* ದೇಶದಲ್ಲಿ ಮುಂದುವರೆದ ಅಪ್ರಾಪ್ತರ ವಿವಾಹ* 18-29ರ ಶೇ.25 ಮಹಿಳೆಯರು, 21-29ರ ಶೇ.15ರಷ್ಟು ಪುರುಷರಿಗೆ ಅವಧಿಪೂರ್ವ ಮದ್ವೆ* ಬಾಲ್ಯ ವಿವಾಹ ತಡೆಯಲು ಸರ್ಕಾರಗಳ ನಾನಾ ಕ್ರಮ 

ನವದೆಹಲಿ: ಬಾಲ್ಯ ವಿವಾಹ ತಡೆಯಲು ಸರ್ಕಾರಗಳು ನಾನಾ ಕ್ರಮಗಳನ್ನು ಕೈಗೊಂಡ ಹೊರತಾಗಿಯೂ ದೇಶದಲ್ಲಿ ಅಪ್ರಾಪ್ತ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಮದುವೆ ನಡೆಸುವುದು ಮುಂದುವರೆದಿದೆ ಎಂದು ಕೇಂದ್ರ ಸರ್ಕಾರದ ಸಮೀಕ್ಷೆ ಹೇಳಿದೆ. 2019-21ರ ಅವಧಿಯಲ್ಲಿ ನಡೆಸಲಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ಈ ಅಂಶಗಳಿವೆ.

ವರದಿಯ ಅನ್ವಯ ಸಮೀಕ್ಷೆಗೆ ಒಳಪಟ್ಟ18- 29ರ ವಯೋಮಾನದ ಶೇ.25ರಷ್ಟುಮಹಿಳೆಯರು ಹಾಗೂ 21-29ರ ವಯೋಮಾನದ ಶೇ.15ರಷ್ಟುಪುರುಷರು ತಾವು ಅಪ್ರಾಪ್ರರಾಗಿದ್ದಾಗಲೇ ವಿವಾಹ ಮಾಡಲಾಗಿತ್ತು ಎಂದು ಹೇಳಿದ್ದಾರೆ. ಹಾಲಿ ಭಾರತದಲ್ಲಿ ವಿವಾಹವಾಗಲು ಮಹಿಳೆಯರಿಗೆ ಕನಿಷ್ಠ 18 ಮತ್ತು ಪುರುಷರಿಗೆ ಕನಿಷ್ಠ 21 ವರ್ಷದ ಮಿತಿ ಇದೆ.

ಸಮೀಕ್ಷೆಯ ಪ್ರಮುಖಾಂಶಗಳು

ಮಹಿಳೆ

ಅಪ್ರಾಪ್ತರ ವಿವಾಹದಲ್ಲಿ ಟಾಪ್‌ 3: ಪಶ್ಚಿಮ ಬಂಗಾಳ(ಶೇ.42), ಬಿಹಾರ(ಶೇ.40), ತ್ರಿಪುರಾದಲ್ಲಿ(ಶೇ.39).

ಅಪ್ರಾಪ್ತರ ವಿವಾಹದಲ್ಲಿ ಲಾಸ್ಟ್‌ 3: ಲಕ್ಷದ್ವೀಪ (ಶೇ.4), ಜಮ್ಮು-ಕಾಶ್ಮೀರ, ಲಡಾಕ್‌(ಶೇ.6)

ಪುರುಷರು

ಅಪ್ರಾಪ್ತರ ವಿವಾಹದಲ್ಲಿ ಟಾಪ್‌ 3: ಬಿಹಾರ(ಶೇ.25), ಅರುಣಾಚಲ ಪ್ರದೇಶ(ಶೇ.21), ಪಶ್ಚಿಮ ಬಂಗಾಳ(ಶೇ.20).

ಅಪ್ರಾಪ್ತರ ವಿವಾಹದಲ್ಲಿ ಲಾಸ್ಟ್‌ 3: ಲಕ್ಷದ್ವೀಪ, ಕೇರಳ(ಶೇ.1), ಪುದುಚೆರಿ, ತಮಿಳುನಾಡು, ನಾಗಾಲ್ಯಾಂಡ್‌(ಶೇ.4), ಕರ್ನಾಟಕ(ಶೇ.5).

