ಅಯೋಧ್ಯೆ ಬೆನ್ನಲ್ಲೇ ಬರಲಿದೆ ಇನ್ನೂ 6 ತೀರ್ಪು; 3 ದಿನಗಳಲ್ಲಿ 6 ತೀರ್ಪು ಪ್ರಕಟ ನಿರೀಕ್ಷೆ
ಸಿಜೆಐ ರಂಜನ್ ಗೊಗೋಯ್ ನಿವೃತ್ತಿಗೂ ಮೊದಲು ಮಹತ್ವದದ ಪ್ರಕರಣಗಳು ಇತ್ಯರ್ಥ | ರಫೇಲ್, ಶಬರಿಮಲೆ, ಅನರ್ಹ ಶಾಸಕರ ಪ್ರಕರಣಗಳ ಅಂತ್ಯಕ್ಕೆ ದಿನಗಣನೆ
ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿ ಶತಮಾನಗಳ ಕಾಲದ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿದೆ. ನ್ಯಾ| ರಂಜನ್ ಗೊಗೋಯ್ ನೇತೃತ್ವದ ಸಾಂವಿಧಾನಿಕ ಪೀಠ ನೀಡಿರುವ ತೀರ್ಪನ್ನು ಇಡೀ ದೇಶದ ಜನತೆ ಗೌರವಿಸಿದ್ದಾರೆ. ಅಯೋಧ್ಯೆ ಮಾತ್ರವಲ್ಲದೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಇನ್ನೂ ಕೆಲ ಮಹತ್ವದ ವಿಚಾರಗಳ ಬಗ್ಗೆ ಸುಪ್ರೀಂಕೋರ್ಟ್ ಇದೇ ನವೆಂಬರ್ 17 ರ ಒಳಗೆ ತೀರ್ಪು ಪ್ರಕಟಿಸಲಿದೆ. 2019 ರ ನವೆಂಬರ್ ತಿಂಗಳು ಬಹುಶಃ ಐತಿಹಾಸಿಕ ಮಾಸವಾಗಲಿದೆ.
ಐತಿಹಾಸಿಕ ಅಯೋಧ್ಯೆ ತೀರ್ಪು ಬರೆದಿದ್ದು ನ್ಯಾ. ಚಂದ್ರಚೂಡ್?
ರಫೇಲ್ ಒಪ್ಪಂದದ ಮರುಪರಿಶೀಲನಾ ಅರ್ಜಿ
ಸಾಕಷ್ಟು ವಿವಾದಗಳ ಬಳಿಕ ಅಕ್ಟೋಬರ್ 8 ರಂದು ಮೊಟ್ಟಮೊದಲ ರಫೇಲ್ ಯುದ್ಧವಿಮಾನವನ್ನು ಫ್ರಾನ್ಸ್ ಸರ್ಕಾರ ಅಧಿಕೃತವಾಗಿ ಭಾರತೀಯ ವಾಯು ಪಡೆಗೆ ಹಸ್ತಾಂತರಿಸಿದೆ. ಆದರೆ ರಫೇಲ್ ಒಪ್ಪಂದದಲ್ಲಿ ಮೋದಿ ನೇತೃತ್ವದ ಸರ್ಕಾರ ಅವ್ಯವಹಾರ ನಡೆಸಿದೆ ಎಂದು ಕಾಂಗ್ರೆಸ್ ಭಾರೀ ಆರೋಪ ಮಾಡಿತ್ತು. ಈ ಹಿಂದೆ 2007 ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ 126 ಯುದ್ಧ ವಿಮಾನ ಖರೀದಿಗೆ ಫ್ರಾನ್ಸ್ನ ಡಸಾಲ್ಟ್ ಕಂಪನಿಗೆ 54,000 ಕೋಟಿ ರು. ನೀಡುವ ಒಪ್ಪಂದವಾಗಿತ್ತು.
ಅದರಲ್ಲಿ ಡಸಾಲ್ಟ್ ಕಂಪನಿಯು ಹಾರಾಟಕ್ಕೆ ಸಿದ್ಧವಿರುವ 18 ವಿಮಾನಗಳನ್ನು ಭಾರತಕ್ಕೆ ಒದಗಿಸಿ ಉಳಿದ ಯುದ್ಧ ವಿಮಾನಗಳನ್ನು ಭಾರತ ದಲ್ಲೇ ತಯಾರಿಸಲು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿ ಟೆಡ್ ಕಂಪನಿಗೆ ತಾಂತ್ರಿಕ ನೆರವು ನೀಡುವುದೆಂದು ಮಾತು ಕತೆಯಾಗಿತ್ತು. ಆದರೆ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ 2016 ರಲ್ಲಿ ಹಾರಾಟಕ್ಕೆ ಸಿದ್ಧವಾಗಿರುವ 36 ಯುದ್ಧ ವಿಮಾನಗಳನ್ನು 59,000
ಕೋಟಿ ರು. ನೀಡಿ ಖರೀದಿಸುವ ಹೊಸ ಒಪ್ಪಂದ ಮಾಡಿಕೊಂಡಿತ್ತು. ಹಾಗಾಗಿ ಯುಪಿಎ ಸರ್ಕಾರ ಪ್ರತಿ ವಿಮಾನವನ್ನು 526 ಕೋಟಿ ರು. ವೆಚ್ಚದಲ್ಲಿ ಖರೀದಿಸಲು ನಿರ್ಧರಿಸಿದ್ದರೆ, ಎನ್ಡಿಎ ಸರ್ಕಾರ ಅದೇ ವಿಮಾನಕ್ಕೆ 1555 ಕೋಟಿ ಪಾವತಿಸಲು ಮುಂದಾಗಿದೆ ಎಂದು ಕಾಂಗ್ರಸ್ ಆರೋಪಿಸಿತ್ತು.
ಈ ಆರೋಪ ಸಂಸತ್ತಿ ನಲ್ಲಿ ಕೋಲಾಹಲವನ್ನೇ ಎಬ್ಬಿಸಿತ್ತು. ಈ ಕುರಿತ ವರದಿ ಯನ್ನು ಬಹಿರಂಗ ಪಡಿಸುವಂತೆ ಪ್ರತಿಪಕ್ಷಗಳು ಒತ್ತಾಯಿ ಸಿದ್ದವು. ಕೇಂದ್ರ ಸರ್ಕಾರ ಒಪ್ಪದ ಕಾರಣ ಈ ವಿಷಯ ಕೋರ್ಟ್ ಮೆಟ್ಟಿಲೇರಿತ್ತು.
ಅಯೋಧ್ಯೆ ತೀರ್ಪಿತ್ತ 5 ಜಡ್ಜ್ಗಳ ಭದ್ರತೆ ಹೆಚ್ಚಿಸಿದ ಕೇಂದ್ರ
36 ರಫೇಲ್ ಯುದ್ಧ ವಿಮಾನಗಳ ಖರೀದಿಯಲ್ಲಿ ಅಕ್ರಮ ನಡೆದಿದ್ದು, ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಆದೇಶಿಸಬೇಕೆಂದು ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠ ಡಿ.14 ರಂದು ಈ ಮನವಿಗಳನ್ನು ತಳ್ಳಿಹಾಕಿ, ಯಾವುದೇ ತನಿಖೆ ಅಗತ್ಯವಿಲ್ಲವೆಂದು ತೀರ್ಪು ನೀಡಿತ್ತು. ಸರ್ವೋಚ್ಚ ನ್ಯಾಯಾಲಯವು ತೀರ್ಪನ್ನು ಮರುಪರಿಶೀಲನೆ ಮಾಡಬೇಕೆಂದು ಕೋರಿ ಕೇಂದ್ರದ ಮಾಜಿ ಸಚಿವರಾದ ಯಶವಂತ್ ಸಿನ್ಹಾ, ಅರುಣ್ ಶೌರಿ, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ ಸಿಜೆಐ
ನೇತೃತ್ವದ ಪೀಠ ತೀರ್ಪನ್ನು ಕಾಯ್ದಿರಿಸಿತ್ತು. ಅರ್ಜಿದಾರರಿಗೆ ಮತ್ತು ಸರ್ಕಾ ರಕ್ಕೆ ೨ ವಾರಗಳ ಒಳಗಾಗಿ ಲಿಖಿತ ರೂಪದಲ್ಲಿ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಪೀಠ ಸೂಚಿಸಿತು.
