬಹುಮತದಿಂದ ವಂಚಿತವಾಗಿತ್ತು. ಆದರೆ ನಾಲ್ವರು ಪಕ್ಷೇತರರು, ಇಬ್ಬರು ಬಿಎಸ್ಪಿ ಹಾಗೂ ಓರ್ವ ಸಮಾಜವಾದಿ ಪಕ್ಷ ಶಾಸಕನ ಬೆಂಬಲದೊಂದಿಗೆ ಅಧಿಕಾರಕ್ಕೇರಿತ್ತು.

ವಿಧಾನಸಭೆ ಚುನಾವಣೆಯಲ್ಲಿ 109 ಸ್ಥಾನ ಗೆದ್ದಿದ್ದ ಬಿಜೆಪಿ, 7 ಸ್ಥಾನಗಳಿಂದ ಬಹುಮತದಿಂದ ದೂರ ಉಳಿದಿತ್ತು. ಬಳಿಕ ಬಿಜೆಪಿ ಬಲ 107ಕ್ಕೆ ಕುಗ್ಗಿದೆ. ಕರ್ನಾಟಕದಲ್ಲಿ ಯಶಸ್ವಿಯಾಗಿ ಆಪರೇಷನ್‌ ನಡೆಸಿರುವ ಬಿಜೆಪಿ, ಮಧ್ಯಪ್ರದೇಶದಲ್ಲೂ ಅಂತಹುದೇ ಕಾರ್ಯಾಚರಣೆ ನಡೆಸುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿಕೊಂಡು ಬಂದಿತ್ತು.

ಈ ನಡುವೆ, ಕಾಂಗ್ರೆಸ್‌ ಶಾಸಕರಿಗೆ 25ರಿಂದ 35 ಕೋಟಿ ರು. ಆಮಿಷ ಬಿಜೆಪಿಯಿಂದ ಬರುತ್ತಿದೆ ಎಂದು ಮೂರು ದಿನಗಳ ಹಿಂದೆ ದಿಗ್ವಿಜಯ ಸಿಂಗ್‌ ಆರೋಪಿಸಿದ್ದರು. ಇದರ ಬೆನ್ನಲ್ಲೇ 8 ಶಾಸಕರು ಹರಾರ‍ಯಣಕ್ಕೆ ಹಾರಿದ್ದರು.

ಮಧ್ಯಪ್ರದೇಶ ಬಲಾಬಲ

ಒಟ್ಟು ಬಲ- 230

ಬಹುಮತ- 116

ಕಾಂಗ್ರೆಸ್‌- 114

ಬಿಜೆಪಿ- 107

ಪಕ್ಷೇತರರು- 4

ಬಿಎಸ್ಪಿ- 2

ಎಸ್ಪಿ- 1

ಖಾಲಿ-2

ಮಾರ್ಚ್ 4ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios