ಝೂನಲ್ಲಿ ಪ್ರಾಣಿಗಳನ್ನು ನೋಡುವಾಗ ಹೃದಯಾಘಾತದಿಂದ ಪತಿ ಸಾವು, 7ನೇ ಮಹಡಿಯಿಂದ ಜಿಗಿದು ಪತ್ನಿ ಆತ್ಮಹತ್ಯೆ!
ಕಳೆದ ವರ್ಷದ ನವೆಂಬರ್ 30 ರಂದು ಮದುವೆಯಾಗಿದ್ದ ಅಭಿಷೇಕ್ ಹಾಗೂ ಅಂಜಲಿ, ಮಂಗಳವಾರ ದೆಹಲಿ ಝೂಗೆ ಭೇಟಿ ನೀಡಿದ್ದರು. ಈ ವೇಳೆ ಈ ಘಟನೆ ಸಂಭವಿಸಿದೆ ಎಂದು ಕುಟುಂಬಸ್ಥರು ತಿಳಿಸಿದ್ದರು.
ನವದೆಹಲಿ (ಫೆ.27): ಹೊಸ ಜೋಡಿ ಮದುವೆಯಾಗಿ ಮೂರು ತಿಂಗಳಷ್ಟೇ ಕಳೆದಿತ್ತಷ್ಟೇ. ಆದರೆ, ಸೋಮವಾರ ದೆಹಲಿಯ ಝೂನಲ್ಲಿ ಪ್ರಾಣಿಗಳನ್ನು ನೋಡಲು ಹೋಗಿದ್ದ ಈ ಜೋಡಿಗೆ ಅಲ್ಲೇ ಜೀವನ ಕೊನೆಯಾಗಿರುವ ದುರಂತ ನಡೆದಿದೆ. 25 ವರ್ಷದ ಅಭಿಷೇಕ್ ಅಹ್ಲುವಾಲಿ ಝೂನಲ್ಲಿಯೇ ಹೃದಯಾಘಾತದಿಂದ ಸಾವು ಕಂಡಿದ್ದರೆ, ಈತನ ಪತ್ನಿ ಅಂಜಲಿ ಕಣ್ಣೆದುರಲ್ಲೇ ಗಂಡನ ಸಾವಿನ ನೋವನ್ನು ತಾಳಲಾರದೇ, ಮನೆಯ 7ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಭಿಷೇಕ್ ಹಾಗೂ ಅಂಜಲಿ ಕಳೆದ ವರ್ಷದ ನವೆಂಬರ್ 30 ರಂದು ವಿವಾಹವಾಗಿದ್ದರು. ಸೋಮವಾರ ಇವರಿಬ್ಬರೂ ದೆಹಲಿಯ ಮೃಗಾಲಯಕ್ಕೆ ಭೇಟಿ ನೀಡುವ ಕಾರ್ಯಕ್ರಮ ಇರಿಸಿಕೊಂಡಿದ್ದರು. ಮೃಗಾಲಯದಲ್ಲಿ ಇದ್ದ ವೇಳೆ, ಅಭಿಷೇಕ್ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ. ಈ ವೇಳೆ ಅಂಜಲಿ, ಅಭಿಷೇಕ್ ಅವರ ಕೆಲ ಸ್ನೇಹಿತರಿಗೆ ಕರೆ ಮಾಡಿ ಸಹಾಯಕ್ಕೆ ಬರುವಂತೆ ಹೇಳಿದ್ದಾರೆ. ಈ ವೇಳೆ ಅಭಿಷೇಕ್ರನ್ನು ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆ ನಂತರ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಕಳಿಸಿಕೊಡಲಾಗಿತ್ತು.
ಆದರೆ, ಸೋಮವಾರ ರಾತ್ರಿಯ ವೇಳೆ ಅಭಿಷೇಕ್ ಸಾವು ಕಂಡಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. ಹೃದಯಾಘಾತ ಸಾವಿಗೆ ಕಾರಣ ಎಂದು ತಿಳಿಸಲಾಗಿತ್ತು. ಹೊಸ ದಂಪತಿಗಳು ವಾಸವಿದ್ದ ಗಾಜಿಯಾಬಾದ್ನ ವೈಶಾಲಿಯಲ್ಲಿರುವ ಅಹ್ಲ್ಕಾನ್ ಅಪಾರ್ಟ್ಮೆಂಟ್ಗೆ ರಾತ್ರಿ 9 ಗಂಟೆಯ ವೇಳೆಗೆ ಅಭಿಷೇಕ್ನ ಶವ ತರಲಾಗಿತ್ತು. ಆದರೆ, ಗಂಡನ ಸಾವಿನ ಆಘಾತವನ್ನು ಸಹಿಸಲಾಗದೆ ಅಂಜಲಿ ತಮ್ಮ ಏಳನೇ ಮಹಡಿಯ ಬಾಲ್ಕನಿಗೆ ತೆರಳಿ ಅಲ್ಲಿಂದಲೇ ಜಿಗಿದಿದ್ದಾಳೆ. ಗಂಭೀರ ಗಾಯಗೊಂಡ ಆಕೆಯನ್ನು ವೈಶಾಲಿಯ ಮ್ಯಾಕ್ಸ್ ಆಸ್ಪತ್ರೆಗೆ ಸಾಗಿಸಲಾಯಿತು. ಮಂಗಳವಾರ ಮುಂಜಾನೆ ಆಕೆಯೂ ಕೊನೆಯುಸಿರೆಳೆದಿದ್ದಾಳೆ.
ಅಭಿಷೇಕ್ರ ಸಂಬಂಧಿಯಾಗಿರುವ ಬಬಿತಾ ಈ ಬಗ್ಗೆ ಮಾತನಾಡಿದ್ದರು, ಶವವನ್ನು ಮನೆಗೆ ತಂದ ಬಳಿಕ ಆಕೆ ನನ್ನ ಪಕ್ಕದಲ್ಲಿಯೇ ಕುಳಿತು ಅಳುತ್ತಿದ್ದಳು. ಈ ಹಂತದಲ್ಲಿ ಹಠಾತ್ ಆಗಿ ಎದ್ದ ಆಕೆ, ಬಾಲ್ಕನಿಯತ್ತ ಓಡಿದಳು. ಈ ವೇಳೆ ನಾನು ಆಕೆ ಅಲ್ಲಿಂದ ಹಾರಬಹುದು ಎಂದು ಊಹೆ ಮಾಡಿದ್ದೆ. ಅದಕ್ಕಾಗಿ ಆಕೆಯ ಹಿಂದೆಯೇ ಓಡಿದ್ದೆ. ಆದರೆ, ನಾನು ಆಕೆಯನ್ನಿ ಹಿಡಿಯುವ ವೇಳೆಗಾಗಲೇ ಆಕೆ ಅಲ್ಲಿಂದ ಹಾರಿದ್ದಳು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕರ ಅಡ್ಡಮತದಾನ, ಹಿಮಾಚಲ ಪ್ರದೇಶ ರಾಜ್ಯಸಭೆ ಚುನಾವಣೆಯಲ್ಲಿ ಅಭಿಷೇಕ್ ಮನು ಸಿಂಘ್ವಿಗೆ ಸೋಲು!
ಅಭಿಷೇಕ್ರ ಇನ್ನೊಬ್ಬ ಸಂಬಂಧಿ ಸಂಜೀವ್ ಮಾತನಾಡಿದ್ದು, ಮೃಗಾಲಯದಿಂದ 20 ಕಿಲೋಮೀಟರ್ ದೂರದಲ್ಲಿರುವ ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ಅಭಿಷೇಕ್ರನ್ನು ಸಾಗಿಸಲಾಗಿತ್ತು. ಅಲ್ಲಿ, ಅಭಿಷೇಕ್ನ ಸ್ನೇಹಿತರು, ಆತನನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲು ಮಾಡಿದ್ದಾಗಿ ತಿಳಿಸಿದರು. ನಾನು ಅಲ್ಲಿಯೂ ಹೋಗಿದ್ದೆ. ವೈದ್ಯರ ಬಳಿಯೂ ಮಾತನಾಡಿದೆ. ಈ ವೇಳೆ ಅವರು ತಮ್ಮ ಎಲ್ಲಾ ಪ್ರಯತ್ನ ಮಾಡಿದರೂ, ಆತನನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
'ಕರ್ಕಶವಾದ ಲೌಡ್ ಸ್ಪೀಕರ್ ಅವನು..' ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಪ್ರಕಾಶ್ ರಾಜ್!