ಸುಮಾರು ಎರಡು ಗಂಟೆ ನಡೆದ ವಿಚಾರಣೆ ವೇಳೆ ಸರ್ಕಾರ ರಫೇಲ್ ಒಪ್ಪಂದ ವನ್ನು ಸಮರ್ಥಿಸಿಕೊಂಡಿತು. ಇದಕ್ಕೆ ಪ್ರತಿಯಾಗಿ ವಾದ ಮಂಡಿಸಿದ ಪ್ರಶಾಂತ್ ಭೂಷಣ್, ಒಪ್ಪಂದಕ್ಕೆ ಸಂಬಂಧಿಸಿ ದಂತೆ ಹಲವು ಮಹತ್ವದ ವಿಚಾರಗಳನ್ನು ಕೋರ್ಟ್ಗೆ ತಿಳಿಯದಂತೆ ಮರೆಮಾಚಲಾಗಿದ್ದು, ಎಫ್ಐಆರ್ ದಾಖಲಿಸಿ ಕ್ರಿಮಿನಲ್ ತನಿಖೆ ನಡೆಸಬೇಕೆಂದು ಮನವಿ ಮಾಡಿದರು. ಈ ಕುರಿತ ಮಹತ್ವದ ತೀರ್ಪನ್ನು ಇದೇ ವಾರ ಸುಪ್ರೀಂಕೋರ್ಟ್ ಪ್ರಕಟಿಸಲಿದೆ.
ಶಬರಿಮಲೆ ಮರುಪರಿಶೀಲನಾ ಅರ್ಜಿ
2018 ರ ಸೆಪ್ಟೆಂಬರ್ನಲ್ಲಿ ಎಲ್ಲ ವಯೋಮಾನದ ಮಹಿಳೆಯರು ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಪ್ರವೇಶಿಸಬಹುದೆಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಈ ತೀರ್ಪಿನ ಮರುಪರಿ ಶೀಲನೆಗೆ ಅರ್ಜಿಗಳು ಸಲ್ಲಿಕೆಯಾಗಿದ್ದವು. ದೇವಸ್ಥಾನದ ತಂತ್ರಿ ಹಾಗೂ ನಾಯರ್ ಸೇವಾ ಸಮಾಜ ಸೇರಿದಂತೆ ಹಲವಾರು ಸಂಘಟನೆಗಳು ಸುಪ್ರೀಂ ಕೋರ್ಟ್ ಮುಂದೆ ತಮ್ಮ ವಾದವನ್ನು ಮಂಡಿಸಿ
ತೀರ್ಪಿನ ಮರುಪರಿಶೀಲನೆಗಾಗಿ ಯತ್ನಿಸಿದ್ದರು.
ಈ ವರ್ಷ ಫೆಬ್ರ ವರಿಯಲ್ಲಿ ಈ ಬಗ್ಗೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ, ವಾದ ವಿವಾದಗಳನ್ನು ಆಲಿಸಿ ತೀರ್ಪನ್ನು ಕಾಯ್ದಿರಿಸಿತ್ತು. ಈ ಕುರಿತ ಮಹತ್ವದ ತೀರ್ಪೂ ಕೂಡ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನಿವೃತ್ತಿಗೂ ಮುನ್ನವೇ ಹೊರಬೀಳಲಿದೆ.
‘ಚೌಕಿದಾರ್ ಚೋರ್ ಹೈ’ ರಾಹುಲ್ ಹೇಳಿಕೆ ಬಗ್ಗೆ ತೀರ್ಪು
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ವತಃ ಸುಪ್ರೀಂಕೊರ್ಟ್ ಚೌಕಿದಾರ್ ಚೋರ್ ಹೈ ಎಂದು ತೀರ್ಪು ನೀಡಿದೆ ಎಂದು ಸುಪ್ರೀಂಕೋರ್ಟ್ನ ತೀರ್ಪ ನ್ನು ರಾಹುಲ್ ಗಾಂಧಿ ತಪ್ಪಾಗಿ ವ್ಯಾಖ್ಯಾನಿಸಿದ್ದರು. ಈ ಸಂಬಂಧ ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ ಅವರು ರಾಹುಲ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಕೋರಿ ಸುಪ್ರೀಂಕೋರ್ಟ್ಗೆ ದಾವೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಸುಪ್ರೀಂಕೋರ್ಟ್ ನೋಟಿಸ್ ಕೂಡ ಜಾರಿ ಮಾಡಿತ್ತು.