ಸಮೀಕ್ಷೆಯ ವಿಶೇಷಗಳು

- 20ರಿಂದ 49 ವರ್ಷದ ಮಹಿಳೆಯ ಮೊದಲ ಮದುವೆಯ ವಯಸ್ಸು 2015ರಲ್ಲಿ 19 ವರ್ಷ ಆಗಿತ್ತು. ಈಗ ಅದು 19.2 ವರ್ಷಕ್ಕೆ ಏರಿಕೆಯಾಗಿದೆ.

- 25ರಿಂದ 49 ವರ್ಷದ ಪುರುಷರ ಮೊದಲ ಮದುವೆಯ ವಯಸ್ಸು 2015ರಲ್ಲಿ 24.5 ವರ್ಷ ಆಗಿತ್ತು. ಈಗ ಅದು 24.9 ವರ್ಷಕ್ಕೆ ಏರಿಕೆಯಾಗಿದೆ.

- 12ನೇ ತರಗತಿ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷಣ ಹೊಂದರುವ ಮಹಿಳೆಯರು ಇತರರಿಗಿಂತ ತಡವಾಗಿ ಮದುವೆಯಾಗುತ್ತಿದ್ದಾರೆ.

ಅಪ್ರಾಪ್ತೆ ಆತ್ಮಹತ್ಯೆ: ಲವ್‌ ಜಿಹಾದ್‌ಗೆ ಬಲಿ ಆರೋಪ

ತಾಲೂಕಿನ ಕಣಿಯೂರು ಎಂಬಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಆತ್ಮೀಕಾ(14) ಎಂಬಾಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಡಿ ಸಾಹುಲ್‌ ಹಮೀದ್‌ ಎಂಬಾತನ ವಿರುದ್ಧ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೊಂದು ವ್ಯವಸ್ಥಿತ ಲವ್‌ ಜಿಹಾದ್‌ ಕೃತ್ಯವಾಗಿದೆ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ವಿಶ್ವಹಿಂದುಪರಿಷತ್‌ ಮುಖಂಡ ಶರಣ್‌ ಪಂಪ್‌ವೆಲ್‌ ಆಗ್ರಹಿಸಿದ್ದಾರೆ.

ಮೂಲತಃ ಸುಳ್ಯ ತಾಲೂಕಿನ ಪಂಜ ನಿವಾಸಿಯಾಗಿರುವ ಆತ್ಮೀಕಾ ಕಣಿಯೂರಲ್ಲಿ ಪೋಷಕರೊಂದಿಗೆ ದಿ.ಸುಲೈಮಾನ್‌ ಹಾಜಿ ಎಂಬುವವರ ಮನೆಯಲ್ಲಿ ಬಾಡಿಗೆಯಿದ್ದಳು. ವಿದ್ಯಾರ್ಥಿನಿ ಸಾಹುಲ್‌ ಹಮೀದ್‌ನನ್ನು ಪ್ರೀತಿಸುತ್ತಿದ್ದು, ಈ ವಿಚಾರ ಮನೆಯವರಿಗೆ ಗೊತ್ತಾಗಿದೆ. ಪೋಷಕರು ಆಕೆಗೆ ಬುದ್ಧಿವಾದ ಹೇಳಿದ್ದು, ಸಾಹುಲ್‌ನನ್ನು ಕರೆದು ಮಗಳ ಸಹವಾಸಕ್ಕೆ ಬರಬೇಡ ಎಂದು ಎಚ್ಚರಿಸಿದ್ದರು. ಆದರೂ ಕೂಡ ಸಾಹುಲ್‌ ಮನೆ ಬಳಿ ಪದೇ ಪದೇ ಬಂದು ತನ್ನ ಜೊತೆ ಬಾ ಎಂದು ಕರೆಯುತ್ತಿದ್ದ, ಬರದಿದ್ದರೆ ಸಾಯಿ ಎಂದಿದ್ದ. ಇದರಿಂದ ಬೇಸರಗೊಂಡು ಆಕೆ ಸಾವನ್ನಪ್ಪಿದ್ದಾಳೆ ಎಂದು ದೂರಲಾಗಿದೆ.