ಬಳಿಕ ರಾಹುಲ್ ಗಾಂಧಿ ಕ್ಷಮೆಯಾಚಿಸಿ, ಪ್ರಕರಣವನ್ನು ರದ್ದು ಮಾಡಬೇಕೆಂದು ಕೋರಿದ್ದರು. ಹಿರಿಯ ವಕೀಲ ಮುಕುಲ್ ರೋಹಟಗಿ, ಲೇಖಿ ಅವರ ಪರವಾಗಿ ವಾದ ಮಂಡಿಸಿ ಸುಪ್ರೀಂಕೋರ್ಟ್ ರಾಹುಲ್ ಗಾಂಧಿಯವರ ಕ್ಷಮೆ ಯನ್ನು ತಿರಸ್ಕರಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾಂವಿಧಾನಿಕ ಪೀಠದ ಮುಂದೆ ಕೋರಿದ್ದರು. ಈ ಕುರಿತ ತೀರ್ಪನ್ನು ಇದೇ ವಾರ ಸುಪ್ರೀಂಕೋರ್ಟ್ ಪ್ರಕಟಿಸಲಿದೆ.
ದೇಶದ ಗೌಪ್ಯತೆಗೆ ಧಕ್ಕೆಯುಂಟು ಮಾಡುವ ವಿಷಯಗಳನ್ನು ಹೊರತುಪಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಸಾರ್ವಜನಿಕರು ಪಡೆಯಬಹುದೆಂಬ ಉದ್ದೇಶದಿಂದ 2005 ರ ಅಕ್ಟೋಬರ್ 12 ರಂದು ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿ ಮಾಡಲಾಗಿದೆ. ಆದರೆ ಸುಪ್ರೀಂ ಕೋರ್ಟ್ ಹಾಗೂ ಮುಖ್ಯ ನ್ಯಾಯಮೂರ್ತಿಗಳ ಕಚೇರಿ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಒಳಪಟ್ಟಿಲ್ಲ.
ಆದರೆ, ಸಿಜೆಐ ಕಚೇರಿ ಹಾಗೂ ಸುಪ್ರೀಂಕೋರ್ಟ್ ಕೂಡ ಸಾರ್ವಜನಿಕ ಸ್ವಾಮ್ಯಕ್ಕೆ ಸೇರುತ್ತದೆ ಎಂದು ದೆಹಲಿ ಹೈಕೋರ್ಟ್ 2010 ರಲ್ಲಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸ್ವತಃ ಸುಪ್ರೀಂಕೋರ್ಟ್ನ ಪ್ರಧಾನ ಕಾರ್ಯದರ್ಶಿ ಹಾಗೂ ಕೇಂದ್ರೀಯ ಸಾರ್ವಜನಿಕ ಸಂಪರ್ಕಾಧಿಕಾರಿ ಸರ್ವೋಚ್ಚ ನ್ಯಾಯಾಲಯಕ್ಕೆ 2010 ರಲ್ಲಿ ಮೂರು ಅರ್ಜಿ ಸಲ್ಲಿಸಿದ್ದರು. ಈ ವರ್ಷ ಏಪ್ರಿಲ್ನಲ್ಲಿ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ಈ ಕುರಿತ ತೀರ್ಪನ್ನು ಕಾಯ್ದಿರಿಸಿದೆ. ಈ ಬಗ್ಗೆ ಕೂಡ ನ್ಯಾ| ರಂಜನ್ ಗೊಗೋಯ್ ನಿವೃತ್ತಿಗೂ ಮುನ್ನ ಮಹತ್ವದ ತೀರ್ಪು ಪ್ರಕಟಿಸಲಿದ್ದಾರೆ.
ಕರ್ನಾಟಕದ ಅನರ್ಹ ಶಾಸಕರ ಭವಿಷ್ಯ ನಿರ್ಧಾರ
ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗ ಘೋಷಿಸಿರುವ ಉಪಚುನಾವಣೆಯನ್ನು ಮುಂದೂಡಬೇಕೆಂಬ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಇದೇ ನ.11 ರಿಂದ ಉಪಚುನಾವಣೆ ನೀತಿ ಸಂಹಿತೆ ಜಾರಿಯಾಗಲಿದೆ. ಈ ಮಧ್ಯೆ ಪಕ್ಷಾಂತರ ಕಾಯ್ದೆಯಡಿ ಅನರ್ಹಗೊಂಡ 17 ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರ ಅನರ್ಹತೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪು ಹೊರಬಿದ್ದಿಲ್ಲ. ನವೆಂಬರ್ 18 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಅಷ್ಟರೊಳಗೆ ಸುಪ್ರೀಂಕೋರ್ಟ್ ಅನರ್ಹತೆ ಕುರಿತಂತೆ ತೀರ್ಪ ಪ್ರಕಟಿಸಬೇಕಾಗಿದೆ.
ಹಣಕಾಸು ಕಾಯ್ದೆ- 2017 ನ್ನು ಹಣಕಾಸು ಮಸೂದೆಯ (ಫೈನಾನ್ಸ್ ಬಿಲ್- ಅರ್ಥಾತ್ ಬಜೆಟ್ ರೂಪದಲ್ಲಿ) ರೂಪದಲ್ಲಿ ಸಂಸತ್ತು ಅಂಗೀಕರಿಸಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಾಧಿಕರಣಗಳ ಸದಸ್ಯರ ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ ತಿದ್ದುಪಡಿ ಇದಾಗಿದ್ದರಿಂದ ಇದನ್ನು ಹಣಕಾಸು ಮಸೂದೆಯ ರೂಪದಲ್ಲಿ ಅಂಗೀಕರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು.
ಆದರೆ, ಈ ತಿದ್ದುಪಡಿಯ ಮೂಲಕ ನ್ಯಾಯಾಧಿಕರಣಗಳ ಮೇಲಿನ ಅಧಿಕಾರವನ್ನು ಕೇಂದ್ರ ಸರ್ಕಾರ ತನ್ನ ಕೈಗೆ ತೆಗೆದುಕೊಳ್ಳಲು ಹುನ್ನಾರ ನಡೆಸಿದೆ ಎಂದು ಸುಪ್ರೀಂಕೋರ್ಟ್ನಲ್ಲಿ ದಾವೆದಾರರು ಆರೋಪಿಸಿದ್ದರು. ಈ ವರ್ಷ ಏಪ್ರಿಲ್ನಲ್ಲಿ ಈ ಬಗ್ಗೆ ವಿಚಾರಣೆ ನಡೆಸಿರುವ ಗೊಗೋಯ್ ನೇತೃತ್ವದ ನ್ಯಾಯಪೀಠವು ಹಣಕಾಸು ಕಾಯ್ದೆ-2017 ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಹಲವಾರು ಅರ್ಜಿಗಳ ಬಗ್ಗೆ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಅದು ಈ ವಾರ ಪ್ರಕಟವಾಗುವ ಸಾಧ್ಯತೆಯಿದೆ.
ಅಯೋಧ್ಯೆ ತೀರ್ಪು: ರಾಮಜನ್ಮಭೂಮಿ ಸನಿಹ ಮಸೀದಿಗಿಲ್ಲ ಜಾಗ?
ನ.17 ಅಂತಿಮ ಗಡುವು ಏಕೆ?
ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ನ. 17 ರಂದು ನಿವೃತ್ತಿ ಹೊಂದಲಿದ್ದು, ಅಷ್ಟರೊಳಗೆ ಇಡೀ ದೇಶವೇ ಎದುರು ನೋಡುತ್ತಿರುವ ಶಬರಿಮಲೆ ಮರುಪರಿಶೀಲನಾ ಅರ್ಜಿ, ರಫೇಲ್ ಒಪ್ಪಂದ ಮತ್ತು ಮಾಹಿತಿ ಹಕ್ಕು ಕಾಯ್ದೆಗೆ ನ್ಯಾಯಾಲಯವನ್ನು ಸೇರ್ಪಡೆ ಮಾಡುವುದೂ ಸೇರಿದಂತೆ ಕೆಲ ಮುಖ್ಯ ಪ್ರಕರಣಗಳ ಬಗ್ಗೆ . 13 ರಿಂದ 15 ರೊಳಗೆ ಮೂರು ದಿನಗಳಲ್ಲಿ ತೀರ್ಪು ಘೋಷಿಸುವ ಸಾಧ್ಯತೆ ಇದೆ.
ನವೆಂಬರ್ 11 ಕ್ಕೆ ಸ್ಥಳೀಯ ರಜೆ ಇದೆ, 12 ಕ್ಕೆ ಗುರುನಾನಕ್ ಜಯಂತಿ ಇದೆ. ನವೆಂಬರ್ 16 ಹಾಗೂ 17 ರಂದು ಶನಿವಾರ ಮತ್ತು ಭಾನುವಾರವಾಗಿದ್ದು, ಸುಪ್ರೀಂಕೋರ್ಟ್ಗೆ ರಜೆ ಇದೆ.